ದೊಡ್ಡಬಳ್ಳಾಪುರ ನಗರಸಭೆ ಬಜೆಟ್ ಕುರಿತ ಸಾರ್ವಜನಿಕ ಸಮಾಲೋಚನೆ ಸಭೆ: 1.50 ಕೋಟಿ ರೂ ಉಳಿತಾಯದ ಕರಡು ಬಜೆಟ್..!
ದೊಡ್ಡಬಳ್ಳಾಪುರ ನಗರಸಭೆ ಬಜೆಟ್ ಕುರಿತ ಸಾರ್ವಜನಿಕ ಸಮಾಲೋಚನೆ ಸಭೆ: 1.50 ಕೋಟಿ ರೂ ಉಳಿತಾಯದ ಕರಡು ಬಜೆಟ್..!

ದೊಡ್ಡಬಳ್ಳಾಪುರ, (ಫೆ.06): ನಗರಸಭೆ ವತಿಯಿಂದ 2023-24ನೇ ಸಾಲಿನ ಆಯ-ವ್ಯಯದ ಸಾರ್ವಜನಿಕ ಸಮಾಲೋಚನೆಯ ದ್ವಿತೀಯ ಸಭೆ ನಗರದ ಡಾ.ರಾಜ್‍ಕುಮಾರ್ ಕಲಾ ಮಂದಿರದಲ್ಲಿ ನಗರಸಭೆ ಅಧ್ಯಕ್ಷೆ ಎಸ್.ಸುಧಾರಾಣಿ ಲಕ್ಷ್ಮೀನಾರಾಯಣ್ ಅಧ್ಯಕ್ಷತೆಯಲ್ಲಿ ನಡೆಯಿತು. 

ಸಭೆಯಲ್ಲಿ ಮಾತನಾಡಿದ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಸಾರ್ವಜನಿಕರು, ಬಜೆಟ್ ಸಭೆಯಲ್ಲಿ ನಗರಸಭಾ ಸದಸ್ಯರು ಭಾಗವಹಿಸಿದರೆ, ಬಜೆಟ್‍ನಲ್ಲಿ ಪ್ರಸ್ತಾಪ ಮಾಡುವ ವಿಷಯಗಳಿಗೆ ಸದಸ್ಯರ ಪಾಲ್ಗೊಳ್ಳುವಿಕೆಗೆ ಸಹಕಾರಿಯಾಗಲಿದೆ. ಬಜೆಟ್ ಸಭೆಗೆ ಸಂಘ ಸಂಸ್ಥೆಗಳ ಹಾಗೂ ಸಮಾಜದ ಗಣ್ಯರನ್ನು ಆಹ್ವಾನಿಸುವುದರ ಜೊತೆಗೆ ನಾಗರಿಕರಿಗೂ ಸಲಹೆ ಸೂಚನೆಗಳನ್ನು ನೀಡಲು ನಗರಸಭೆಯಲ್ಲಿ ಸಲಹಾ ಪಟ್ಟಿಗೆ, ಅಥವಾ, ಇ-ಮೇಲ್, ವಾಟ್ಸ್ ಆ್ಯಪ್ ಮೊದಲಾದ ಜಾಲತಾಣಗಳ ಮೂಲಕ ಅವಕಾಶ ಮಾಡಿಕೊಡುವಂತೆ ಸಲಹೆ ನೀಡಿದರು.

ಜ.3 ರಂದು ನಡೆದ ಸಭೆಯ ನಡಾವಳಿಗಳನ್ನು ಮಂಡಿಸಿದ ನಗರಸಭೆ ಮುಖ್ಯ ಲೆಕ್ಕಾಧಿಕಾರಿ ಎನ್.ನಂದೀಶ್, ಹಿಂದಿನ ನಡಾವಳಿಗಳ ಬಗ್ಗೆ ಕೈಗೊಂಡಿರುವ ತೀರ್ಮಾನಗಳನ್ನು ತಿಳಿಸಿದರು.

ಸಲಹೆಗಳನ್ನು ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತರುವುದು. ಕೆಲವು ಸಲಹೆಗಳನ್ನು ಕೌನ್ಸಿಲ್ ಸಭೆಯಲ್ಲಿ ತೀರ್ಮಾನ ಕೈಗೊಂಡಿರುವುದು ಹಾಗೂ ಆಯವ್ಯಯದಲ್ಲಿ ಅಳವಡಿಸಿಕೊಂಡಿರುವ ಕುರಿತು ಸಭೆಗೆ ಮಾಹಿತಿ ನೀಡಿದರು.

1.5ಕೋಟಿ ರೂ ಉಳಿತಾಯದ ಕರಡು ಬಜೆಟ್: ಬಜೆಟ್ ವಿವರ ಮಂಡಿಸಿದ ಅವರು ನಗರಸಭೆಯ 2022-23ನೇ ಸಾಲಿನ ಪರಿಷ್ಕೃತ ಅಂದಾಜು ಆಯವ್ಯಯದಲ್ಲಿ ಆದಾಯ 59.07 ಕೋಟಿ ರೂ ನಿರೀಕ್ಷಿಸಲಾಗಿದ್ದು, ಇದರಲ್ಲಿ ಖರ್ಚು 48.10ಕೋಟಿ ರೂಗಳಾಗಿದೆ. 10.97ಕೋಟಿ ರೂ ಉಳಿತಾಯ ನಿರೀಕ್ಷಿಸಲಾಗಿದೆ. 2023-24ನೇ ಸಾಲಿಗೆ  ಆದಾಯ 70.19 ಕೋಟಿ ರೂ ನಿರೀಕ್ಷಿಸಲಾಗಿದ್ದು, ಇದರಲ್ಲಿ ಖರ್ಚು 68.69 ಕೋಟಿ ರೂಗಳಾಗಿದೆ. 1.5ಕೋಟಿ ರೂ ಉಳಿತಾಯ ನಿರೀಕ್ಷಿಸಲಾಗಿದೆ.

2021-22ನೇ ಸಾಲಿನ ವಾಸ್ತವಿಕ ಲೆಕ್ಕದಲ್ಲಿ  ಆದಾಯ 47.91 ಕೋಟಿ ರೂ ಇದರಲ್ಲಿ ಖರ್ಚು 31.18 ಕೋಟಿ ರೂಗಳಾಗಿದೆ. 16.72 ಕೋಟಿ ರೂ ಉಳಿತಾಯವಾಗಿದೆ.

2022ರ ಡಿಸೆಂಬರ್ ತಿಂಗಳ ಅಂತ್ಯದವರೆಗೆ 444.16ಕೋಟಿ ರೂ ಕ್ರೋಡೀಕರಣವಾಗಿದ್ದು, ಇದರಲ್ಲಿ 31.23ಕೋಟಿ ರೂ ಖರ್ಚಾಗಿದೆ. ಡಿಸೆಂಬರ್ ಅಂತ್ಯಕ್ಕೆ ಉಳಿಕೆ 112.92ಕೋಟಿ ರೂ ಆಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಮಾತನಾಡಿದ ಸಂಘಟನೆಗಳ ಮುಖಂಡರು, ನಗರದ ಸ್ವಚ್ಛತೆ, ಪರಿಸರ, ರಸ್ತೆ ಅಗಲೀಕರಣ, ಸಿಸಿಟಿವಿ ಅಳವಡಿಕೆ ಭದ್ರತೆ ಮೊದಲಾದ ವಿಚಾರಗಳಲ್ಲಿ ಸಾರ್ವಜನಿಕರ ಸಲಹೆಗಳನ್ನು ನಗರಸಭೆ ಗಂಭೀರವಾಗಿ ಪರಿಗಣಿಸಬೇಕಿದೆ. ಜೀವ ವೈವಿದ್ಯಕ್ಕೆ ಸಿಗುವ ಅನುನಾನಗಳನ್ನು ಬಳಸಿಕೊಳ್ಳಬೇಕಿದೆ. ನಗರಸಭೆಗೆ ಬರುವ ಆದಾಯ ಮೂಲಗಳನ್ನು ನಿರ್ಲಕ್ಷಿಸದೇ ಸಮರ್ಪಕವಾಗಿ ಬಳಸಿಕೊಳ್ಳಬೇಕಿದೆ. ನಗರದಲ್ಲಿ ಎಲ್ಲಂದರಲ್ಲಿ ಬಿಸಾಡುತ್ತಿರುವ ಕಸದ ನಿರ್ವಹಣೆಗೆ ಹೆಚ್ಚಿನ ಗಮನ ಹರಿಸಬೇಕಿದೆ.

ನಾಗರಿಕರಿಂದ ನಗರಸಭೆಗೆ ಗ್ರಂಥಾಲಯ, ಆರೋಗ್ಯ, ಬಿಕ್ಷುಕರು, ಸಾರಿಗೆ ಮೊದಲಾದ ಕರವನ್ನು ತೆರಿಗೆಯೊಂದಿಗೆ ಕಟ್ಟಿಸಿಕೊಂಡು ಸಂಬಂದಿಸಿದ ಇಲಾಖೆಗೆ ನೀಡಲಾಗುತ್ತಿದೆ. ಆದರೆ ಆಯಾ ಇಲಾಖೆಗಳಿಂದ ನಗರಸಭೆ ವ್ಯಾಪ್ತಿಯಲ್ಲಿ ಯಾವುದೇ ಪ್ರಯೋಜನವಾಗುತ್ತಿಲ್ಲ.

ಬಿಕ್ಷಕರ ಕರ ಕಟ್ಟಿಸಿಕೊಳ್ಳುವ ಇಲಾಖೆ, ಬಿಕ್ಷಕರ ಪುನರ್ವಸತಿಗಾಗಿ ನಗರಸಭೆ ವ್ಯಾಪ್ತಿಯಲ್ಲಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಈ ಬಗ್ಗೆ ಗಮನ ಹರಿಸಬೇಕಿದೆ ಎಂದರು.

ನಗರಸಭೆ ಸ್ವತ್ತುಗಳು ಖಾಸಗಿಯವರ ಪಾಲಾಗುವುದನ್ನು ತಡೆಗಟ್ಟಬೇಕಿದೆ. ಎಲ್ಲರಂದರಲ್ಲಿ ಹಾಕುವ ಪ್ಲಕ್ಸ್ ಬ್ಯಾನರ್‍ಗಳಿಗೆ ಶುಲ್ಕ ವಿಸಬೇಕು. ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಬೇಕು. ಸಾರ್ವಜನಿಕರು ಎಲ್ಲೆಂದರಲ್ಲಿ ಮೂತ್ರ ವಿಸರ್ಜಿಸುವಂತಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಶೌಚಾಲಯ ನಿರ್ಮಾಣ ಮಾಡಬೇಕಿದೆ. ಇವುಗಳ ನಿರ್ವಹಣೆ ದುರಸ್ಥಿಗೆ ಅಗತ್ಯ ಹಣವನ್ನು ಬಜೆಟ್‍ನಲ್ಲಿ ತೆಗೆದಿರಿಸಬೇಕು. ಮನೆ, ಕಟ್ಟಡ ಪರವಾನಗಿ ನೀಡುವಾಗ ಮಳೆ ನೀರು ಕೊಯ್ಲು ಕಡ್ಡಾಯ ಮಾಡಬೇಕು. ನಗರದ ಕಲ್ಯಾಣಿಗಳ ಸ್ವಚ್ಛತೆ, ಪುನಶ್ಚೇತನಕ್ಕೆ ಬಜೆಟ್‍ನಲ್ಲಿ ಹಣ ನೀಡಬೇಕು ಎಂದು ಸಲಹೆ ನೀಡಿದರು.

ಈ ಕುರಿತು ಪ್ರತಿಕ್ರಿಯಿಸಿದ ಪೌರಾಯುಕ್ತ ಕೆ.ಜಿ.ಶಿವಶಂಕರ್, ಸ್ವಚ್ಛತೆ ಕುರಿತಾಗಿ ಜಾಗೃತಿ ಮೂಡಿಸಲಾಗುತ್ತಿದೆ. ನಗರದ ಉದ್ಯಾನವನಗಳನ್ನು ಸೂಕ್ತವಾಗಿ ನಿರ್ವಹಿಸಲಾಗುವುದು. ಮುಂದಿನ ಬಾರಿಯಿಂದ ನಾಗರಿಕರ ಸಲಹೆ ಪಡೆಯಲು ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು. ವಿವಿಧ ಇಲಾಖೆಗಳು ನಗರಸಭೆ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾಗಿರುವ ಕ್ರಮಗಳ ಕುರಿತು ಮನವರಿಕೆ ಮಾಡಲಾಗುವುದು. ನಾಗರಿಕರ ಸಲಹೆಗಳನ್ನು ಅಳವಡಿಸಿಕೊಳ್ಳಲು ಕ್ರಮ ವಹಿಸಲಾಗುವುದು ಎಂದರು.

ನಗರಸಭೆ ಅಧ್ಯಕ್ಷೆ ಎಸ್.ಸುಧಾರಾಣಿ ಲಕ್ಷ್ಮೀನಾರಾಯಣ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷೆ ಆದಿಲಕ್ಷ್ಮೀ, ನಗರಸಭೆ ಹಿರಿಯ ಸದಸ್ಯ ಟಿ.ಎನ್.ಪ್ರಭುದೇವ್, ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಸಾರ್ವಜನಿಕರು ಭಾಗವಹಿಸಿದ್ದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....<!--