ಒಂದು ಸಾರಿ ಗರುಡನು ವಿಷ್ಣುವಿನ ಬಳಿ ಬಂದು ಪ್ರಭು ಯಾವುದೇ ಜೀವಿಗಳು ಮರಣದಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ ಆದರೆ ಜೀವಿಗಳು ಮರಣಿಸಿದ ನಂತರ ಅದರ ಆತ್ಮ ಏನಾಗುತ್ತದೆ ಎಂದು ಕೇಳಿದ. ಅದಕ್ಕೆ ವಿಷ್ಣು ಭೂಮಿಯಲ್ಲಿರುವ ಪ್ರತಿಯೊಂದು ಜೀವಿಯು ತಮ್ಮ ಪೂರ್ವಜನ್ಮದಲ್ಲಿ ಮಾಡಿದ ಕರ್ಮಗಳನ್ನು ಕಳೆದುಕೊಳ್ಳಲು ಮನುಷ್ಯ, ಪ್ರಾಣಿ, ಪಕ್ಷಿಗಳಾಗಿ, ದುಃಖಕರವಾದ ಜೀವನವನ್ನು ಅನುಭವಿಸಲೆಂದೆ ಭೂಮಿಯಲ್ಲಿ ಜನಿಸುತ್ತಾರೆ.
ಜನಿಸಿದ ಮೇಲೆ ಫಲಾಪೇಕ್ಷೆ ಇಲ್ಲದೆ ಒಳ್ಳೆಯ ಕರ್ಮಗಳನ್ನು ಮಾಡಿ ಸಂಚಿತಕರ್ಮಗಳನ್ನು ಕಳೆದುಕೊಳ್ಳಬೇಕು. ಕೆಟ್ಟ ಕರ್ಮಗಳನ್ನು ಮಾಡಿದರೆ ಮತ್ತಷ್ಟು ಸಂಚಿತ ಕರ್ಮಗಳನ್ನು ಹೆಚ್ಚಿಸಿಕೊಳ್ಳುತ್ತಾರೆ. ಇದನ್ನು ಕೇಳಿದ ಗರುಡನು ಒಳ್ಳೆಯ ಕರ್ಮ, ಕೆಟ್ಟ ಕರ್ಮ, ಗೊತ್ತಾಗುವುದು ಹೇಗೆ ಪ್ರಭು, ಎಂದು ಅನುಮಾನ ವ್ಯಕ್ತಪಡಿಸಿದನು.
ಗರುಡನಿಗೆ, ಭೂಲೋಕದ ಕಡೆ ನೋಡಲು ವಿಷ್ಣು ಹೇಳಿದನು. ಇಬ್ಬರು ಗಂಧರ್ವ ಕನ್ಯೆಯರನ್ನು ಭೂಲೋಕಕ್ಕೆ ಕಳಿಸಿದನು. ಅವರಿಬ್ಬರೂ ಬಡ ಕುಟುಂಬದ ತಾಯಿ ಮಗಳಂತೆ ಮಾರ್ಪಾಡು ಹೊಂದಿ, ಎಲ್ಲಾ ಕಡೆಯು ಓಡಾಡಿಕೊಂಡು ರಾತ್ರಿ ಹೊತ್ತಿಗೆ ಒಬ್ಬ ಶ್ರೀಮಂತನ ಮನೆಗೆ ಹೋದರು.
ಬಹಳ ದೊಡ್ಡ ಬಂಗಲೆ, ಬಾಗಿಲಲ್ಲಿ ನಿಂತು, ಸ್ವಾಮಿ ನಮ್ಮೂರಿಗೆ ಹೋಗಲು ಬಹಳ ಕತ್ತಲಾಯಿತು. ಈ ಒಂದು ರಾತ್ರಿ ಇಲ್ಲಿ ಉಳಿಯಲು ಅವಕಾಶ ಕೊಡಿ ಬೆಳಗ್ಗೆ ಎದ್ದು ಹೋಗುತ್ತೇವೆ ಎಂದರು. ಆತ ಇವರನ್ನು ನೋಡಿ ಸಿಡಿಗುಟ್ಟುತ್ತಾ ಬೀದಿ ಬಿಕಾರಿ ಗಳಿಗೆಲ್ಲ ಜಾಗ ಕೊಡಲು ಇದೇನು ಧರ್ಮ ಛತ್ರವಲ್ಲ ಎಂದನು. ಇನ್ನಿಲ್ಲದಂತೆ ಬೇಡಿಕೊಂಡಾಗ, ಹೆಣ್ಣುಮಕ್ಕಳಿದ್ದು ಬಿಟ್ಟಿದ್ದೇನೆ ಎನ್ನುತ್ತಾ, ತನ್ನ ಮನೆಯ ಹಿಂಭಾಗದಲ್ಲಿ ಯಾವುದೋ ಕಾಲದಲ್ಲಿ ಕಟ್ಟಿದ ಒಂದು ಹಳೆಯ ಮನೆಯಲ್ಲಿ ಮಲಗಿಕೊಳ್ಳಲು ಹೇಳಿದ. ಅಲ್ಲಿ ಕಸ ಹೊಡೆಯದೆ ಯಾವ ಕಾಲವಾಗಿತ್ತೋ, ಎಲ್ಲಾ ಕಡೆ ಬಲೆ ಕಟ್ಟಿತ್ತು, ಧೂಳಿನ ವಾಸನೆ, ಕಾಲಕೆಳೆಗೆ ಕಸ, ಇವುಗಳ ಮಧ್ಯೆ ಒಂದು ಜಾಗ ಮಾಡಿಕೊಂಡು ಕುಳಿತರು.
ತಾಯಿ ದೇವತೆ ಕುಳಿತು ಒರಗಿದ್ದ ಗೋಡೆಯ ಮೇಲಿನ ಮಣ್ಣು ಬಿದ್ದು ಇಲಿಗಳ ಬಿಲದಂತೆ ಇತ್ತು. ಆಕೆ ಅಂಗಳದಿಂದ ಮಣ್ಣು ತಂದು ನೀರು ಹಾಕಿ ಕಲಸಿ ಗೋಡೆಗೆ ಮೆತ್ತಿ ಕಲ್ಲಿನಿಂದ ತಿಕ್ಕಿ ತೂತು ಇತ್ತು ಎಂಬುದು ಗೊತ್ತಾಗದಂತೆ ಮುಚ್ಚಿದಳು.
ಇದನ್ನು ನೋಡಿದ ಮಗಳು ದೇವತೆ, ಕಷ್ಟಪಟ್ಟು ಅದನ್ನು ಏಕೆ ಮುಚ್ಚಿದೆ, ಅಷ್ಟು ದೊಡ್ಡ ದೆವ್ವದಂತ ಬಂಗಲೆಯಿದ್ದು ಆ ಸಾಹುಕಾರ ನಮಗೆ ಎಷ್ಟು ಕೊಳಕು ಜಾಗ ಕೊಟ್ಟಿದ್ದಾನೆ ಎಂದು ಸಿಟ್ಟಿನಿಂದ ಹೇಳಿದಳು. ತಾಯಿ ದೇವತೆ ನೋಡು ಮಗಳೇ ತರಾತುರಿಯಲ್ಲಿ ಏನೇನೋ ಹೇಳಬೇಡ ಇದರ ಮರ್ಮ ಬೇರೆ ಇದೆ. ನಾನು ಮಣ್ಣು ಮುಚ್ಚಿದ ಜಾಗದಲ್ಲಿ ಹಿಂದಿನವರು ಮುಚ್ಚಿಟ್ಟ ರಾಮು ಟಂಕಿ ನಾಣ್ಯ ತುಂಬಿದ ತಪ್ಪಲೆ ಇದೆ. ಅದು ದುರಹಂಕಾರಿ ಸಿರಿವಂತನಿಗೆ ಸೇರಬಾರದು ಅದಕ್ಕೆ ಹೀಗೆ ಮಾಡಿದೆ ಎಂದಾಗ ಮಗಳು ದೇವತೆಗೆ ಸಂತೋಷವಾಯಿತು.
ಮರುದಿನ ಸಾಹುಕಾರನ ಮನೆಯಿಂದ ಹೊರಟು ಹೊರಗಡೆ ಎಲ್ಲಾ ಸುತ್ತಾಡಿಕೊಂಡು ರಾತ್ರಿ ಉಳಿಯಲು ಒಂದು ಹಳ್ಳಿಗೆ ಬಡವನ ಮನೆಗೆ ಬಂದರು. ಮನೆ ಮುಂದೆ ನಿಂತು ತಾಯಿ ಮಗಳಿಬ್ಬರು ಅಮ್ಮ ಕತ್ತಲಾಗಿದೆ ಈ ಒಂದು ರಾತ್ರಿ ಉಳಿಯ ಬಹುದೇ ಬೆಳಗ್ಗೆ ಹೊರಟುಬಿಡುತ್ತೇನೆ ಎಂದರು.
ಬಡವನ ಹೆಂಡತಿ, ಅದಕ್ಕೆನಂತೆ ಒಳಗೆ ಬನ್ನಿ ಎಷ್ಟು ದಿನ ಬೇಕಾದರೂ ಇರಿ. ಜಾಗ ಮಾತ್ರ ಇಷ್ಟೆ ಇದೆ ಇದರಲ್ಲೇ ಎಲ್ಲರೂ ಸುಧಾರಿಸಿಕೊಂಡು ಮಲಗಬೇಕು ಎಂದರು. ಅವರಿಬ್ಬರೂ ಒಳಗೆ ಕರೆದು ಕೂರಿಸಿ ರಾತ್ರಿಗೆ ಮಾಡಿದ ನುಚ್ಚಿನ ಗಂಜಿಯಲ್ಲಿ ಎಲ್ಲರೂ ಹಂಚಿ ತಿಂದರು. ಇರುವ ಕಂಬಳಿ ಹೊದಿಕೆಗಳನ್ನು ಅವರಿಬ್ಬರಿಗೆ ಹಾಸಿಕೊಟ್ಟು ಮಲಗಿದರು. ಆ ರಾತ್ರಿ ಭಾರಿ ಮಳೆ ಗುಡುಗು ಮಿಂಚು, ಅಬ್ಬರದ ಗಾಳಿ, ಗುಡಿಸಲೆ ಹಾರು ಹೋಗುವಂತ ಮಳೆ, ದೊಡ್ಡ ಶಬ್ದದಿಂದ ಬಂದ ಗುಡುಗು ರೈತನ ಮನೆ ಹಿತ್ತಲಲ್ಲಿ ಮರದ ತುಂಬಾ ಮಾವಿನಹಣ್ಣು ತುಂಬಿದ್ದ ಮರಕ್ಕೆ ಬಡಿದು ಆ ಕುಟುಂಬದ ಜೀವನಕ್ಕೆ ಆಧಾರವಾಗಿದ್ದ ಮಾವಿನ ಹಣ್ಣಿನ ಮರ ಸಿಡಿಲಿಗೆ ಸುಟ್ಟುಹೋಯಿತು.
ರೈತ ಕಂಗಾಲಾಗಿ ಅಳುತ್ತಾ ಕುಳಿತಿದ್ದ. ಆಗ ಮಗಳು ದೇವತೆ, ತಾಯಿಗೆ ಇದೆಂತಹ ಅನ್ಯಾಯ, ನಮಗೆ ಆಶ್ರಯ ಕೊಟ್ಟವರಿಗೆ ಜೀವನಾಧಾರವಾಗಿದ್ದ ಮಾವಿನ ಹಣ್ಣಿನ ಮರ ಸಿಡಿಲು ಹೊಡೆದು ಸುಟ್ಟು ಹೋಗಲಿ ಏಕೆ ಬಿಟ್ಟೆ. ಎಷ್ಟೊಂದು ಬಳ್ಳೆ ಮನುಷ್ಯ ಈ ರೀತಿ ಆಗದೇ ಇರುವ ಹಾಗೆ ನೀನೇ ನೋಡಿಕೊಳ್ಳಬಹುದಿತ್ತಲ್ಲ ಎಂದು ದೇವತೆಗೆ ಮಗಳು ಕೇಳಿದಳು.
ಕಂಡಿದ್ದೆಲ್ಲಾ ನಿಜ ಎಂದು ತಿಳಿಯಬೇಡ. ಈ ಮನೆಯಲ್ಲಿ ರೈತನ ಹೆಂಡತಿಯ ಆಯಸ್ಸು ಮುಗಿದಿತ್ತು. ಅವಳ ಜೀವ ತೆಗೆದುಕೊಂಡು ಹೋಗಲು ಮೃತ್ಯು ದೇವತೆ ಬಂದಿದ್ದಳು. ನಾನು ಅವಳನ್ನು ತಡೆದು ಮನೆಗೆ ಇವಳೆ ಆಧಾರ ಕರೆದುಕೊಂಡು ಹೋದರೆ ಈ ಸಂಸಾರ ನುಚ್ಚುನೂರಾಗುತ್ತದೆ ಎಂದು ಹೇಳಿದಾಗ ಆಕೆ ಅವಳ ಜೀವವನ್ನು ಬಿಟ್ಟು ತುಂಬಿದ ಮಾವಿನ ಹಣ್ಣಿನ ಮರಕ್ಕೆ ಸಿಡಿಲು ಹೊಡೆಸಿ ಸುಟ್ಟು ಹಾಕಿದಳು.
ಜೀವ ಹೋದರೆ ಮತ್ತೆ ಬರುವುದಿಲ್ಲ. ಮರ ಬಿದ್ದರೆ ಇನ್ನೊಂದು ಮರ ನೆಟ್ಟು ಬೆಳೆಸಬಹುದು ಎಂಬುದನ್ನು ಕೇಳಿದ ಮೇಲೆ ಇಬ್ಬರು ನೆಮ್ಮದಿಯಿಂದ ಮಲಗಿದರು.
ಇದು ಕಥೆಯಾಗಿರಬಹುದು. ಆದರೆ ಮನುಷ್ಯನಿಗೆ ಬೆಟ್ಟದಂತಹ ಕಷ್ಟಗಳು ಬಂದಿರುತ್ತದೆ. ಒಳ್ಳೆಯ ಕರ್ಮವನ್ನು ಮಾಡಿದಾಗ ಬೆಟ್ಟದಂತಹ ಕಷ್ಟ ಕರಗಿ ಸ್ವಲ್ಪದರಲ್ಲಿ ಅದು ಪಾರಾಗುವಂತೆ ಮಾಡುತ್ತದೆ. ಎಲ್ಲರೂ ಕೇಳಿರುತ್ತಾರೆ. ಕೊಟ್ಟಿಗೆಯಲ್ಲಿರುವ ಹಸುಗಳು ಮನೆಯ ಯಜಮಾನನನ್ನು ಕಾಯುತ್ತವೆ.
ನಾಯಿ ಮನೆಯವರ ರಕ್ಷಣೆ ಮಾಡುತ್ತದೆ. ಮನೆಯ ಮುಂದೆ ಫಲಬಿಟ್ಟ ಬಾಳೆ ಮರ, ತೆಂಗಿನ ಮರಗಳಿಗೆ ಸಿಡಿಲು ಹೊಡೆದರೆ, ಮುರಿದು ಬಿದ್ದರೆ, ಮನೆ ಒಳಗೆ ಆಗಬೇಕಾದ ಸಾವು-ನೋವುಗಳಂಥ ಕಷ್ಟಗಳನ್ನು ತೆಗೆದುಕೊಂಡು ಮನೆ ಯಜಮಾನನ್ನು ಪಾರುಮಾಡುತ್ತವೆ ಎಂದು ಹಿರಿಯರು ಹೇಳುವುದನ್ನು ಕೇಳಿರುತ್ತೇವೆ.
ಗರುಡನಿಗೆ ಇವುಗಳನ್ನು ತೋರಿಸಿದ ವಿಷ್ಣು, ನೋಡಿದೆಯಾ ಮಾಡಿದ ಕರ್ಮದ ವಿಷಯದಲ್ಲಿ ಯೋಚನೆ ಮಾಡಬಾರದು. ಸಂಚಿತ ಕರ್ಮದ ಫಲ ತೀರ ಬೇಕಾದರೆ, ಫಲಾಪೇಕ್ಷೆಯಿಲ್ಲದೆ ಕರ್ಮಗಳನ್ನು ಮಾಡಬೇಕು. ಆಗಾಗ ಸ್ವಲ್ಪ ಸ್ವಲ್ಪವೇ ಪಾಪಕರ್ಮಗಳು ಕಳೆದು, ದೊಡ್ಡ ದೊಡ್ಡ ಕಷ್ಟಗಳಿಂದ ನಮ್ಮನ್ನು ಪಾರು ಮಾಡುತ್ತವೆ. ಸುಖಭೋಗಗಳು ಅವರವರ ಪ್ರಾಪ್ತಿ ಇದ್ದಷ್ಟು ಲಭಿಸುತ್ತದೆ ಎಂದು ಗರುಡನಿಗೆ ಉದಾಹರಣೆ ಸಹಿತ ತೋರಿಸಿದನು.
ಬರಹ ಕೃಪೆ: ಆಶಾ ನಾಗಭೂಷಣ. ಸಂಗ್ರಹ ವರದಿ: ಗಣೇಶ್.ಎಸ್., ದೊಡ್ಡಬಳ್ಳಾಪುರ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....
Latest News
crime
crime
politics
literature
literature
literature
education
education
crime
politics
crime
health
agriculture
politics
literature
literature
literature
literature
politics
politics
crime
politics
crime
literature
crime
literature
literature
crime
crime
politics