Daily story; ನಾವು-ನೀವು ಎಲ್ಲರೂ ಬದುಕಿನಲ್ಲಿ ಆಗೊಮ್ಮೆ ಈಗೊಮ್ಮೆ ಯಾವ್ಯಾವುದೋ ನೋವಿನಿಂದ ನರಳಿರಬಹುದಲ್ಲವೇ? ಆ ನೋವಿನ ಪ್ರಮಾಣ ಅಥವಾ ಅವಧಿ ಬೇರೆ ಬೇರೆ ಇರಬಹುದು! ಆದರೆ ನೋವೇ ಇಲ್ಲದವರು ಯಾರಾದರೂ ಇದ್ದಾರೆಯೇ? ಇರಲಿಕ್ಕಿಲ್ಲ ಅಲ್ಲವೇ? ನೋವಿನ ಬಗೆಗಿನ ಕತೆಯೊಂದು ಇಲ್ಲಿದೆ.
ಒಬ್ಬ ರಾಜಕುಮಾರ ಇದ್ದರಂತೆ. ವೈಭವೋಪೇತ ಅರಮನೆಯಲ್ಲಿ ವಾಸ. ಇಂತಹದ್ದು ಬೇಕು ಎಂದು ಬಾಯ್ಬಿಡುವ ಮುಂಚೆಯೇ ಅದನ್ನು ತಂದು ಮುಂದಿಡುವ ತಾಯ್ತಂದೆಯರು, ಕೂತು ಉಂಡರೂ ಮುಗಿಯದಷ್ಟು ಸಿರಿವಂತಿಕೆ.
ಇವೆಲ್ಲ ಇದ್ದರೂ ಆ ರಾಜಕುಮಾರರಿಗೆ ಮನಃಶಾಂತಿ ಇರಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಅವರು ಬೌದ್ಧ ಧರ್ಮದ ಪ್ರಭಾವಕ್ಕೆ ಒಳಗಾದರು.
ತಮ್ಮ ಎಲ್ಲಾ ತುಡಿತಗಳಿಗೂ ಅಲ್ಲಿ ಉತ್ತರ ಸಿಗಬಹುದು ಎನಿಸಿತು.
ರಾಜ ಪರಿವಾರವನ್ನು ತೊರೆದರು. ಬೌದ್ಧ ಭಿಕ್ಷು ಆದರು. ಆನಂತರ ಅವರು ಕುಟೀರದಲ್ಲಿ ವಾಸಿಸುತ್ತಿದ್ದರು. ಚಾಪೆಯ ಮೇಲೆ ಮಲಗುತ್ತಿದರು. ಭಿಕ್ಷಾಟನೆಯಿಂದ ಸಿಗುತ್ತಿದ್ದ ಅನ್ನಾಹಾರಗಳ ಸೇವನೆ. ಧ್ಯಾನ-ಅಧ್ಯಯನಗಳಲ್ಲಿ ಮಗ್ನ.
ಮೊದಲಿನ ಸಿರಿವಂತ ಬದುಕಿಗೂ ಈಗಿನ ಬಡತನದ ಬದುಕಿಗೂ ಆಕಾಶ ಭೂಮಿಗಳಷ್ಟು ಅಂತರ. ಆದರೂ ಅವರಿಗೆ ಏನೋ ಸಾಧಿಸುತ್ತೇನೆಂಬ ಹುಮ್ಮಸ್ಸು. ಎಲ್ಲರ ಬದುಕಿನಲ್ಲೂ ಆಗುವಂತೆ ಎಲ್ಲವೂ ಚೆನ್ನಾಗಿದೆ ಎಂದು ಅವರು ಅಂದುಕೊಳ್ಳುತ್ತಿರುವ ಸಮಯದಲ್ಲೇ ಅವರಿಗೊಂದು ಸಮಸ್ಯೆ ಎದುರಾಯಿತು.
ಅವರ ಆರೋಗ್ಯದಲ್ಲಿ ಏರುಪೇರುಂಟಾಯಿತು. ಅವರನ್ನು ಸಂಧಿವಾತ ನೋವು ಕಾಡತೊಡಗಿತು. ಏನೋ ನೋವು ಬಂದಿದೆ.
ಒಂದೆರಡು ದಿನವಿದ್ದು ಹೊರಟು ಹೋಗುತ್ತದೆಂದು ಭಾವಿಸಿದ್ದ ನೋವು ಅವರಿಗೆ ಒಂದೇ ಸಮನೆ ಬಾಧಿಸತೊಡಗಿತು. ನಡೆಯಲಾಗುತ್ತಿರಲಿಲ್ಲ. ಕುಳಿತುಕೊಳ್ಳಲಾಗುತ್ತಿರಲಿಲ್ಲ. ಮಲಗಲೂ ಆಗುತ್ತಿರಲಿಲ್ಲ. ಅಷ್ಟೊಂದು ನೋವು! ಹೀಗಾಗಿ ಅವರು ಅಧ್ಯಯನ, ಧ್ಯಾನ, ಸಂಚಾರಗಳೆಲ್ಲವನ್ನೂ ಬಿಡಬೇಕಾಗಿ ಬಂದಿತು.
ಯಾವ ಔಷಧಿಯೂ ಅವರ ನೋವನ್ನು ಕಡಿಮೆ ಮಾಡಲಿಲ್ಲ. ಯಾರಿಗೆ ಹೇಳಿಕೊಳ್ಳಲೂ ಸಾಧ್ಯವಿಲ್ಲ. ಹೇಳಿಕೊಂಡರೂ ಪ್ರಯೋಜನವಿಲ್ಲ. ಇನ್ನು ಬದುಕುವುದೇ ಬೇಡವೆನ್ನಿಸುವಷ್ಟು ನೋವು ಅವರನ್ನು ಕಾಡುತ್ತಿತ್ತು.
ಈ ಪರಿಯ ನೋವಿನಿಂದ ನರಳುತ್ತಲಿದ್ದ ಅವರು ಒಂದು ದಿನ ಊರಿನಲ್ಲಿ ಸುತ್ತಾಡುವಾಗ ಮಕ್ಕಳು ಆಡುತ್ತಿರುವುದನ್ನು ಕಂಡರು.
ಮಕ್ಕಳೆಲ್ಲ ಕೇಕೆ ಹೊಡೆದು ಆನಂದದಿಂದ ಕಿರುಚಾಡುತ್ತಾ ಆಟವಾಡುತ್ತಿದ್ದರು. ಸುತ್ತ ಮುತ್ತಲಿನ ಪರಿವೆಯೇ ಇಲ್ಲದೆ ಆನಂದದಿಂದ ಆಡುತ್ತಿದ್ದ ಆ ಮಕ್ಕಳನ್ನು ನೋಡಿ ಈ ಬೌದ್ಧ ಭಿಕ್ಷುವಿಗೆ ಆಶ್ಚರ್ಯವಾಯಿತು. ಅವರು ಮತ್ತೂ ಗಮನವಿಟ್ಟು ಆ ಮಕ್ಕಳನ್ನು ನೋಡಿದರು. ಆಗ ಅವರಿಗೆ ಮಕ್ಕಳ ಗುಂಪಿನ ಮಧ್ಯೆ ಆಡುತ್ತಿದ್ದ ಒಬ್ಬ ಪುಟ್ಟ ಹುಡುಗಿಯು ಅವರ ಗಮನ ಸೆಳೆಯಿತು. ಆಕೆಗೆ ಒಂದು ಕಾಲಿರಲಿಲ್ಲ.
ಊರುಗೋಲಿನ ಸಹಾಯದಿಂದ, ಇರುವ ಒಂದೇ ಕಾಲಿನ ಆಸರೆಯಿಂದ, ಆಕೆ ಇತರ ಮಕ್ಕಳೊಂದಿಗೆ ಆಡುತ್ತಿದ್ದಳು. ಕುಣಿಯುತ್ತಿದ್ದಳು. ಕುಪ್ಪಳಿಸುತ್ತಿದ್ದಳು. ಆಕೆಯನ್ನು ನೋಡಿದ ತಕ್ಷಣ ಬೌದ್ಧ ಭಿಕ್ಷುವಿಗೆ ‘ಈ ಪುಟ್ಟ
ಹುಡುಗಿಗೆ ಒಂದು ಕಾಲೇ ಇಲ್ಲ. ಆದರೆ ಅದರ ಪರಿವೆಯೇ ಇಲ್ಲದೆ ಆನಂದದಿಂದ ಆಡುತ್ತಿದ್ದಾಳೆ.
ನನಗೆ ಎರಡೂ ಕಾಲುಗಳಿವೆ, ಕೈಗಳಿವೆ. ಆದರೆ ಸ್ವಲ್ಪ ನೋವಿದೆ. ಆ ನೋವನ್ನು ತಡೆಯಲಾಗದೆ ಬದುಕುವುದೇ ಬೇಡ ಎಂದುಕೊಳ್ಳುತ್ತಿದ್ದೇನಲ್ಲಾ ನಾನೆಂಥ ದಡ್ಡ?’ ಎಂಬ ಯೋಚನೆ ಮೂಡಿತು.
ತಕ್ಷಣ ಅವರ ಮುಖದಲ್ಲಿ ನಗು ಅರಳಿತು. ಆ ಕ್ಷಣವೇ ಅವರ ಆಚಾರ- ವಿಚಾರಗಳು ಬದಲಾದವು. ಆಶ್ಚರ್ಯವೆಂದರೆ ಕೆಲವೇ ದಿನಗಳಲ್ಲಿ ಅವರ ನೋವು ಅವರನ್ನು ಬಾದಿಸುತ್ತಿರಲಿಲ್ಲ! ಎಂದೋ ಓದಿದ್ದ ಈ ಪುಟ್ಟ ಕತೆಯೊಂದಿಗೆ ಮತ್ತೊಂದು ಮಾತೂ ನೆನಪಿಗೆ ಬರುತ್ತಿದೆ.
ಬದುಕಿನಲ್ಲಿ ನೋವುಗಳನ್ನು ಎದುರಿಸಬೇಕಾಗಿ ಬಂದಾಗ ನಮಗಿಂತ ಹೆಚ್ಚು ನೋವಿನಿಂದ ನರಳುತ್ತಿರುವವರನ್ನು ನೋಡಿ, ನಮಗೆ ನಾವೇ ಸಾಂತ್ವನ ಹೇಳಿಕೊಳ್ಳಬೇಕಂತೆ! ಹಾಗೆಯೇ ನಲಿವು ಬಂದಾಗ ನಮಗಿಂತ ಕಡಿಮೆ ನಲಿವಿನಲ್ಲಿಯೂ ನಗು-ನಗುತ್ತಿರುವವರನ್ನು ನೋಡಿ ಸಮಾಧಾನ ಮಾಡಿಕೊಳ್ಳಬೇಕಂತೆ! ಅದಿರಲಿ. ನೋವು-ನಲಿವುಗಳು ದೈಹಿಕವೋ? ಮಾನಸಿಕವೋ? ಯಾರ ನೋವು ದೊಡ್ಡದು? ನಮ್ಮದೋ? ಅವರದ್ದೋ?
ಕೃಪೆ: ಎಸ್.ಷಡಕ್ಷರಿ.