ದೆಹಲಿ: ರಾಷ್ಟ್ರ ರಾಜಧಾನಿ ವಲಯದಲ್ಲಿ ವಾಯುಮಾಲಿನ್ಯ (Air Pollution) ಅಪಾಯಕಾರಿ ಮಟ್ಟ ಮುಟ್ಟಿರುವುದರಿಂದ ಕಚೇರಿ ನೌಕರರ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಉಂಟಾಗುತ್ತಿದೆ.
ಹಾಗಾಗಿ, ಎಲ್ಲಾ ಸರಕಾರಿ ಕಚೇರಿಗಳಲ್ಲಿ ಕೆಲಸದ ಸಮಯ ಕಡಿಮೆ ಮಾಡಬೇಕಿದೆ. ವಾಯು ಶುದ್ದೀಕರಣ ಯಂತ್ರಗಳನ್ನು ಕಚೇರಿಗಳಲ್ಲಿ ಅಳವಡಿಸಬೇಕಿದೆ.
ವಯಸ್ಸಿನಲ್ಲಿ ಹಿರಿಯರಾದ ಸಿಬ್ಬಂದಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕಿದೆ ಎಂದು ಕೇಂದ್ರ ಸಚಿವಾಲಯ ಸೇವೆ(ಸಿಎಸ್ ಎಸ್) ಪ್ರತಿನಿಧಿಸುವ ಸಂಸ್ಥೆ ಕೇಂದ್ರ ಸರಕಾರದ ಸಿಬ್ಬಂದಿ ಇಲಾಖೆಗೆ ಸೋಮವಾರ ಪತ್ರ ಬರೆದು ಮನವಿ ಮಾಡಿದೆ.
ವಿಶೇಷವಾಗಿ ಸರಕಾರಿ ಸೇವೆಗಳಲ್ಲಿ ತೊಡಗಿರುವವರ ಯೋಗಕ್ಷೇಮ ಖಚಿತಪಡಿಸಿಕೊಳ್ಳಲು ತುರ್ತುಕ್ರಮಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯವಾಗಿದೆ.
ನೌಕರರು, ಅವರ ಕುಟುಂಬದವರಲ್ಲಿ ಉಸಿರಾಟದ ತೊಂದರೆ, ಇತರೆ ಆರೋಗ್ಯ ಸಮಸ್ಯೆಗಳ ಉಲ್ಬಣಕ್ಕೆ ಕಾರಣವಾಗುತ್ತದೆ ಎಂದು ಸಿಎಸ್ಎಸ್ ಫೋರಂ ಪ್ರಧಾನ ಕಾರ್ಯದರ್ಶಿ ಅಶುತೋಷ್ ಮಿಶ್ರಾ ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.