ಒಂದು ಊರಿನಲ್ಲಿ ಎರಡು ನಾಯಿಗಳು ತಾವು ಒಳ್ಳೆಯ ಗೆಳೆಯರೆಂದು ಅಂದುಕೊಂಡಿದ್ದವು. ಒಂದು ಬಿಳಿ ಬಣ್ಣದ್ದು, ಬಿಳಿಯ, ಇನ್ನೊಂದು ಕಪ್ಪು ಬಣ್ಣದ ಕರಿಯ. ಒಂದು ದಿನ ಕರಿಯ ಮತ್ತು ಬಿಳಿಯ ಎರಡೂ ಸೇರಿ ಊರ ಹೊರತನಕ ಬಂದು ಬಿಟ್ಟವು. ಚೆಂದವಾಗಿ ಆಟವಾಡುತ್ತಾ ಮೈಮರೆತಿದ್ದವು.
ಆಗ ಹತ್ತಿರದ ಪೊದೆಯಲ್ಲಿ ಸದ್ದಾಗಿ ಅವುಗಳಲ್ಲಿನ ಬೇಟೆಗಾರ ಜಾಗ್ರತನಾದ. ಒಮ್ಮೆಲೇ ಪೊದೆಯತ್ತ ದಾಳಿ ಮಾಡಿದರೆ ಸಿಕ್ಕಿತೊಂದು ಕಾಡುಕೋಳಿ.
ಒಂದೇ ಹಕ್ಕಿ ಎರಡೂ ನಾಯಿಗಳ ಬಾಯಿಯಲ್ಲಿ. ಅದು ತನ್ನ ಬೇಟೆ ಎಂದು ಎರಡೂ ಕಿತ್ತಾಡುತ್ತಿದ್ದಾಗ ನಡುವೆ ಬಂತೊಂದು ಚಿರತೆ! ಇವುಗಳು ಕುಂಯ್ ಕುಂಯ್ ಎಂದು ದೂರ ಓಡಿ ಹೋಗಲು ಕೋಳಿ ಚಿರತೆಯ ಪಾಲಾಯ್ತು.
‘ಹೀಗಾಗಲು ನೀನೇ ಕಾರಣ’ ಅಂತ ಒಂದಕ್ಕೊಂದು ದೋಷಾರೋಪಣೆ ಮಾಡಿ ಇನ್ನು ಮೇಲೆ ಬೇಟೆಯನ್ನು ಜಗಳಾಡದೆ ಹಂಚಿಕೊಂಡು ತಿನ್ನೋಣ ಎಂದು ಒಪ್ಪಂದ ಮಾಡಿಕೊಂಡವು.
ಮತ್ತೆ ಗೆಳೆತನದಾಟ ಮುಂದುವರಿದಿದ್ದಾಗ ಎದುರಿಂದ ಹಾದು ಹೋಗಿತ್ತೊಂದು ಮೊಲ. ಎರಡೂ ನಾಯಿಗಳು ಸೇರಿ ಆಕ್ರಮಣ ಮಾಡಲು ಮೊಲ ತಪ್ಪಿಸಿಕೊಳ್ಳುವುದುಂಟೆ? ಅವುಗಳ ಬಾಯಿಗೆ ಸಿಕ್ಕಿ ಸತ್ತೇ ಹೋಯಿತು.
ಈಗ ಅವುಗಳಿಗೆ ಒಪ್ಪಂದ ಮರೆತು ಹೋಯಿತು. ಮತ್ತೆ ಬೇಟೆ ‘ನನ್ನದು ತನ್ನದು’ ಎಂದು ಯುದ್ಧ ಆರಂಭ ಮಾಡಿದವು. ಇತ್ತ ಕಳ್ಳ ನರಿಯೊಂದು ಬಂದು ಸತ್ತ ಮೊಲವನ್ನು ಎತ್ತಿಕೊಂಡು ಸದ್ದಿಲ್ಲದೆ ನಡೆಯಿತು.
ನಾಯಿಗಳು ಕದನದಲ್ಲಿ ಬಳಲಿ ‘ಇಬ್ಬರೂ ಮೊಲವನ್ನು ಕಚ್ಚಿ ಎಳೆಯುವ. ನಿನಗೆ ಸಿಕ್ಕಿದ್ದು ನಿನಗೆ, ನನ್ನೆಡೆ ಉಳಿದದ್ದು ನನಗೆ’ ಎಂದು ಮರು ಒಪ್ಪಂದ ಮಾಡಿಕೊಂಡು ಏದುಸಿರು ಬಿಡುತ್ತಾ ಬಂದು ನೋಡಿದರೆ ಅಲ್ಲೇನಿದೆ?
‘ಅದಕ್ಕೇ ಹೇಳ್ತಾರೆ ನಮ್ಮದು ನಾಯಿ ಬುದ್ದಿ ಅಂತ. ಹಂಚಿ ತಿನ್ನುವ ಗುಣವೇ ನಮ್ಮಲ್ಲಿಲ್ಲ’ ಎನ್ನುತ್ತಾ, ಮೈಮೇಲಿನ ಗಾಯಗಳನ್ನು ನೆಕ್ಕಿಕೊಳ್ಳುತ್ತಾ ಮನೆ ಕಡೆ ಹೆಜ್ಜೆ ಹಾಕಿದವು.
ಕೃಪೆ: ಸಾಮಾಜಿಕ ಜಾಲತಾಣ (ಲೇಖಕರ ಮಾಹಿತಿ ಲಭ್ಯವಿಲ್ಲ)