ಚಾಮರಾಜನಗರ (Crime news): ಸ್ವಲ್ಪ ದಿನ ಸೈಲೆಂಟಾಗಿದ್ದ ಚೋರರು ಈಗ ಮತ್ತೆ ಆಕ್ಟೀವ್ ಆಗಿದ್ದಾರೆ. ಚಾಮರಾಜನಗರ ಜಿಲ್ಲಾ ಇತಿಹಾಸದಲ್ಲೇ ಕಂಡು ಕೇಳರಿಯದಂತ ಕಳ್ಳತನ ನಡೆದು ಹೋಗಿದೆ. ಕಳ್ಳತನ ವಿಚಾರ ಕೇಳಿ ಖಾಕಿ ಪಡೆಯೇ ಒಂದು ಕ್ಷಣ ದಂಗಾಗಿದೆ.
ನಗರದ ಶ್ರೀನಿವಾಸ್ ಕುಮಾರ್ ನಿವಾಸಕ್ಕೆ ನುಗ್ಗಿರುವ ಚೋರರು ಬರೋಬ್ಬರಿ ಮುಕ್ಕಾಲು ಕೆಜಿ ಚಿನ್ನ, 15 ಕೆಜಿ ಬೆಳ್ಳಿ ಹಾಗೂ 5.5 ಲಕ್ಷ ಹಾರ್ಡ್ ಕ್ಯಾಶ್ ದೋಚಿ ಗಾಯಬ್ ಆಗಿದ್ದಾರೆ.
ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದು, ಬೆರಳಚ್ಚು ತಜ್ಞರು ಎಫ್ಎಸ್ಎಲ್ ತಂಡ ಖದೀಮರು ಬಿಟ್ಟು ಹೋದ ಗುರುತು ಪತ್ತೆ ಹಚ್ಚುವಲ್ಲಿ ನಿರತರಾಗಿದ್ದಾರೆ.
ನಿನ್ನೆ ಶ್ರೀನಿವಾಸ್ ತಂದೆ ತಿಥಿಯ ಕಾರ್ಯವಿತ್ತು. ಹಾಗಾಗಿ, ಶ್ರೀನಿವಾಸ್ ಹಾಗೂ ಪತ್ನಿ ರೇಣುಕಾ ಬೆಂಗಳೂರಿಗೆ ತೆರಳಿದ್ದಾರೆ. ಮಕ್ಕಳು ಬೆಂಗಳೂರಿನಲ್ಲೆ ಸೆಟಲ್ ಆಗಿರೊ ಕಾರಣ ಗಂಡ-ಹೆಂಡ್ತಿ ಚಾಮರಾಜನಗರದಲ್ಲೇ ಇದ್ದರು.
ನಿನ್ನೆ ಬೆಳಗ್ಗೆ ಬೆಂಗಳೂರಿಗೆ ಹೋಗಿ ತಂದೆಯ ಕಾರ್ಯ ಮಾಡಿದ್ದಾರೆ. ಈ ವೇಳೆ ಮನೆಗೆ ನುಗ್ಗಿರುವ ಚೋರರು ಚಿನ್ನಾಭರಣ ಹಾಗೂ ನಗದನ್ನ ದೋಚಿ ಎಸ್ಕೇಪ್ ಆಗಿದ್ದಾರೆ.
ಪಕ್ಕದ ಮನೆಯವರು ಹಾಲು ತರಲೆಂದು ಆಚೆ ಬಂದಾಗ ಮನೆಯ ಬಾಗಿಲು ತೆರೆದಿತ್ತು. ಆಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.
ಚಾಮರಾಜನಗರ ಇತಿಹಾಸದಲ್ಲೇ ಇಷ್ಟು ದೊಡ್ಡ ಕಳ್ಳತನ ಪ್ರಕರಣ ಇದಾಗಿದ್ದು, ಸ್ವತಃ ಪೊಲೀಸರೇ ಹೌಹಾರಿದ್ದಾರೆ.
ಸದ್ಯ ಪ್ರಕರಣ ದಾಖಲಿಸಿ ಕೊಂಡಿರುವ ಚಾಮರಾಜನಗರ ಪಟ್ಟಣ ಠಾಣೆ ಪೊಲೀಸರು ಚೋರರ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.