ದೊಡ್ಡಬಳ್ಳಾಪುರ, (ಆಗಸ್ಟ್.29): ನಗರದಲ್ಲಿನ ತಾಯಿ ಮಗು ಆಸ್ಪತ್ರೆ ಆವರಣದಲ್ಲಿ ಗುರುವಾರ ವಿವಿಧ ಕಾಮಾಗಾರಿಗಳ ಶಂಕುಸ್ಥಾಪನೆಗೆ ಬರುವಂತೆ ನಗರಸಭೆ ಸದಸ್ಯರಿಗೆ ಆಹ್ವಾನ ನೀಡಿದ್ದ ಅಧಿಕಾರಿಗಳು ಕಾರ್ಯಕ್ರಮವನ್ನು ಕೊನೆ ಗಳಿಗೆಯಲ್ಲಿ ರದ್ದು ಮಾಡಿದ್ದಾರೆ. ಇದರಿಂದ ಸಿಟ್ಟಿಗೆದ್ದ ಬಿಜೆಪಿ ನಗರಸಭಾ ಸದಸ್ಯರು ಹಾಗೂ ಮುಖಂಡರು ತಾವೇ ಗುದ್ದಲಿ ಪೂಜೆ ನೆರವೇರಿಸಿ ಪ್ರತಿಭಟನೆ ನಡೆಸಿದರು.
ಆಸ್ಪತ್ರೆ ಅವರಣದಲ್ಲಿ ರೂ.5 ಕೋಟಿ ವೆಚ್ಚದಲ್ಲಿ ಕಾಂಪೌಂಡ್, ಸ್ವಾಗತ ಕಾಮಾನು ಸೇರಿದಂತೆ ಇತರೆ ಕಾಮಾಗಾರಿಗಳ ಶಂಕುಸ್ಪಾಪನೆಗೆ ಗುರುವಾರ ಬೆಳಿಗ್ಗೆ ಸಮಯ ನಿಗದಿಯಾಗಿತ್ತು. ಅಧಿಕಾರಿಗಳು ಕಾರ್ಯಕ್ರಮಕ್ಕೆ ಬರುವಂತೆ ಆಹ್ವಾನವನ್ನು ಸಹ ನೀಡಿದ್ದರು. ಆದರೆ ನಿಗದಿತ ಸಮಯಕ್ಕೆ ಸ್ಥಳಕ್ಕೆ ಬಂದಾಗಲಷ್ಟೇ ಕಾರ್ಯಕ್ರಮ ರದ್ದಾಗಿರುವ ಮಾಹಿತಿ ತಿಳಿದಿದೆ. ಅಧಿಕಾರಿಗಳ ಈ ನಡೆಯನ್ನು ಖಂಡಿಸಿದ ಬಿಜೆಪಿ ನಗರಸಭೆ ಸದಸ್ಯರು ಆರೋಗ್ಯಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿ ಸ್ಥಳಕ್ಕೆ ಜಿಲ್ಲಾ ಆರೋಗ್ಯಾಧಿಕಾರಿಗಳು ಬರುವಂತೆ ಪಟ್ಟು ಹಿಡಿದರು.
ಈ ಕುರಿತು ಮಾಹಿತಿ ನೀಡಿದ, ಬಂತಿ ವೆಂಕಟೇಶ್, ಕಾರ್ಯಕ್ರಮ ರದ್ದಾಗಿರುವ ಬಗ್ಗೆ ಕನಿಷ್ಠ ಮಾಹಿತಿಯನ್ನು ನೀಡಿಲ್ಲ. ಶಾಸಕರು ಸೇರಿದಂತೆ ಜನಪ್ರತಿನಿಧಿಗಳಿಗೆ ಅವಮಾನ ಮಾಡುವ ಕೆಲಸವನ್ನು ಅಧಿಕಾರಿಗಳು ಮಾಡಿದ್ದಾರೆ.
ಕಾರ್ಯಕ್ರಮ ರದ್ದಾಗಲು ಕಾರಣ ಕೇಳಿದರೆ ಜಿಲ್ಲಾ ಉಸ್ತುವಾರಿ ಸಚಿವರು ಬಾರದೇ ಇರುವ ನೆಪವನ್ನು ಹೇಳುತ್ತಿದ್ದಾರೆ. ಪದೇ ಪದೇ ಕಾರ್ಯಕ್ರಮವನ್ನು ಮುಂದೂಡಿಕೆ ಮಾಡಿ ಸಾರ್ವಜನಿಕರ ಹಣವನ್ನು ವ್ಯರ್ಥ ಮಾಡುತ್ತಿದ್ದಾರೆ. ಸ್ಥಳೀಯ ಕೆಲ ಮುಖಂಡರ ಒತ್ತಡಕ್ಕೆ ಮಣಿದು ಕಾರ್ಯಕ್ರಮವನ್ನು ರದ್ದು ಮಾಡಿದ್ದು, ಅಧಿಕಾರಿಗಳ ವರ್ತನೆಗೆ ಬೇಸತ್ತು ನಾವೇ ಗುದ್ದುಲಿ ಪೂಜೆ ಮಾಡುತ್ತಿದ್ದೇವೆ ಎಂದರು.
ಪ್ರತಿಭಟನೆಯಲ್ಲಿ ನಗರಸಭೆ ಸದಸ್ಯರಾದ ಪದ್ಮನಾಬ್, ಸುಧಾಲಕ್ಷ್ಮೀನಾರಾಯಣ್, ಸುಮಿತ್ರಆನಂದ್, ಹಂಸಪ್ರಿಯ, ಮುಖಂಡರಾದ ಗೋಪಿ, ಮುದ್ದಪ್ಪ ಇದ್ದರು.
ಹಾಸ್ಯಾಸ್ಪದ; ಅಭಿವೃದ್ಧಿ ಕೆಲಸಗಳಿಗೆ ಅಡ್ಡಿ ಪಡಿಸುವ ಪಾಠವನ್ನು ಕಲಿಸಿಕೊಟ್ಟವರೇ ಬಿಜೆಪಿ ಮುಖಂಡರು. ಈಗ ಬೇರೆಯವರಿಗೆ ಸಾರ್ವಜನಿಕ ಹಣ ವ್ಯರ್ಥವಾಗುವ ಬಗ್ಗೆ ತಿಳುವಳಿಕೆ ಹೇಳುತ್ತಿರುವುದು ಹಸ್ಯಾಸ್ಪದವಾಗಿದೆ ಎಂದು ಯುವ ಕಾಂಗ್ರೆಸ್ ಮುಖಂಡ ಜನಪರಮಂಜು ಲೇವಡಿ ಮಾಡಿದ್ದಾರೆ.
ಜಿಲ್ಲಾ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ಹಣ ಬಿಡಿಗಡೆಯಾಗಿ, ಶಂಕುಸ್ಥಾಪನೆಗೆ ಒಂದು ಗಂಟೆ ಸಮಯ ಇರುವಾಗ ಆಗಿನ ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಸಚಿವರಾಗಿದ್ದ ಡಾ.ಕೆ.ಸುಧಾಕರ್ ಅವರು ತುರ್ತು ಕಾರ್ಯನಿಮಿತ ಬರುತ್ತಿಲ್ಲ ಎನ್ನುವ ನೆಪಹೇಳಿ ಮುಂದೂಡಿದರು. ಇಂದಿಗೂ ಜಿಲ್ಲಾ ಆಸ್ಪತ್ರೆ ಶಂಕುಸ್ಥಾಪನೆಯಾಗಿಲ್ಲ.
ನಗರಸಭೆ ಕಾರ್ಯಾಲಯ ಸಿದ್ದವಾಗಿ ಮೂರು ಬಾರಿ ಉದ್ಘಾಟನೆಗೆ ದಿನಾಂಕ ನಿಗದಿಯಾಗಿ ಕೊನೆ ಗಳಿಗೆಯಲ್ಲಿ ಮುಂದೂಡಲಾಯಿತು. ಇಂತಹ ಇನ್ನೂ ಹತ್ತಾರು ದೊಡ್ಡಪಟ್ಟಿಗಳೆ ಇವೆ.
ಈ ಎಲ್ಲವನ್ನೂ ಸಹ ಈಗಿನ ಬಿಜೆಪಿ ಮುಖಂಡರು, ಸದಸ್ಯರು ನೆನಪು ಮಾಡಿಕೊಳ್ಳಬೇಕು. ಹೆಸರಿನ ಹಂಬಲಕ್ಕೆ ಜೋತುಬಿದ್ದು ಅಭಿವೃದ್ಧಿ ಕೆಲಸಗಳಿಗೆ ಅಡ್ಡಿ ಪಡಿಸುವ ಪಾಠವನ್ನು ಕಲಿಸಿಕೊಟ್ಟವರೇ ಬಿಜೆಪಿ ಮುಖಂಡರು. ಈಗ ಬೇರೆಯವರಿಗೆ ಸಾರ್ವಜನಿಕ ಹಣ ವ್ಯರ್ಥವಾಗುವ ಬಗ್ಗೆ ತಿಳುವಳಿಕೆ ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದ ಜನಪರಮಂಜು ಹೇಳಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….