ಬೆಂಗಳೂರು (GIM Invest Karnataka 25): ರಾಜ್ಯಗಳ ಪ್ರಗತಿಯೇ ದೇಶದ ಪ್ರಗತಿಯಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಹಭಾಗಿತ್ವ ಹಾಗೂ ಸಹಕಾರ ತತ್ತ್ವದ ಮೇಲೆ ಕೆಲಸ ಮಾಡಿದರೆ ಭಾರತವು 2047ರ ಹೊತ್ತಿಗೆ 30 ಟ್ರಿಲಿಯನ್ ಡಾಲರ್ ಮೌಲ್ಯದ ಆರ್ಥಿಕತೆಯಾಗಿ ಬೆಳೆಯಲಿದೆ. ಈ ವಿಚಾರದಲ್ಲಿ ಕೇಂದ್ರ ಸರಕಾರವು ಕರ್ನಾಟಕಕ್ಕೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ಕೇಂದ್ರ ವಾಣಿಜ್ಯ ಸಚಿವ ಪೀಯೂಷ್ ಗೋಯಲ್ ಅವರು ಆಶ್ವಾಸನೆ ಕೊಟ್ಟಿದ್ದಾರೆ.
ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ರಾಜ್ಯದ ಆರ್ಥಿಕತೆ ಮತ್ತು ಕೈಗಾರಿಕಾ ರಂಗದ ಬೆಳವಣಿಗೆಗೆ ಮಹತ್ತರ ಕೊಡುಗೆ ನೀಡುತ್ತಿರುವ 15 ಉದ್ಯಮಗಳಿಗೆ ‘ಇನ್ವೆಸ್ಟ್ ಕರ್ನಾಟಕ’ ಪ್ರಶಸ್ತಿ ಪುರಸ್ಕಾರಗಳನ್ನು ಅವರು ಪ್ರದಾನ ಮಾಡಿದರು. ಜತೆಗೆ ರಾಜ್ಯದ ಕೈಗಾರಿಕಾ ಯಶೋಗಾಥೆಗಳ `ಕರ್ನಾಟಕ ಸಕ್ಸಸ್ ಸ್ಟೋರೀಸ್’ ಸಂಪುಟವನ್ನು ಅವರು ಬಿಡುಗಡೆ ಮಾಡಿದರು.
ಕಳೆದ ವರ್ಷ ಮೂಲಸೌಕರ್ಯ ಅಭಿವೃದ್ಧಿಗೆ 11 ಲಕ್ಷ ಕೋಟಿ ರೂ.ಗಳನ್ನು ವಿನಿಯೋಗಿಸಲಾಗಿದೆ. ತುಮಕೂರಿನಲ್ಲಿ 8,000 ಎಕರೆ ವಿಸ್ತೀರ್ಣದಲ್ಲಿ ಪ್ಲೇ ಅಂಡ್ ಪ್ಲಗ್ ಮಾದರಿಯಲ್ಲಿ ಇಂಡಸ್ಟ್ರಿಯಲ್ ಸ್ಮಾರ್ಟ್ ಸಿಟಿಗೆ ಚಾಲನೆ ನೀಡಲಾಗಿದೆ.
1,736 ಎಕರೆಯಲ್ಲಿ ಇದರ ಮೊದಲ ಹಂತದ ಅಭಿವೃದ್ಧಿ ಪ್ರಗತಿಯಲ್ಲಿದ್ದು, 2026ರ ಕೊನೆಯ ಹೊತ್ತಿಗೆ ಇದು ಮುಗಿಯಲಿದೆ ಎಂದು ಅವರು ಭರವಸೆ ನೀಡಿದರು.
ಇಡೀ ಜಗತ್ತಿನಲ್ಲಿ ಭಾರತವು ಬಂಡವಾಳ ಹೂಡಿಕೆಗೆ ಪ್ರಶಸ್ತ ತಾಣವಾಗಿದೆ. ನಮ್ಮಲ್ಲಿರುವ ಪ್ರಜಾಸತ್ತೆ, ಬೇಡಿಕೆ, ಜನಸಂಖ್ಯೆ, ಡಿಜಿಟಲೀಕರಣ ಮತ್ತು ವೈವಿಧ್ಯಗಳೇ ಭಾರತದ ಐದು ಶಕ್ತಿಗಳಾಗಿವೆ.
ಸದ್ಯದಲ್ಲೇ ದೇಶದಲ್ಲಿ ಇನ್ನೂ 75 ನೂತನ ವಿಮಾನ ನಿಲ್ದಾಣಗಳು, 120 ನಗರಗಳಿಗೆ ಉಡಾನ್-2 ಅಡಿಯಲ್ಲಿ ವಿಮಾನ ಸಂಪರ್ಕ, 114 ಜಲಮಾರ್ಗಗಳು, ಈಗಿರುವ ಬಂದರುಗಳಿಗಿಂತ ದುಪ್ಪಟ್ಟು ಬಂದರುಗಳು, 50 ಪ್ರವಾಸಿ ತಾಣಗಳ ಅಭಿವೃದ್ಧಿ ಎಲ್ಲವೂ ಅನುಷ್ಠಾನಕ್ಕೆ ಬರಲಿವೆ. ಇದರ ಲಾಭ ಕರ್ನಾಟಕಕ್ಕೂ ಸಿಗಲಿದೆ ಎಂದು ಅವರು ನುಡಿದರು.
ಭಾರತದ ರಫ್ತು ವಹಿವಾಟು ಈಗ 800 ಬಿಲಿಯನ್ ಡಾಲರ್ ಮುಟ್ಟಿದ್ದು, ಇದರಲ್ಲಿ ಕರ್ನಾಟಕದ ಸಿಂಹಪಾಲಿದೆ.
ಕೇಂದ್ರ ಸರಕಾರವು ನಾವೀನ್ಯತೆಗೆ 20 ಸಾವಿರ ಕೋಟಿ ರೂ, ಸೆಮಿಕಾನ್ ಮಿಷನ್ ಗೆ 74 ಸಾವಿರ ಕೋಟಿ ರೂ ಮತ್ತು ಕೈಗಾರಿಕೆಗಳಿಗೆ ಪಿಎಲ್ಐ ಆಧರಿತ ಪ್ರೋತ್ಸಾಹಕ್ಕೆ 2 ಲಕ್ಷ ಕೋಟಿ ರೂ. ಮೀಸಲಿಟ್ಟಿದೆ.
ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ಡೀಪ್-ಟೆಕ್, ಫಿನ್-ಟೆಕ್, ಫ್ಯೂಚರ್ ಇಂಡಸ್ಟ್ರಿಗಳಿಗೆ ಸಮೃದ್ಧ ಅವಕಾಶಗಳಿದ್ದು, ದೇಶವನ್ನು ಮುನ್ನಡೆಸಲಿದೆ ಎಂದು ಗೋಯಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಂಚಾರ ಸಮಸ್ಯೆ ಪರಿಹಾರಕ್ಕೆ 1 ಲಕ್ಷ ಕೋಟಿ ರೂ. ವೆಚ್ಚ
ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮಾತನಾಡಿ, ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಗೆ 1 ಲಕ್ಷ ಕೋಟಿ ರೂಪಾಯಿ ವಿನಿಯೋಗಿಸಲಾಗುವುದು. ಇದರಲ್ಲಿ ಫ್ಲೈಓವರ್, ಸೇತುವೆಗಳು, ಡಬ್ಬಲ್ ಡೆಕ್ಕರ್ ಮಾರ್ಗಗಳು, ಹೊಸ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದರು.
ಸಚಿವ ಎಂ ಬಿ ಪಾಟೀಲ ಮಾತನಾಡಿ, ರಾಜ್ಯದ ಸಮಗ್ರ ಕೈಗಾರಿಕಾ ಅಭಿವೃದ್ಧಿಗೆ ಬೇಕಾದ ಉದ್ಯಮಸ್ನೇಹಿ ನೀತಿಗಳು ಇತರರಿಗೆ ಮಾದರಿಯಾಗಿವೆ. ಸುಸ್ಥಿರ ಬೆಳವಣಿಗೆಯತ್ತ ದಾಪುಗಾಲು ಇಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಸಚಿವರಾದ ಕೆ ಜೆ ಜಾರ್ಜ್, ಡಾ.ಶರಣಪ್ರಕಾಶ್ ಪಾಟೀಲ್, ಪ್ರಿಯಾಂಕ್ ಖರ್ಗೆ, ದಿನೇಶ್ ಗುಂಡೂರಾವ್, ಸಂತೋಷ್ ಲಾಡ್, ಎನ್ ಎಸ್ ಬೋಸರಾಜು, ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ, ಉದ್ಯಮಿ ನಿಖಿಲ್ ಕಾಮತ್ ಉಪಸ್ಥಿತರಿದ್ದರು.
ಹೂಡಿಕೆದಾರರ ಸಮಾವೇಶ: ಉತ್ಸಾಹದಿಂದ ಓಡಾಡಿದ ಎಂ ಬಿ ಪಾಟೀಲ
ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಬುಧವಾರ ದಿನವಿಡೀ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲರ ಉತ್ಸಾಹದ ಓಡಾಟ ಎದ್ದು ಕಾಣುತ್ತಿತ್ತು. ಬೆಳಿಗ್ಗೆಯೇ ಅರಮನೆ ಮೈದಾನಕ್ಕೆ ಬಂದ ಅವರು ಮೊದಲಿಗೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಜತೆಗೂಡಿ `ನಾವೀನ್ಯತಾ ಪ್ರದರ್ಶನ’ ಉದ್ಘಾಟಿಸಿದರು.

ನಂತರ ಅಲ್ಲಿದ್ದ ಒಂದೊಂದು ಮಳಿಗೆಗೂ ಭೇಟಿ ನೀಡಿದ ಅವರು, ಹೊಸಹೊಸ ಸಂಶೋಧನೆಗಳು ಮತ್ತು ತಂತ್ರಜ್ಞಾನದ ಧಾರೆಗಳ ಬಗ್ಗೆ ಕುತೂಹಲದಿಂದ ವಿಚಾರಿಸಿ, ಅರಿವು ಸಂಪಾದಿಸಿದರು.
ನಂತರ ಅವರು ಕ್ವಿನ್ ಸಿಟಿಯಲ್ಲಿ ಹೂಡಿಕೆ ಕುರಿತು ಪ್ರತಿಷ್ಠಿತ ವೈದ್ಯಕೀಯ ಸಭೆಗಳೊಂದಿಗೆ ನಡೆದ ದುಂಡು ಮೇಜಿನ ಸಭೆಯಲ್ಲಿ ಪಾಲ್ಗೊಂಡರು. ಏತನ್ಮಧ್ಯೆ ಅವರು ವರ್ಲ್ಡ್ ಎಕನಾಮಿಕ್ ಫೋರಂ, ಸ್ವಿಸ್ ಇಂಡಿಯಾ ಚೇಂಬರ್ ಆಫ್ ಕಾರ್ಮಸ್ ಮುಂತಾದ ಸಂಸ್ಥೆಗಳ ಜೊತೆಗಿನ ಒಡಂಬಡಿಕೆಗಳನ್ನು ಆಖೈರುಗೊಳಿಸಿ, ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದರು.
ಇವುಗಳ ನಡುವೆಯೇ ಅವರು ನಾನಾ ದೇಶಗಳ ರಾಯಭಾರಿ ಗಳು, ಉನ್ನತ ಮಟ್ಟದ ಪ್ರತಿನಿಧಿಗಳು, ಗಣ್ಯ ಉದ್ಯಮಿಗಳ ಜತೆ ಪರಸ್ಪರ ಮಾತುಕತೆ ನಡೆಸಿ, ರಾಜ್ಯದ ಕೈಗಾರಿಕಾ ನೀತಿ, ಇಲ್ಲಿರುವ ಪ್ರೋತ್ಸಾಹಗಳು, ಉದ್ಯಮಸ್ನೇಹಿ ಉಪಕ್ರಮಗಳನ್ನೆಲ್ಲ ಮನದಟ್ಟು ಮಾಡಿಕೊಟ್ಟರು.
ಜತೆಗೆ ಬಹರೇನ್, ಜಪಾನ್ ನಿಯೋಗಗಳನ್ನು ಕೂಡ ಪಾಟೀಲರು ಮುಖತಃ ಭೇಟಿ ಮಾಡಿದರು. ಸ್ವಿಸ್ ಕೈಗಾರಿಕೋದ್ಯಮಿಗಳ ಒಕ್ಕೂಟದ ಪರವಾಗಿ ಅದರ ಅಧ್ಯಕ್ಷ ಸತೀಶ್ ರಾವ್ ಮತ್ತು ಅಲ್ಲಿನ ಸಂಸದ ನಿಕ್ ಗುಗ್ಗರ್ ಇದ್ದರು.
ರಾಜ್ಯ ಸರಕಾರದ ಪರವಾಗಿ ಸಚಿವರೊಂದಿಗೆ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ ಉಪಸ್ಥಿತರಿದ್ದರು.
ಇವುಗಳ ಮಧ್ಯೆಯೇ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಸಮಾವೇಶಕ್ಕೆ ಆಗಮಿಸಿ ಒಂದು ಸುತ್ತು ಹೊಡೆದು, ಪಾಟೀಲರಿಗೆ ಅಭಿನಂದನೆ ಸಲ್ಲಿಸಿದರು. ಇವೆಲ್ಲದರ ನಡುವೆಯೇ ಸಮಾವೇಶದ ವ್ಯವಸ್ಥೆಯಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಳ್ಳಬೇಕೆಂದು ಅವರು ಅಧಿಕಾರಿಗಳಿಗೆ ಸಲಹೆ-ಸೂಚನೆ ನೀಡುವುದನ್ನು ಮರೆಯಲಿಲ್ಲ.
ಸಚಿವರಾದ ಕೆ.ಜೆ.ಜಾರ್ಜ್, ದಿನೇಶ ಗುಂಡುರಾವ್, ಪ್ರಿಯಾಂಕ್ ಖರ್ಗೆ, ಡಾ.ಶರಣ ಪ್ರಕಾಶ ಪಾಟೀಲ, ಎನ್.ಎಸ್.ಬೋಸರಾಜ್ ಅವರು ಕೂಡ ಇಡೀ ದಿನ ಸಚಿವರಿಗೆ ಸಾಥ್ ನೀಡಿದರು.
ಜಪಾನ್ ರಾಯಭಾರಿ ಕಾನ್ಸುಲ್ ಜನರಲ್ ಭೇಟಿ
ಸಚಿವ ಪಾಟೀಲರು ಭಾರತದಲ್ಲಿನ ಜಪಾನ್ ರಾಯಭಾರಿ ಕೀಲ್ಚಿ ಓನೋ ಮತ್ತು ಕಾನ್ಸುಲ್ ಜನರಲ್ ಸುಟೋಮು ನಕಾನೆ ಅವರನ್ನು ಭೇಟಿ ಮಾಡಿದರು.
ಈ ಸಂದರ್ಭದಲ್ಲಿ ಕೈಗಾರಿಕಾ ಬೆಳವಣಿಗೆ, ತಂತ್ರಜ್ಞಾನ ವಿನಿಮಯ, ಹೂಡಿಕೆಗೆ ಇರುವ ಅವಕಾಶಗಳ ಬಗ್ಗೆ ವಿಚಾರ ವಿನಿಮಯ ನಡೆಯಿತು. ಜತೆಗೆ ಜಪಾನಿನ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಂಘಟನೆ ಜತೆ ಒಡಂಬಡಿಕೆಗೆ ಸಹಿ ಹಾಕಲಾಯಿತು.
ಬುಧವಾರ ಸಿಂಗಪುರದ ಉನ್ನತ ಮಟ್ಟದ ನಿಯೋಗವು ಕೂಡ ಸಚಿವರ ಜತೆ ಮಾತುಕತೆ ನಡೆಸಿತು. ನಿಯೋಗದ ನೇತೃತ್ವವನ್ನು ಆ ದೇಶಧ ಕಾನ್ಸುಲ್ ಜನರಲ್ ಎಡ್ಗರ್ ಪಾಂಗ್ ವಹಿಸಿದ್ದರು.
ಮೂಲಸೌಕರ್ಯ, ಮರುಬಳಕೆ ಇಂಧನ, ಉತ್ಪಾದನೆ, ಕ್ವಿನ್ ಸಿಟಿ ಕುರಿತು ಸಿಂಗಪುರದ ಉದ್ಯಮಿಗಳು ಚರ್ಚಿಸಿದರು.
ವಿಕ್ರಮ್ ಕಿರ್ಲೋಸ್ಕರ್ ಗೆ `ಇಂಡಸ್ಟ್ರಿಯಲ್ ಲೆಗಸಿ’ ಗರಿ
ಸಮಾರಂಭದಲ್ಲಿ ಹಿರಿಯ ಸಾಧಕ ಉದ್ಯಮಿ, ದಿವಂಗತ ವಿಕ್ರಮ್ ಕಿರ್ಲೋಸ್ಕರ್ ಅವರಿಗೆ
ಇಂಡಸ್ಟ್ರಿಯಲ್ ಲೆಗಸಿ’ ಪುರಸ್ಕಾರವನ್ನು ನೀಡಿ, ಗೌರವಿಸಲಾಯಿತು. ಅವರ ಪರವಾಗಿ ಗೀತಾಂಜಲಿ ಕಿರ್ಲೋಸ್ಕರ್ ಪ್ರಶಸ್ತಿ ಸ್ವೀಕರಿಸಿದರು.
ಉಳಿದಂತೆ ದಾಲ್ ಸ್ಟೀಲ್ ಗ್ರೂಪ್ ಗೆ ದಶಮಾನದ ಹೂಡಿಕೆದಾರ’, ಏಕಸ್ ಕಂಪನಿಗೆ
ಕಾರ್ಯಪರಿಸರ ನಿರ್ಮಾತೃ’, ಸನ್ ರೈಸ್ ವಲಯದಲ್ಲಿ ಸಾರ್ವಜನಿಕ ವಲಯದ ಎಚ್ಎಎಲ್, ಖಾಸಗಿ ವಲಯದ ಆರ್.ಟಿ.ಎಕ್ಸ್ (ವೈಮಾಂತರಿಕ್ಷ & ರಕ್ಷಣಾ ವಲಯ).
ಟೊಯೋಟಾ-ಕಿರ್ಲೋಸ್ಕರ್ (ವಾಹನ/ಇವಿ), ಬಯೋಕಾನ್ (ಬಿಟಿ/ಜೀವವಿಜ್ಞಾನ), ಬೋಯಿಂಗ್ (ಇಂಟರ್ನ್ಯಾಷನಲ್ ಪ್ರೊಕ್ಯೂರ್ಮೆಂಟ್ ಚಾಂಪಿಯನ್), ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ (ಆರ್ & ಡಿ), ಸ್ಯಾಮ್ಸಂಗ್ (ಇನ್ನೋವೇಶನ್ ಎಕ್ಸಲೆನ್ಸ್).
ಫಾಕ್ಸಕಾನ್ (ಇನ್ವೆಸ್ಟೆಂಟ್ ಟೈಟನ್), ಟಾಟಾ ಎಲೆಕ್ಟ್ರಾನಿಕ್ಸ್ (ಉತ್ಪಾದನೆ), ಇನ್ಫೋಸಿಸ್ (ಉದ್ಯೋಗಸೃಷ್ಟಿ), ಶಾಹಿ (ಉತ್ಕೃಷ್ಟ ನಾಯಕತ್ವ) ಮತ್ತು ರೆನ್ಯೂ ಪವರ್ (ಮರುಬಳಕೆ ಇಂಧನ) ಕಂಪನಿಗಳಿಗೆ ವಿವಿಧ ವಿಭಾಗಗಳಲ್ಲಿ ‘ಇನ್ವೆಸ್ಟ್ ಕರ್ನಾಟಕ’ಪುರಸ್ಕಾರಗಳನ್ನು ನೀಡಲಾಯಿತು.