ದೊಡ್ಡಬಳ್ಳಾಪುರ (Doddaballapura): ವಿಶ್ವ ಹಿಂದೂ ಪರಿಷತ್ ಬಜರಂಗದಳ ವತಿಯಿಂದ ನಗರದ ಭಗತ್ಸಿಂಗ್ ಕ್ರೀಡಾಂಗಣದಲ್ಲಿ ಶ್ರೀ ರಾಮೋತ್ಸವ ಹಾಗೂ ಬೃಹತ್ ಶ್ರೀರಾಮ ಶೋಭಾಯಾತ್ರೆ ಏ.11ರಿಂದ ಮೂರು ದಿನಗಳ ಕಾಲ ನಡೆಯಲಿದ್ದು, ಏ.13ರಂದು ಬೃಹತ್ ಶ್ರೀರಾಮ ಶೋಭಾಯಾತ್ರೆ ನಡೆಯಲಿದೆ.
ಕಳೆದ 10 ವರ್ಷಗಳಿಂದ ಶ್ರೀರಾಮೋತ್ಸವ ಹಾಗೂ ಬೃಹತ್ ಶ್ರೀರಾಮ ಶೋಭಾಯಾತ್ರೆಯನ್ನು ನಡೆಸಿಕೊಂಡು ಬರಲಾಗುತ್ತಿದ್ದು, 3 ವರ್ಷಗಳಿಂದ ಇದು ಬೃಹತ್ ಉತ್ಸವವಾಗಿ ನಡೆಯುತ್ತಿದೆ.
ಕಾರ್ಯಕ್ರಮದ ಅಂಗವಾಗಿ ವಾಹನ ಜಾಥಾ, ಹೋಮ ಹವನಾದಿಗಳು, ಕಲ್ಯಾಣೋತ್ಸವ, ವಿವಿಧ ದೇವರುಗಳ ಬೃಹತ್ ಶೋಭಾ ಯಾತ್ರೆ ನಡೆಯಲಿದ್ದು, ಈ ಬಾರಿ ಹೋಮದ ಪೂಜೆಯಲ್ಲಿ ಪೌರಕಾರ್ಮಿಕ ದಂಪತಿಗಳು ಭಾಗವಹಿಸುತ್ತಿರುವುದು ವಿಶೇಷವಾಗಿದೆ.
ಕಾರ್ಯಕ್ರಮಗಳು
ಏ.11ರಂದು ಸಂಜೆ 4ಗಂಟೆಗೆ ನಗರದ ದರ್ಗಾಜೋಗಿಹಳ್ಳಿಯ ಕೆಂಪಮ್ಮ ದೇವಾಲಯದ ಬಳಿಯಿಂದ ಬೈಕ್, ಕಾರು ಸೇರಿದಂತೆ ವಿವಿಧ ವಾಹನಗಳ ಜಾಥಾ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ. ಸಂಜೆ 6.30 ಗಂಟೆಗೆ ಭಗತ್ಸಿಂಗ್ ಕ್ರೀಡಾಂಗಣದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಏ.12ರಂದು ಬೆಳಿಗ್ಗೆ 7 ಗಂಟೆಯಿಂದ ಗೋ ಪೂಜೆ, ಮಹಾಗಣಪತಿ ಹೋಮ, ರಾಮ ತಾರಕ ಹೋಮ, ದುರ್ಗಾ ಹೋಮಗಳಿವೆ. ಮಧ್ಯಾಹ್ನ ಸಾವಿರಾರು ಮಹಿಳೆಯರಿಂದ ಲಲಿತ ಸಹಸ್ರನಾಮ ಮತ್ತು ಹನುಮಾನ್ ಚಾಲಿಸ್ ಸಾಮೂಹಿಕ ಪಠಣ ನಡೆಯಲಿದೆ. ಸಂಜೆ 4 ಗಂಟೆಗೆ ಶ್ರೀ ಸೀತಾರಾಮ ಕಲ್ಯಾಣೋತ್ಸವ ನಡೆಯಲಿದೆ.
ಏ.13 ರಂದು ಮಧ್ಯಾಹ್ನ 12.30ಕ್ಕೆ ಭಗತ್ಸಿಂಗ್ ಕ್ರೀಡಾಂಗಣದಿಂದ ಬೃಹತ್ ಶೋಭಾ ಯಾತ್ರೆ ನಡೆಯಲಿದೆ. ಮೆರವಣಿಗೆಯಲ್ಲಿ ಭಾರತ ಮಾತೆ, ಶ್ರೀರಾಮ, ಹನುಮ, ಶಿವ, ಭುವನೇಶ್ವರಿ, ಅಂಬೇಡ್ಕರ್, ಶಿವಾಜಿ ಪ್ರತಿಮೆಗಳೊಂದಿಗೆ ವಿವಿಧ ಕಲಾತಂಡಗಳು ಭಾಗವಹಿಸಲಿವೆ.
ನಂತರ ಕಾಸರಗೂಡಿನ ಕುಂಟಾರು ರವೀಶ್ ತಂತ್ರಿ ಅವರಿಂದ ದಿಕ್ಸೂಚಿ ಭಾಷಣವಿದೆ. ಸಂಜೆ ಭಗತ್ಸಿಂಗ್ ಕ್ರೀಡಾಂಗಣದಲ್ಲಿ ಲೇಸರ್ ಶೋ, ಬೃಹತ್ ರಾವಣ ದಹನ ಮತ್ತು ಆಕರ್ಷಕ ಸಿಡಿಮದ್ದುಗಳ ಪ್ರದರ್ಶನ ಕಾರ್ಯಕ್ರಮಗಳಿವೆ.
ಹಿಂದೂ ಸಮಾಜದ ಪ್ರತೀಕವಾಗಿ ಶಕ್ತಿ ತೋರಿಸುವ ಈ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.