‘ಲಕ್ಷ್ಮಿ’ ಎಂಬ ಹೆಸರಿಗೆ ‘ಲಕ್ಷಣ’ ಎಂದು ಅರ್ಥ. ಶ್ರೀಮನ್ನಾರಾಯಣನ ಪತ್ನಿ ಲಕ್ಷ್ಮಿ ಸಂಪತ್ತಿನ ಅಧಿದೇವತೆ. ಲಕ್ಷ್ಮಿ ಯಾವ ಮನೆಯಲ್ಲಿ ನೆಲೆಸಿರುತ್ತಾಳೋ,ಅಲ್ಲಿ ಸುಖ ಸಂಪತ್ತು ಸಮೃದ್ಧಿಯಿಂದ ತುಂಬಿರುತ್ತದೆ. ಆದರೆ ಲಕ್ಷ್ಮಿ ಚಂಚಲೆ ಅವಳನ್ನು ಒಲಿಸಿ ಕೊಳ್ಳುವುದು ಸುಲಭವಲ್ಲ, ಎಲ್ಲರೂ ಲಕ್ಷ್ಮಿ ಕೃಪಾ ಕಟಾಕ್ಷ ಬೇಕು ಎಂದು ಬಯಸುತ್ತಾರೆ. ಅದಕ್ಕಾಗಿ ಪೂಜೆ ವ್ರತ ಕಥೆಗಳನ್ನು ಮಾಡುತ್ತಾರೆ. ದೇವಿಯನ್ನು ಒಲಿಸಿಕೊಳ್ಳಲು ಕೆಲವು ನಿಯಮಗಳು ಹಾಗೂ ಹಲವು ಪೂಜಾಕ್ರಮಗಳು ಇದೆ ಅವುಗಳಲ್ಲಿ ಒಂದು ಪುಟ್ಟ ಕಥೆ.
ಇದು ಪುರಾಣ ಕಥೆ. ಆ ಕಾಲದಲ್ಲಿ ಒಬ್ಬ ಬಡ ಬ್ರಾಹ್ಮಣ ಇದ್ದನು. ಈತ ವಿಷ್ಣುವಿನ ಪರಮ ಭಕ್ತ. ಹಗಲು- ರಾತ್ರಿ, ಕೂತಾಗ- ನಿಂತಾಗ, ನಡೆದಾಗ ಹೀಗೆ ಸದಾ ಕಾಲ ಹರಿನಾಮಸ್ಮರಣೆಯನ್ನೇ ತನ್ನ ಉಸಿರಾಗಿಸಿಕೊಂಡಿದ್ದನು. ಇವನ ಅಪರಿಮಿತವಾದ ಭಕ್ತಿ ವೈಕುಂಠದಲ್ಲಿದ್ದ ನಾರಾಯಣನಿಗೆ ಮೆಚ್ಚುಗೆಯಾಯಿತು. ಪ್ರಸನ್ನಗೊಂಡು ಲಕ್ಷ್ಮಿಗೆ ಹೇಳಿದನು. ದೇವಿ ಆ ಬ್ರಾಹ್ಮಣ ನನ್ನ ಪರಮ ಭಕ್ತನಾಗಿದ್ದಾನೆ. ಎದ್ದಾಗಿ ನಿಂದ ರಾತ್ರಿ ಮಲಗುವ ತನಕ, ಕೂತಾಗ ನಿಂತಾಗ ನನ್ನನ್ನೇ ಸ್ಮರಣೆ ಮಾಡುತ್ತಾನೆ. ಬಡವ ಅವನ ಅಪೇಕ್ಷೆ ಏನಿದೆ ಕೇಳಿ ಅವನಿಗೆ ಕರುಣಿಸುದೇವಿ ಎಂದು ಹೇಳಿದ.
ಲಕ್ಷ್ಮಿ ಹೇಳಿದಳು, ಸ್ವಾಮಿ ನಾನು ಆ ಬಡ ಬ್ರಾಹ್ಮಣನಿಗೆ ಒಲಿಯುವೆ. ಆದರೆ ಅವನು ನನ್ನನ್ನು ಭಕ್ತಿಯಿಂದ ಆರಾಧಿಸಿ ಪೂಜಿಸಿ ಕರೆದರೆ ಮಾತ್ರ ಹೋಗಬಹುದು ಅವನು ಕರೆಯದೆ ನಾನು ಹೋಗುವುದಿಲ್ಲ ಎಂದಳು. ಮಹಾಲಕ್ಷ್ಮಿಯ ಮಾತನ್ನು ಕೇಳಿದ ವಿಷ್ಣು ಒಂದು ಉಪಾಯ ಮಾಡಿ, ಒಂದು ಬೆಳಿಗ್ಗೆ ಸಾಧು ವೇಷ ದಲ್ಲಿ ಭೂಮಿಗೆ ಇಳಿದು ಬಡ ಬ್ರಾಹ್ಮಣನ ಮನೆಗೆ ಬಂದನು. ಬ್ರಾಹ್ಮಣಗೆ ಹೇಳಿದನು. ಏ ಬ್ರಾಹ್ಮಣ ನಿನ್ನ ನಿನ್ನ ದರಿದ್ರ ದೂರವಾಗಬೇಕು ಅಂದರೆ, ನೀನು ನಿಮ್ಮಮನೆಯ ಸಮೀಪದಲ್ಲಿರುವ ಲಕ್ಷ್ಮೀನಾರಾಯಣ ದೇವಸ್ಥಾನಕ್ಕೆ ಮುಂಜಾನೆ ಹೋಗಬೇಕು.
ಅಲ್ಲಿಗೆ ಪ್ರತಿದಿನ ಬೆಳಗ್ಗೆ ಒಬ್ಬ ಮಹಿಳೆ ಬರುತ್ತಾಳೆ. ಅವಳ ಬಳಿ ಹೋಗಿ ಅವಳನ್ನು ನಿನ್ನ ಮನೆಗೆ ಕರೆಯಬೇಕು. ಈ ರೀತಿ ಮಾಡಿದರೆ ಆ ಲಕ್ಷ್ಮಿ ನಿನ್ನ ಮನೆಯಲ್ಲಿ ಬಂದು ನೆಲೆಸುತ್ತಾಳೆ ಎಂದು ಹೇಳಿದನು. ಬ್ರಾಹ್ಮಣನು ಆಶ್ಚರ್ಯವಾಗಿ ಏನು ಸ್ವಾಮಿ, ಇದೇನು ಹೇಳುತ್ತಿರುವಿರಿ, ಮಹಾಲಕ್ಷ್ಮಿ, ನಮ್ಮ ಮನೆಗೆ ಬರುತ್ತಾಳಾ, ಅದು ಆ ತಾಯಿಯನ್ನು ನಾನು ಕರೆದರೆ ನಿಜವೇ ಸ್ವಾಮಿ, ಎಂದೆಲ್ಲಾ ನಡುಗುತ್ತ ಕೇಳಿದ. ಸಾಧು ಹೇಳಿದ, ಹೌದು ನಿನ್ನ ಮನೆಗೆ ಬರುತ್ತಾಳೆ. ನೀನು ಪ್ರೀತಿ ಪೂರ್ವ ಕವಾಗಿ ಕರೆಯಬೇಕು. ನಿಮ್ಮ ಮನೆಗೆ ಬಂದು ನೆಲೆಸುತ್ತಾಳೆ. ಎಂದು ಹೇಳಿ ವಿಷ್ಣು ಅದೃಶ್ಯನಾದನು.
ಆ ಬ್ರಾಹ್ಮಣ ಸಾಧು ಹೇಳಿದಂತೆ ಮುಂಜಾನೆ ಎದ್ದು ಮಹಾ ವಿಷ್ಣುವಿನ ಸ್ಮರಣೆ ಮಾಡುತ್ತಾ ನಿತ್ಯ ಕರ್ಮಗಳನ್ನು ಮುಗಿಸಿ, ಪೂಜೆ ಮಾಡಿ, ಲಕ್ಷ್ಮೀನಾರಾಯಣ ಮಂದಿರಕ್ಕೆ ಬಂದನು. ಅಲ್ಲಿರುವ ಒಂದು ಮರದ ಸುತ್ತ ಕಟ್ಟಿದ ಕಟ್ಟೆಯ ಮೇಲೆ ಕಾಯುತ್ತಾ ಕುಳಿತನು. ಸ್ವಲ್ಪ ಹೊತ್ತಿಗೆ ತಲೆಯ ಮೇಲೆ ಮಣ್ಣಿನ ಬುಟ್ಟಿಯನ್ನು ಇಟ್ಟುಕೊಂಡ ಲಕ್ಷಣವಾದ ಒಬ್ಬ ಮಹಿಳೆ ಬರುತ್ತಿದ್ದಳು.ಬ್ರಾಹ್ಮಣ ದಡಬಡಿಸಿ ಮಹಿಳೆಯ ಬಳಿ ಹೋಗಿ, ಅಮ್ಮ ತಾಯಿ ನೀನು ನಮ್ಮ ಮನೆಗೆ ಬಾರಮ್ಮ ಎಂದು ಭಕ್ತಿ ಪ್ರೀತಿಯಿಂದ ಪ್ರಾರ್ಥಿಸಿ ಕರೆದನು. ಆಶ್ಚರ್ಯಗೊಂಡ ಮಹಾಲಕ್ಷ್ಮಿ ಯೋಚಿಸಿ ದಳು. ಇದು ವಿಷ್ಣು ವಿನ ಮಾಯೆ ಅಲ್ಲದೆ ಮತ್ತೇನು? ಇದಕ್ಕಾಗಿ ನಾರಾಯಣ ಏನಾದರೂ ಉಪಾಯ ಮಾಡಿರುತ್ತಾರೆ ಎಂದುಕೊಂಡಳು.
ಪ್ರಸನ್ನಳಾದ ಮಹಾಲಕ್ಷ್ಮಿ ಬ್ರಾಹ್ಮಣಗೆ ಹೇಳಿದಳು. ಏ ಬ್ರಾಹ್ಮಣ ನೀನು 16 ದಿನಗಳ ಲಕ್ಷ್ಮಿ ವ್ರತವನ್ನು ವಿಧಿ ವಿಧಾನದ ಪ್ರಕಾರ ಮಾಡಬೇಕು. ಅಮಾವಾಸ್ಯೆ ದಿನ ವ್ರತ ಹಿಡಿದು ಶುಕ್ಲ ಪಕ್ಷದಲ್ಲಿ ಪ್ರತಿದಿನ ಚಂದ್ರನಿಗೆ ಅರ್ಘ್ಯ ಕೊಡಬೇಕು ಹೀಗೆ 16 ದಿನದ ವ್ರತ ಕಥೆ ಮುಗಿದ ಮೇಲೆ, 16ನೇ ದಿನ ಚಂದ್ರನಿಗೆ ಅರ್ಘ್ಯವನ್ನು ಕೊಟ್ಟು ಉತ್ತರ ದಿಕ್ಕಿನ ಕಡೆ ನೋಡುತ್ತಾ ನನ್ನನ್ನು ಕರೆದರೆ ನಾನು ಬರುತ್ತೇನೆ ಎಂದು ಮಾತು ಕೊಟ್ಟಳು.
ದೇವಿಯ ಮಾತಿನಂತೆ ಆ ಬ್ರಾಹ್ಮಣನು ಮನೆಗೆ ಬಂದು 16 ದಿನಗಳ ಕಾಲ ನೇಮದಿಂದ ಲಕ್ಷ್ಮೀ ವ್ರತವನ್ನು ಮಾಡಿದನು. ಮತ್ತು ಚಂದ್ರನಿಗೆ ಅರ್ಘ್ಯವನ್ನು ಕೊಡುತ್ತಿದ್ದನು. 16 ನೇ ದಿನ ಶ್ರದ್ಧೆಯಿಂದ ಪೂಜೆ, ನೈವೇದ್ಯ, ಆರತಿ, ನಮಸ್ಕಾರ ಪ್ರಾರ್ಥನೆ ಮಾಡಿ ಚಂದ್ರನಿಗೆ ಅರ್ಘ್ಯ ಕೊಟ್ಟು ಉತ್ತರ ದಿಕ್ಕಿನ ಕಡೆ ಮುಖ ಮಾಡಿ ಕೈ ಮುಗಿದು ಲಕ್ಷ್ಮಿಯನ್ನು ಪ್ರಾರ್ಥಿಸಿ ತನ್ನ ಮನೆಗೆ ಬರುವಂತೆ ಕರೆದನು. ಲಕ್ಷ್ಮಿ ಕೊಟ್ಟ ಮಾತಿನಂತೆ ಬ್ರಾಹ್ಮಣನ ಮನೆಗೆ ಬಂದಳು. ಲಕ್ಷ್ಮಿ ಅವನ ಮನೆಗೆ ಕಾಲಿಟ್ಟ ದಿನದಿಂದಲೇ ಅವನ ಕಷ್ಟ ಕಾರ್ಪಣ್ಯಗಳೆಲ್ಲಾ ಕಳೆದು ಧನ ಧಾನ್ಯ ಸಮೃದ್ಧಿಯಿಂದ ಮನೆ ತುಂಬಿತು. ಈ ಪ್ರಕಾರ 16 ದಿನದ ಲಕ್ಷ್ಮಿ ವ್ರತವನ್ನು ಶ್ರದ್ಧಾ ಭಕ್ತಿಯಿಂದ ಮಾಡಿ ಲಕ್ಷ್ಮಿ ತಮ್ಮ ಮನೆಗೆ ಬರುವಂತೆ ಪ್ರಾರ್ಥಿಸಿ ಕರೆದಾಗ ಅವರಿಗೆ ಲಕ್ಷ್ಮಿ ಒಲಿದು ಬರುವಳು.
ಲಕ್ಷ್ಮಿ ಪೂಜೆ ಮಾಡುವಾಗ, ಕೆಲವು ನಿಯಮಗಳು ಪಾಲಿಸಬೇಕು. ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಬೆಳಿಗ್ಗೆ ಮನೆ ಮುಂದೆ ಗುಡಿಸಿ ಸಾರಿಸಿ ರಂಗೋಲಿ ಹಾಕಿ ಲಕ್ಷ್ಮಿಯನ್ನು ಸ್ವಾಗತಿಸಬೇಕು. ತುಳಸಿ ಗಿಡಕ್ಕೆ ನಿತ್ಯ ಬೆಳಿಗ್ಗೆ ಸ್ವಲ್ಪ ನೀರನ್ನು ಹಾಕಿ ಅರಿಶಿಣ ಕುಂಕುಮ ಹೂವು ಏರಿಸಬೇಕು. ಮೂರು ಸಂಜೆಗೆ ಗೋದೂಳಿ ಸಮಯಕ್ಕೆ ಲಕ್ಷ್ಮಿ ಮನೆಗೆ ಬರುವ ಸಮಯ. ಮನೆಗೆ ಯಾವುದೇ ಭಾಗದಲ್ಲಿ ಕಸ ಗುಡಿಸ ಬಾರದು. ಸಂಜೆ ಸಮಯ ಲಕ್ಷ್ಮಿಯನ್ನು ಪೂಜಿಸಿದರೆ ಒಳ್ಳೆಯದು. ಮುಸ್ಸಂಜೆ ಹೊತ್ತು ದೇವತೆಗಳು ಜಾಗೃತವಾಗಿರುವ ಸಮಯ ಆಗ ಮನೆಯಲ್ಲಿ ಮಲಗಿ ನಿದ್ರೆ ಮಾಡಬಾರದು.
ದೇವರ ಭಜನೆ, ಸ್ತೋತ್ರ, ಪಠಣ, ಮಾಡಬೇಕು. ಊಟ- ತಿಂಡಿ ನಂತರ ಎಂಜಲು ಪಾತ್ರೆಗಳನ್ನು ಗುಡ್ಡೆ ಹಾಕಿ ಇಡಬಾರದು ತೊಳೆದು ಸ್ವಚ್ಛಗೊಳಿಸಬೇಕು. ಮನೆಯಲ್ಲಿ ಎಲ್ಲೆಂದರಲ್ಲಿ ರಂಪ ಹರಡಿರಬಾರದು ಎಂಜಲು ಪಾತ್ರೆಗಳನ್ನು ಹಾಗೆ ಇಟ್ಟರೆ ಶನಿ ಮತ್ತು ಚಂದ್ರನ ಕೋಪಕ್ಕೆ ಗುರಿಯಾಗು ತ್ತಾರೆ. ರಾತ್ರಿ ಅಡಿಗೆ ಮನೆಯನ್ನು ಸ್ವಚ್ಛವಾಗಿಟ್ಟು ಮಲಗಬೇಕು. ಲಕ್ಷ್ಮಿ ರಾತ್ರಿ ಸಮಯದಲ್ಲಿ ಬಂದು ಆಹಾರ ತಿನ್ನುತ್ತಾಳೆ ಎಂಬ ಪ್ರತೀತಿ ಇದೆ. ಹಾಗಾಗಿ ಒಂದು ಪುಟ್ಟ ಬಟ್ಟಲಿನಲ್ಲಿ ಒಂದು ತುತ್ತು ಅನ್ನವನ್ನು ಮುಚ್ಚಿಟ್ಟು ಮಲಗಿರಬೇಕು.
ಎಲ್ಲರ ಮನೆಯ ‘ಮಹಾಲಕ್ಷ್ಮಿ’ ಮನೆಯ ಗೃಹಿಣಿ ಆಗಿರುತ್ತಾಳೆ. ಆಕೆಯ ಕಣ್ಣಲ್ಲಿ ನೀರು ಹಾಕಿಸಬಾರದು. ಮನೆಯಲ್ಲಿ ಹುಟ್ಟಿದ ಹೆಣ್ಣು ಮಕ್ಕಳನ್ನು ಸಂತೋಷದಿಂದ ನೋಡಿಕೊಳ್ಳಬೇಕು. ಪರಸ್ತ್ರಿಯರನ್ನು ಗೌರವಿಸಬೇಕು. ಹಬ್ಬ ಹರಿ ದಿನಗಳಲ್ಲಿ ಶಂಖ- ಜಾಗಂಟೆ ಶಬ್ದಗಳು ಒಳ್ಳೆಯದು. ಇಲ್ಲದಿದ್ದರೆ ದೇವರ ಮುಂದೆ ಪುಟ್ಟ ಶಂಖ ಇಟ್ಟಿರಬೇಕು. ಮನೆಯಲ್ಲಿ ಜಗಳ, ಕೂಗುವುದು, ಕಿರಿಚುವುದು, ಮಾಡಬಾರದು.
ಅಡಿಗೆ ಮನೆಯಲ್ಲಿ ಅಕ್ಕಿ ದವಸ ಧಾನ್ಯಗಳು ತುಂಬಿದ ಡಬ್ಬಿ ಇಡಬೇಕು.ಸಾಮಾನು ಖಾಲಿಯಾಗಿದೆ ಎಂದು ಹೇಳಬಾರದು ತುಂಬಿದೆ ಎಂದು ಹೇಳಬೇಕು. ಹಾಲು ಮೊಸರು ಇಟ್ಟಿರಬೇಕು. ದೇವರ ಮುಂದೆ ಪಂಚಪಾತ್ರೆಯಲ್ಲಿ ನೀರು ಉದ್ಧರಣೆ ಇಟ್ಟಿರಬೇಕು. ಹೆಣ್ಣು ಮಕ್ಕಳು ತಲೆಕೆದರಿಕೊಂಡು ಓಡಾಡಬಾರದು. ಒಡೆದ ಬಳೆಗಳನ್ನು ಹಾಕಬಾರದು. ಮನೆಯ ಗಂಡಸರ ಮೇಲೆ ಪ್ರೀತಿ ಗೌರವ ಇರಬೇಕು.
ಮಕ್ಕಳನ್ನು ತಾಯಿ ನೋಡಿಕೊಳ್ಳಬೇಕು. ಇಂಥ ಸೂಕ್ಷ್ಮವಾದ ನಿಯಮಗಳನ್ನು ಪಾಲಿಸಿ, ಲಕ್ಷ್ಮಿ ಪೂಜೆ ಮಾಡಿ ಕರೆದರೆ ಲಕ್ಷ್ಮಿಯ ಅನುಗ್ರಹ ದೊರೆಯುತ್ತದೆ.
ಸಂಗ್ರಹ ವರದಿ: ಗಣೇಶ್ ಎಸ್., ದೊಡ್ಡಬಳ್ಳಾಪುರ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….