ದೊಡ್ಡಬಳ್ಳಾಪುರ: ತಾಲೂಕಿನ ಕನಸವಾಡಿಯಲ್ಲಿ (Kanasavadi) ಆಯೋಜಿಸಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲಾ 26ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ ಭಾನುವಾರ ಸಂಜೆ ಜಿ.ಗೋಪಿನಾಥ್ ವೇದಿಕೆಯಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಸಮ್ಮೇಳನದ ಸರ್ವಾಧ್ಯಕ್ಷ ಟಿ.ಕೆಂಪಣ್ಣ ಮಾತನಾಡಿ, ಎರಡು ದಿನಗಳ ಕಾಲ ನಾಡಿನ ಇತಿಹಾಸ, ವರ್ತಮಾನ ಮತ್ತು ಭವಿಷ್ಯದ ಕುರಿತು ವಿವಿಧ ಸ್ತರಗಳಲ್ಲಿ ಗಂಭೀರ ಚರ್ಚೆಗಳು ನಡೆದಿವೆ.
ಸಾಹಿತ್ಯದ ಆಲೋಚನೆಗಳು ವಿಭಿನ್ನ ವಲಯಗಳನ್ನು ಮುಟ್ಟುವ ಹೊಸ ಮಾದರಿಯೊಂದು ಸಮ್ಮೇಳನದ ಮೂಲಕ ಹೊರಬಂದಿದೆ. ಸಾಂಸ್ಕೃತಿಕ ಮತ್ತು ಸಾಹಿತ್ಯ ವಲಯದ ಸಮನ್ವಯದ ವೇದಿಕೆಯಂತಿದ್ದ ಸಮ್ಮೇಳನದಲ್ಲಿ ಸದಭಿರುಚಿಯ ವಿಶ್ಲೇಷಣೆಗಳು ನಡೆದಿವೆ.
ಎಲ್ಲ ಹಂತಗಳಲ್ಲೂ ಸಮ್ಮೇಳನ ಯಶಸ್ವಿಯಾಗಿದೆ. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವಿವಿಧ ಘಟಕಗಳು, ಸ್ಥಳೀಯವಾಗಿ ಆಯೋಜನೆಯ ನೇತೃತ್ವ ವಹಿಸಿದ್ದ ಎಲ್ಲ ಸಾಹಿತ್ಯಾಸಕ್ತರು ಅಭಿನಂದನಾರ್ಹರು ಎಂದು ತಿಳಿಸಿದರು.
60ಕ್ಕೂ ಹೆಚ್ಚು ಗಣ್ಯರಿಗೆ ಸನ್ಮಾನ
ಸಮಾರೋಪ ಸಮಾರಂಭದ ವೇದಿಕೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ, ನೆಲಮಂಗಲ, ಹೊಸಕೋಟೆ ಮತ್ತು ದೇವನಹಳ್ಳಿ ತಾಲೂಕಿನ 40ಕ್ಕೂ ಹೆಚ್ಚು ಗಣ್ಯರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಪುರಸ್ಕಾರ ನೀಡಿ ಗೌರವಿಸಲಾಯಿತು.
ಮಧುರೆ ಹೋಬಳಿಯ ಹಿರಿಯ ಮುಖಂಡರು, ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 20ಕ್ಕೂ ಹೆಚ್ಚು ಗಣ್ಯರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
5 ಮಹತ್ವದ ನಿರ್ಣಯ
ಭೂಮಿ, ನೀರು, ಪರಿಸರ, ಭಾಷೆ ಮತ್ತು ಉದ್ಯೋಗಕ್ಕೆ ಸಂಬಂಧಪಟ್ಟ 5 ಮಹತ್ವದ ನಿರ್ಣಯಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ 26ನೇ ಕನ್ನಡ ಸಾಹಿತ್ಯ ಸಮ್ಮೇಳನ ಕೈಗೊಂಡಿದೆ.
ಭಾನುವಾರ ಸಮ್ಮೇಳನ ವೇದಿಕೆಯಲ್ಲಿ ನಡೆದ ಬಹಿರಂಗ ಅಧಿವೇಶನದಲ್ಲಿ ಬೆಂ.ಗ್ರಾ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಪ್ರೊ.ರವಿಕಿರಣ್ ಕೆ.ಆರ್ ನಿರ್ಣಯಗಳನ್ನು ಮಂಡಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಕೇವಲ ಸಾಹಿತ್ಯಿಕ ಚಿಂತನೆಗಳನ್ನು ಮಾತ್ರ ಆದ್ಯತೆಯ ವಿಷಯಗಳನ್ನಾಗಿ ಪರಿಗಣಿಸದೆ ನಾಡಿನ ಸಮಗ್ರ ಅಭಿವೃದ್ದಿ ಮತ್ತು ಸವಾಲು, ನೆಲದ ಹೋರಾಟಗಳು, ಆತಂಕಗಳ ಬಗ್ಗೆಯೂ ತನ್ನ ಇಚ್ಛಾಶಕ್ತಿಯನ್ನು ಹಲವು ವೇಳೆ ಪ್ರದರ್ಶಿಸಿದೆ. ರೈತರು, ಕಾರ್ಮಿಕರು ಹಾಗೂ ದುಡಿಯುವ ವರ್ಗದ ಆಶೋತ್ತರಗಳೂ ಸಾಹಿತ್ಯಿಕ ಚಿಂತನೆಗಳ ಮೂಲ ಆಶಯವೇ ಆಗಿದೆ ಎಂದರು.
ಸಮ್ಮೇಳನದ 5 ನಿರ್ಣಯಗಳು
- ಅಭಿವೃದ್ದಿಯ ಹೆಸರಿನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಯಲ್ಲಿ ಕೈಗಾರಿಕೆ ಹಾಗೂ ಇತರೆ ಉದ್ದೇಶಗಳಿಗಾಗಿ ಕೃಷಿ ಭೂಮಿಯನ್ನು ಬಲವಂತವಾಗಿ ಸ್ವಾದೀನ ಪಡಿಸಿಕೊಳ್ಳುವ ಪ್ರಯತ್ನಗಳನ್ನು ಸಮ್ಮೇಳನ ಸ್ಪಷ್ಟವಾಗಿ ವಿರೋಧಿಸುತ್ತದೆ. ರೈತರ ಹಿತಾಸಕ್ತಿಯೇ ಪರಮೋಚ್ಛವಾಗಿದ್ದು, ಜಿಲ್ಲೆಯ ಚನ್ನರಾಯಪಟ್ಟಣ ಹೋಬಳಿಯಲ್ಲಿಕಳೆದ 1 ಸಾವಿರಕ್ಕೂ ಹೆಚ್ಚು ದಿನಗಳಿಂದ ಅನ್ನದಾತರು ನಡೆಸುತ್ತಿರುವ ಹೋರಾಟಕ್ಕೆ ನ್ಯಾಯ ಒದಗಿಸುವಂತೆ ಸರ್ಕಾರವನ್ನು ಆಗ್ರಹಿಸುತ್ತದೆ.
- ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡತುಮಕೂರು, ಮಜರಾಹೊಸಹಳ್ಳಿ, ಕೊನಘಟ್ಟ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಕೈಗಾರಿಕೆ ಹಾಗೂ ರಾಸಾಯನಿಕ ತ್ಯಾಜ್ಯ ನೀರನ್ನು ಜೀವಂತ ಕೆರೆಗಳಿಗೆ ಹರಿಸುತ್ತಿರುವುದು ಖಂಡನೀಯ. ಈ ನಿಟ್ಟಿನಲ್ಲಿ ಕೆರೆಗಳ ಸಂರಕ್ಷಣೆ ಕುರಿತ ಹೋರಾಟವನ್ನು ಸಮ್ಮೇಳನ ಬೆಂಬಲಿಸುತ್ತದೆ. ಈ ಭಾಗದ ಗ್ರಾಮಗಳಿಗೆ 3ನೇ ಹಂತದ ಶುದ್ದೀಕರಿಸಿದ ನೀರನ್ನು ಪೂರೈಸುವ ಮತ್ತು ಶುದ್ದ ಕುಡಿಯುವ ನೀರಿನ ಪೂರೈಕೆಗೆ ಕೂಡಲೇ ಕ್ರಮ ವಹಿಸುವಂತೆ ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ಹಕ್ಕೊತ್ತಾಯ ಮಾಡುತ್ತದೆ.
- ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆರೆ-ಕುಂಟೆಗಳು, ಜಲಮೂಲಗಳು, ಜೀವಿ ವೈವಿಧ್ಯತೆಯನ್ನು ರಕ್ಷಿಸಿ, ಪರಂಪರೆಯ ಅನನ್ಯತೆಯನ್ನು ಉಳಿಸಲು ಸರ್ಕಾರ ಗಂಭೀರ ಕ್ರಮ ಕೈಗೊಳ್ಳಬೇಕು. ದೊಡ್ಡಬಳ್ಳಾಪುರ ಸೇರಿದಂತೆ ಜಿಲ್ಲೆಯ ಯಾವುದೇ ತಾಲೂಕಿನಲ್ಲೂ ಬಿಬಿಎಂಪಿ ಕಸ ಸಂಸ್ಕರಣಾ ನೂತನ ಘಟಕಗಳನ್ನು ತೆರೆಯಬಾರದು.
- ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಕನ್ನಡ ನುಡಿ ಎಲ್ಲ ಹಂತಗಳಲ್ಲೂ ಅನುಷ್ಠಾನಗೊಳ್ಳಬೇಕು. ಕನ್ನಡವನ್ನು ಭವಿಷ್ಯದ ಉದ್ಯೋಗದಾಯಿ ಭಾಷೆಯಾಗಿ ರೂಪಿಸುವ ನಿಟ್ಟಿನಲ್ಲಿ ವಿಜ್ಞಾನ, ತಂತ್ರಜ್ಞಾನ, ಆಡಳಿತ, ಕಾನೂನಿನ ಭಾಷೆಯಾಗಿ ರೂಪಿಸಲು ಕ್ರಮ ವಹಿಸಬೇಕು. ಪಾರಿಭಾಷಿಕ ಪದಕೋಶಗಳ ರಚನೆ ಮತ್ತು ಪ್ರಕಟಣೆಗೆ ಸರ್ಕಾರ ಮುಂದಾಗಬೇಕು.
- ಜಿಲ್ಲಾ ವ್ಯಾಪ್ತಿಯಲ್ಲಿ ಈಗಾಗಲೇ ಇರುವ ಕೈಗಾರಿಕಾ ವಸಾಹತುಗಳು, ಕಾರ್ಖಾನೆ, ಖಾಸಗಿ ಉದ್ದಿಮೆಗಳಲ್ಲಿ ಸ್ಥಳೀಯ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಒದಗಿಸಬೇಕು. ಡಿ ದರ್ಜೆ ಹುದ್ದೆಗಳಿಗೆ ಮಾತ್ರ ಸೀಮಿತವಾಗದೆ, ಉನ್ನತ ಹಂತದ ಹುದ್ದೆಗಳಲ್ಲೂ ಸ್ಥಳೀಯರಿಗೆ ಮೀಸಲಾತಿ ಜಾರಿಗೊಳ್ಳಬೇಕು. ಉದ್ಯೋಗ ಕೌಶಲ್ಯಗಳ ತರಬೇತಿಗೆ ಕ್ರಮ ವಹಿಸಬೇಕು.
ಜ್ಞಾನಾಧಾರಿತವಾಗಿ ಎಲ್ಲ ಭಾಷೆಗಳಿಗೂ ಮನ್ನಣೆ ನೀಡುವ ಕರ್ನಾಟಕದಲ್ಲಿ ಹಿಂದಿ ಸೇರಿದಂತೆ ಯಾವುದೇ ಭಾಷೆಯ ಬಲವಂತದ ಹೇರಿಕೆಯನ್ನು ಸಮ್ಮೇಳನ ಸ್ಪಷ್ಟವಾಗಿ ವಿರೋಧಿಸುತ್ತದೆ.
ಸಮ್ಮೇಳನದ ಸರ್ವಾಧ್ಯಕ್ಷ ಟಿ.ಕೆಂಪಣ್ಣ, ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚುಂಚೇಗೌಡ, ತಾಪಂ ಮಾಜಿ ಅಧ್ಯಕ್ಷ ಎಂ.ಲಕ್ಷ್ಮೀಪತಯ್ಯ, ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎನ್.ಕೃಷ್ಣಪ್ಪ, ಕಾರ್ಯದರ್ಶಿ ಕೆ.ಆರ್.ರವಿಕಿರಣ್, ಕೋಶಾಧ್ಯಕ್ಷ ಮುನಿರಾಜು, ತಾ.ಕಸಾಪ ಅಧ್ಯಕ್ಷ ಪಿ.ಗೋವಿಂದರಾಜು, ಹೋಬಳಿ ಅಧ್ಯಕ್ಷ ಜಿ.ಸುರೇಶ್, ಹೊಂಗಿರಣ ಸಮಾನ ಮನಸ್ಕರ ವೇದಿಕೆಯ ವೆಂಕಟಾಚಲಪತಿ, ನಿವೃತ್ತ ಮುಖ್ಯಶಿಕ್ಷಕ ರಾಮಯ್ಯ, ರವಿಕುಮಾರ್, ನಿವೃತ್ತ ಕಾರಾಗೃಹ ಅಧೀಕ್ಷಕ ಲಕ್ಷ್ಮೀನಾರಾಯಣ್, ವೀಣೆ ತಯಾರಕ ಉಮೇಶ್, ಪತ್ರಕರ್ತರ ಕ್ಷೇಮಾಭಿವೃದ್ದಿ ಟ್ರಸ್ಟ್ ಅಧ್ಯಕ್ಷ ಡಿ.ಶ್ರೀಕಾಂತ ಸೇರಿದಂತೆ ಮಧುರೆ ಹೋಬಳಿಯ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.