ಬೆಂಗಳೂರು: ನಿನ್ನೆ ರಾತ್ರಿ ತಿರುಪತಿಯಲ್ಲಿ (Tirupati) ಸಂಭವಿಸಿದ ಕಾಲ್ತುಳಿತದಿಂದ 6 ಭಕ್ತರ ದಾರುಣ ಸಾವನಪ್ಪಿದ್ದಾರೆ. ಇವರಲ್ಲಿ ಓರ್ವ ಮಹಿಳೆ ಕರ್ನಾಟಕದ ಬಳ್ಳಾರಿ ಮೂಲದವರು ಎನ್ನಲಾಗಿತ್ತು. ಆದರೆ ಈ ಕುರಿತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ ನೀಡಿದ್ದು, ಕರ್ನಾಟಕದ ಭಕ್ತರಿಗೆ ಯಾವ ತೊಂದರೆಯಾಗಿಲ್ಲ ಎಂದಿದ್ದಾರೆ.
ಈ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ, ದುರಂತದ ಬಗ್ಗೆ ನಮ್ಮವರಿಂದ ಮಾಹಿತಿ ಪಡೆದುಕೊಂಡಿದ್ದೇನೆ. ಕರ್ನಾಟಕದಿಂದ ಹೋಗಿರುವ ಭಕ್ತರಿಗೆ ಯಾವುದೇ ತೊಂದರೆ ಆಗಿಲ್ಲ. ಭಕ್ತರಿಗೆ ಮೂಲ ಸೌಕರ್ಯ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದು ಇಒ ತಿಳಿಸಿದ್ದಾರೆ.
ವೈಕುಂಠ ಏಕಾದಶಿ ಇರುವುದರಿಂದ ಹೆಚ್ಚಿನ ಭಕ್ತರು ಹೋಗಿದ್ದಾರೆ. ತಿಮ್ಮಪ್ಪನ ದರ್ಶನಕ್ಕೆ ಹೆಚ್ಚಿನ ಭಕ್ತರು ಹೋಗಿದ್ದರಿಂದ ದುರಂತ ಸಂಭವಿಸಿದೆ. ಇಂತಹ ಸಂದರ್ಭದಲ್ಲಿ ಆಡಳಿತ ಮಂಡಳಿ ಹೆಚ್ಚು ಜಾಗ್ರತೆ ವಹಿಸಬೇಕು ಎಂದು ಹೇಳಿದ್ದಾರೆ.