ಬೆಂಗಳೂರು: ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ನಡೆದಿದ್ದ ರೌಡಿಶೀಟರ್ನ ಬರ್ಬರ ಹತ್ಯೆ ಪ್ರಕರಣದಲ್ಲಿ ಐವರು ಆರೋಪಿಗಳನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ (Arrest).
ಮುನಿರಾಜು (24 ವರ್ಷ), ರಾಜೇಶ್ (21 ವರ್ಷ), ಯತೀಶ್ ಗೌಡ (26 ವರ್ಷ), ವಿನಯ್ ಕುರ್ಮಾ (25 ವರ್ಷ) ಹಾಗೂ ಉದಯ್ (19 ವರ್ಷ) ಬಂಧಿತರು.
ಮಾರ್ಚ್ 4ರಂದು ರಾತ್ರಿ ಹೆಸರಘಟ್ಟ ಮುಖ್ಯರಸ್ತೆಯ ಕೊಡಗಿ ತಿರಮಲಾಪುರದ ಸಾಯಿ ಸ್ಪಿರಿಟ್ ಜೋನ್ ಬಾರ್ನಲ್ಲಿ ಜಯರಾಮ್ (40 ವರ್ಷ) ಎಂಬಾತನನ್ನು ಮಾರಕಾಸ್ತ್ರಗಳಿಂದ ಹಲ್ಲೆಗೈದು ಹತ್ಯೆ ಮಾಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಜೈಲಿನಲ್ಲಿದ್ದುಕೊಂಡೇ ಅಣ್ಣನ ಹತ್ಯೆಗೆ ಸೇಡು ತೀರಿಸಿಕೊಂಡ ತಮ್ಮ
2016ರಲ್ಲಿ ಯಲಹಂಕ ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕಿರಣ್ ಎಂಬಾತನ ಹತ್ಯೆಯಲ್ಲಿ ಜಯ ರಾಮ್ ಪ್ರಮುಖ ಆರೋಪಿಯಾಗಿದ್ದ.
ಯುವತಿ ಯೊಬ್ಬಳ ವಿಚಾರಕ್ಕೆ ನಡೆದ ಜಗಳದಲ್ಲಿ ಕಿರಣ್ ಹತ್ಯೆಯಾಗಿತ್ತು. ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿ ಹೊರಬಂದಿದ್ದ ಜಯರಾಮ್, ಬಳಿಕ ಹೆಸರಘಟ್ಟ ಸಮೀಪದ ಹುರಳಿ ಚಿಕ್ಕನಾಯಕನ ಹಳ್ಳಿಯಲ್ಲಿ ಕೋಳಿ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದ.
ಇತ್ತ ಜಯರಾಮ್ನ ವಿರುದ್ಧ ಸೇಡು ತೀರಿಸಿಕೊಳ್ಳಲು ಕಿರಣ್ ಸಹೋದರ ಮನೋಜ್ ಹಪಹಪಿಸುತ್ತಿದ್ದ. ಆದರೆ, 2023ರಲ್ಲಿ ಸಿಸಿಬಿ ಪೊಲೀಸರು ಗೂಂಡಾ ಕಾಯಿದೆಯಡಿ ಮನೋಜ್ ನನ್ನು ಬಂಧಿಸಿ ಜೈಲಿಗಟ್ಟಿದ್ದರು.
ಜೈಲಿನಲ್ಲಿದ್ದು ಕೊಂಡೇ ಜಯರಾಮ್ನ ಹತ್ಯೆಗೆ ಸಂಚು ರೂಪಿಸಿದ್ದ ಮನೋಜ್, ಇತರೆ ಆರೋಪಿಗಳಾದ ಮುನಿರಾಜು ಆ್ಯಂಡ್ ಟೀಂ ಜತೆಗೆ ನಿರಂತರ ಸಂಪರ್ಕದಲ್ಲಿದ್ದ.
ಅದರಂತೆ ಕೆಲ ದಿನಗಳಿಂದಲೂ ಜಯರಾಮ್ನನನ್ನು ಹಿಂಬಾಲಿಸುತ್ತಿದ್ದ ಆರೋಪಿಗಳು ಮಾರ್ಚ್ 4ರಂದು ಕೊಡಗಿ ತಿರುಮಲಾಪುರದ ಬಾರ್ ನಲ್ಲಿ ಆತನನ್ನು ಮಾರಕಾಸ್ತ್ರಗಳಿಂದ ಹೊಡೆದು ಹತ್ಯೆ ಗೈದಿದ್ದರು ಎಂದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ ಎಂದು ವರದಿಯಾಗಿದೆ.