ದೊಡ್ಡಬಳ್ಳಾಪುರ (Doddaballapura): ತಾಲೂಕಿನ ಗುಟ್ಟೆ (ಕಾಮೇನಹಳ್ಳಿ) ಲಕ್ಷ್ಮೀನರಸಿಂಹಸ್ವಾಮಿ ಕ್ಷೇತ್ರದಲ್ಲಿ ಇಂದಿನಿಂದ ಮಾ.15ರ ವರೆಗೆ ಜಾತ್ರಾ ಮಹೋತ್ಸವ ನಡೆಯಲಿದೆ.
ಇಂದು (ಮಾ.13) ಗಂಗಾಪೂಜೆ ಅಂಕುರಾರ್ಪಣೆ, ಪುಣ್ಯಾಃ – ಪಂಚಗವ್ಯ ರಕ್ಷಾಬಂಧನ, ಶೋಡಶೋಪಚಾರ ಪೂಜೆ, ಧ್ವಜಾರೋಹಣ ಸಂಕಲ್ಪ, ಗಣಹೋಮ ನೃಸಿಂಹ ಹೋಮ, ಸುದರ್ಶನ ಹೋಮ, ಪ್ರಪ್ರಧಮ ಸಂಕಲ್ಪ ಹಾಗೂ ಪೂಜಾ ಕೈಂಕರ್ಯ, ದೊಡ್ಡಬಳ್ಳಾಪುರ ತಾಲ್ಲೂಕು ಕಲಾವಿದರ ಸಂಘದಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸುಗಮ ಸಂಗೀತ ನಡೆಯಲಿದೆ.
ನಾಳೆ (ಮಾ.14) ಬೆಳಿಗ್ಗೆ 9.00 ಗಂಟೆಗೆ ಸರಿಯಾಗಿ ಶ್ರೀಕ್ಷೇತ್ರಕ್ಕೆ ತುಮಕೂರಿನ ಶ್ರೀ ಸಿದ್ದಗಂಗಾ ಮರಾಧ್ಯಕ್ಷರಾದ ಶ್ರೀ ಸಿದ್ದಲಿಂಗಮಹಾಸ್ವಾಮಿಗಳಿಂದ ತ್ರಿವಿಧ ದಾಸೋಹಿ, ನಡೆದಾಡುವ ದೇವರು, ಕರ್ನಾಟಕ ರತ್ನ ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ಪುತ್ಥಳಿ ಅನಾವರಣ ಹಾಗೂ ಭಕ್ತ ಸಮೂಹಕ್ಕೆ ಆಶೀರ್ವಚನ.
ಮಧ್ಯಾಹ್ನ 12.05ಕ್ಕೆ ಸಲ್ಲುವ ಶುಭ ಅಭಿಜನ್ ಲಗ್ನದಲ್ಲಿ ಇದೇ ಮೊದಲ ಬಾರಿಗೆ ವಿಜೃಂಭಣೆಯಿಂದ ರಥೋತ್ಸವ ನೆರವೇರಲಿದೆ.
ಇದೇ ಸಂದರ್ಭದಲ್ಲಿ ನೂತನವಾಗಿ ನಿರ್ಮಿಸಿರುವ ರಥಕ್ಕೆ ದಶಶಾಂತಿ ಹೋಮಗಳು ಜರುಗಲಿವೆ.
ವೀರಗಾಸೆ, ನಂದಿಧ್ವಜ, ಡೊಳ್ಳುಕುಣಿತ, ಗಾರುಡಿಗೊಂಬೆ, ತಮಟೆ, ಸೋಮನ ಕುಣಿತ, ಚಿಟ್ಟಿಮೇಳ ಇನ್ನಿತರೆ ಕಲಾವಿದರು ಭಾಗವಹಿಸಲಿದ್ದಾರೆ.
ಸಂಜೆ 4-00 ರಿಂದ ಪಚ್ಚಾರಹಳ್ಳಿ, ಕಾಮೇನಹಳ್ಳಿ, ಆಮಲಗುಂಟೆ, ಆರೂಢಿ, ದೊಡ್ಡಗುಂಡಪ್ಪನಾಯಕನಹಳ್ಳಿ, ಕಲ್ಲುಕುಂಟೆ, ಗರಿಕೇನಹಳ್ಳಿ, ವಡ್ಡನಹಳ್ಳಿ ಕೊಟ್ಟಿಗೆಮಾಚೇನಹಳ್ಳಿ ಹಾಗೂ ಇನ್ನಿತರೆ ಗ್ರಾಮಸ್ತರಿಂದ ದೀಪಾರತಿಗಳು ನಡೆಯಲಿದೆ.
ಇದೇ ದಿನ ಸಂಜೆ 7-00 ರಿಂದ 9-30 ಗಂಟೆಯವರೆಗೆ ತುಮಕೂರಿನ ಹೆಸರಾಂತ ಕಲಾವಿದರಾದ ಡಾ. ಲಕ್ಷ್ಮಣ್ ದಾಸ್ರವರಿಂದ ಹರಿಕಥೆ.
ಮಾ.15ರಂದು ಜಾತ್ರಾ ಮಹೋತ್ಸವದ ಜಲಧಿ ಕಾಯಕ್ರಮ, ಬಾಳೆಮರ ಅಂಬು ಹಾಕುವ ಮುಖೇನ ಶಾಂತಿ ಸಂಪನ್ನ. ಶನಿವಾರ ಸಂಜೆ 8-00 ಗಂಟೆಗೆ ಶ್ರೀ ಸೋಮೇಶ್ವರ ನಾಟಕ ಮಂಡಲಿ, ಸೂಲಿಬೆಲೆ ಇವರಿಂದ ಕುರುಕ್ಷೇತ್ರ ಅಥವಾ ಶ್ರೀ ಕೃಷ್ಣ ಸಂಧಾನ ಪೌರಾಣಿಕ ನಾಟಕ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.