ಬೆಂಗಳೂರು: ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ನೇತೃತ್ವದಲ್ಲಿ ಬಿಜೆಪಿ (BJP) ಶಾಸಕರು ಮತ್ತು ಸಂಸದರ ನಿಯೋಗ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಹಲವು ವಿಚಾರಗಳನ್ನು ಚರ್ಚಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ವಿಪಕ್ಷ ನಾಯಕ ಆರ್ ಅಶೋಕ್, ಸಂದರಾದ ಪಿಸಿ ಮೋಹನ್ ತೇಜಸ್ವಿ ಸೂರ್ಯ ಸೇರಿದಂತೆ ಬೆಂಗಳೂರು ನಗರ ಶಾಸಕರನ್ನೊಳಗೊಂಡ ನಿಯೋಗ ಸಿದ್ದರಾಮಯ್ಯರನ್ನು ಭೇಟಿ ಮಾಡಿದೆ.
ಬೆಂಗಳೂರು ಶಾಸಕರ ಕ್ಷೇತ್ರಕ್ಕೆ ಅನುದಾನ ಬಿಡುಗಡೆ, ಗ್ರೇಟರ್ ಬೆಂಗಳೂರು ರಚನೆ ಪುನರ್ಪರಿಶೀಲನೆ ಸೇರಿದಂತೆ ಹಲವು ವಿಚಾರಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಎದುರು ನಿಯೋಗ ಪ್ರಸ್ತಾಪಿಸಿದೆ ಎಂದು ತಿಳಿದುಬಂದಿದೆ.
ಈಗಾಗಲೇ ಗ್ರೇಟರ್ ಬೆಂಗಳೂರು ಮಸೂದೆ 2024 ನ್ನು ಈ ಬಾರಿ ವಿಧಾನಸಭೆಯಲ್ಲಿ ಮಂಡನೆ ಮಾಡಲು ಸರ್ಕಾರ ನಿರ್ಧಾರ ಮಾಡಿದ್ದು, ಮಸೂದೆಗೆ ಸಂಬಂಧಿಸಿದಂತೆ ಜಂಟಿ ಸದನ ಸಮಿತಿಯನ್ನು ರಚನೆ ಮಾಡಲಾಗಿದೆ.
ಶಾಸಕ ರಿಜ್ವಾನ್ ಹರ್ಷದ್ ನೇತೃತ್ವದಲ್ಲಿ ಜಂಟಿ ಸದನ ಸಮಿತಿ ವರದಿಯನ್ನು ಸ್ಪೀಕರ್ ಯು.ಟಿ ಖಾದರ್ ಅವರಿಗೆ ನೀಡಿಯೂ ಆಗಿದೆ.
ವರದಿಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು 2 ರಿಂದ ಗರಿಷ್ಠ 7 ಸಣ್ಣ ಪಾಲಿಕೆಗಳನ್ನು ರಚನೆ ಮಾಡುವಂತೆಯೂ ಪ್ರತಿ ಪಾಲಿಕೆ 125 ವಾರ್ಡ್ಗಳನ್ನು ಹೊಂದಬಹುದು ಎಂದು ಶಿಫಾರಸು ಮಾಡಲಾಗಿದ್ದು, ಇದಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಈ ವಿಚಾರದ ಬಗ್ಗೆ ಸಿಎಂ ಎದುರು ಪ್ರಸ್ತಾಪಿಸಲು ಬಿಜೆಪಿ ನಿಯೋಗ ತೀರ್ಮಾನಿಸಿದೆ.
ಅದರೊಂದಿಗೆ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡುವಂತೆಯೂ ಬೆಂಗಳೂರು ನಗರ ಶಾಸಕರು, ಸಂಸದರು ಸಿಎಂ ಸಿದ್ದರಾಮಯ್ಯರಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.