ದೊಡ್ಡಬಳ್ಳಾಪುರ (Women’s Day): ಮಹಿಳೆಯರು ಶಿಕ್ಷಣ ಮತ್ತು ಸಂಘಟನೆಯ ಮಹತ್ವದ ಅರಿತಾಗ. ಮಾತ್ರ ಸಮಾಜದಲ್ಲಿ ಸಮಾನತೆ ಸಾಧಿಸಲು ಸಾಧ್ಯವಾಗುತ್ತದೆ ಎಂದು ತೂಬಗೆರೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಡಿ.ಪುಷ್ಪಾವತಿ ತಿಳಿಸಿದರು.
ಅವರು ದೊಡ್ಡಬಳ್ಳಾಪುರದ ಖಾಸಗಿ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಡೆದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮಹಿಳೆಯರು ಆತ್ಮವಿಶ್ವಾಸ ಹಾಗೂ ಸ್ವ ಸಾಮರ್ಥ್ಯದಿಂದ ಸಮಾಜದಲ್ಲಿ ಮುನ್ನಡೆಯಬೇಕು. ಸಮಾಜದ ಪರಿವರ್ತನೆ ಹಾಗೂ ಅಭ್ಯುದಯಕ್ಕಾಗಿ ಮಹಿಳಾ ಜಾಗೃತಿಯೊಂದೇ ಮಾರ್ಗವಾಗಿದೆ. ಮಹಿಳಾ ಸಮಾನತೆ ಮೊದಲು ಮನೆಯಿಂದ ಶುರುವಾಗಬೇಕು. ಲಿಂಗ ತಾರತಮ್ಯ ಇರಬಾರದು ಎಂದರು.
ಮಹಿಳೆ ತನ್ನಲ್ಲಿರುವ ಅಂತರ್ ಶಕ್ತಿಯನ್ನು ಹೊರ ತಂದಾಗ ಮಾತ್ರ ಸಬಲರಾಗಲು ಸಾಧ್ಯ. ಸಮಾಜದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಒಪ್ಪಿ ಮುನ್ನಡೆದರೆ ಸಬಲೀಕರಣ, ಮಹಿಳಾ ಸಶಕ್ತೀಕರಣ ಸಾಧ್ಯವಾಗುತ್ತದೆ.
ಮಹಿಳೆಯರು ವೈಜ್ಞಾನಿಕ ಮತ್ತು ವೈಚಾರಿಕ ಮನೋಭಾವ ಬೆಳೆಸಿಕೊಳ್ಳುವ ಮೂಲಕ ಕಟ್ಟುಪಾಡುಗಳಿಂದ ಹೊರಬರಬೇಕು. ವೈಯಕ್ತಿಕ ಆರೋಗ್ಯ ಮತ್ತು ಪರಿಸರದ ಸ್ವಚ್ಚತೆಗೂ ಆದ್ಯತೆ ನೀಡಬೇಕು. ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಮಹಿಳೆಯರ ಪಾತ್ರ ಮಹತ್ವವಾಗಿರುತ್ತದೆ ಎಂದರು.
ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷೆ ಪ್ರಮೀಳಾಮಹಾದೇವ್ ಮಾತನಾಡಿ,
ಇಂದು ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲಿಯೂ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಮಹಿಳೆಯರು. ಕೊಡುಗೆಯನ್ನು ನೆನೆಯುತ್ತಾ ಮಹಿಳಾ ದಿನಾಚರಣೆಯನ್ನು ಆಚರಿಸುವುದಾಗಿದೆ.
ಪ್ರತಿ ವರ್ಷ ಮಾರ್ಚ್ 8 ರಂದು ವಿಶ್ವದೆಲ್ಲೆಡೆ ವಿಶ್ವ ಮಹಿಳಾ ದಿನಾಚರಣೆ ಆಚರಿಸಲಾಗುತ್ತದೆ.
1908ರಲ್ಲಿ ಅಮೆರಿಕದಲ್ಲಿ ಮಹಿಳಾ ಕಾರ್ಮಿಕರು ಉತ್ತಮ ದುಡಿಯುವ ಪರಿಸ್ಥಿತಿಗೆ ಒತ್ತಾಯಿಸಿ ನಡೆದ ಹೋರಾಟ ಮತ್ತು ಅದರ ನೆನಪಿಗಾಗಿ ವಿಶ್ವ ಮಹಿಳಾ ದಿನಾಚರಣೆ ನಡೆಯುತ್ತಿದೆ.
ಈ ದಿನದಂದು ಮಹಿಳೆಯರ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಮುಂತಾದ ಹಲವು ರಂಗಗಳಲ್ಲಿ ಅವರ ಸಾಧನೆಗಳನ್ನು ಗೌರವಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಅನಿತಾದೇವಿ ನಾಯಕ್, ಡಿ.ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯದ ಮೇಲ್ವಿಚಾರಕಿ ಮಮತಾ, ಜಿಲ್ಲಾ ಭಾರತ್ ಸ್ಕೌಟ್ಸ್ ಮತ್ತು ಗೈಡ್ ಸಹಾಯಕ ಆಯುಕ್ತ ವೆಂಕಟರಾಜು, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಗೌರವ ಕಾರ್ಯದರ್ಶಿ ಪ್ರೊ.ಕೆ.ಆರ್.ರವಿಕಿರಣ್, ದೊಡ್ಡಬಳ್ಳಾಪುರ ತಾಲ್ಲೂಕು ಅಧ್ಯಕ್ಷ ಪಿ.ಗೋವಿಂದರಾಜು, ಗೌರವ ಕಾರ್ಯದರ್ಶಿ ಎ.ಜಯರಾಮ್, ಕಸಬಾ ಹೋಬಳಿ ಘಟದ ಕೋಶಾಧ್ಯಕ್ಷ ಜಿ.ಸುರೇಶ್ ಮುಂತಾದವರು ಭಾಗವಹಿಸಿದ್ದರು.
ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಬಾಲಕಿಯರ ವಿದ್ಯಾರ್ಥಿನಿಲಯದ ಮಹಿಳಾ ಸಿಬ್ಬಂದಿಯವರನ್ನು ಸನ್ಮಾನಿಸಲಾಯಿತು.