ಕೆ.ಆರ್.ಪೇಟೆ (KR Pete): ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಅಪ್ಪನಹಳ್ಳಿ ಗ್ರಾಮದಲ್ಲಿ ಗ್ರಾಮದೇವತೆ ಸತ್ಯಮ್ಮ ದೇವಿಯ ಹಬ್ಬವು ಸಡಗರ ಸಂಭ್ರಮದಿಂದ ನಡೆಯಿತು.
ಗ್ರಾಮಸ್ಥರು ಗ್ರಾಮದ ರಸ್ತೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಿದ್ದು, ಮಹಿಳೆಯರು ಬಣ್ಣಬಣ್ಣದ ರಂಗೋಲಿಯನ್ನು ಹಾಕಿ ಗ್ರಾಮದಲ್ಲಿ ಹಬ್ಬದ ರಂಗನ್ನು ಹೆಚ್ಚಿಸಿದ್ದರು.
ಗ್ರಾಮದ ರಾಜ ಬೀದಿಗಳಲ್ಲಿ ತಂಬಿಟ್ಟಿನ ಆರತಿಯೊಂದಿಗೆ ಮಹಿಳೆಯರು ಮೆರವಣಿಗೆ ಮೂಲಕ ದೇವಸ್ಥಾನದ ವರೆಗೆ ಬಂದು ಪೂಜೆ ಸಲ್ಲಿಸಿ, ಗ್ರಾಮವು ಸುಭಿಕ್ಷೆ ಯಿಂದ ಇರಲಿ ಎಂದು ಸತ್ಯಮ್ಮ ದೇವಿಗೆ ಪೂಜಿಸಿದರು.
ಗ್ರಾಮದಲ್ಲಿ ಬರಗಾಲ ಆವರಿಸಿದ್ದು, ಜಾನುವಾರುಗಳಿಗೆ ಮೇವಿಲ್ಲದೆ ಪರಿತಪಿಸುತ್ತಿರುವ ಸಂದರ್ಭದಲ್ಲಿ ವರುಣ ದೇವನು ಆದಷ್ಟು ಬೇಗ ಮಳೆಯನ್ನು ಸುರಿಸಿ ಜನ ಜಾನುವಾರುಗಳಿಗೆ ಅನುಕೂಲ ಮಾಡಿಕೊಡಲಿ ಮತ್ತು ಯಾವುದೇ ರೀತಿಯ ರೋಗರುಜಿನಗಳು ರಾಸುಗಳಿಗೆ ಬಾರದಿರಲಿ, ಉತ್ತಮ ಮಳೆಯಾಗಿ ನಾಡು ಸಂತೃಪ್ತಿ ಯಾಗಿರಲಿ ಎಂದು ಪ್ರಾರ್ಥಿಸಿದ ಗ್ರಾಮದ ಮಹಿಳೆಯರು ಮತ್ತು ಮಕ್ಕಳು ಗ್ರಾಮದೇವತೆ ಸತ್ಯಮ್ಮ ದೇವಿಗೆ ತಂಬಿಟ್ಟಿನ ಆರತಿಯನ್ನು ಬೆಳಗುವುದರ ಮೂಲಕ ಪೂಜಿಸಿದರು.