ಚಿಕ್ಕಬಳ್ಳಾಪುರ: ನೆರೆ ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ವ್ಯಾಪಕವಾಗಿದ್ದ ಹಕ್ಕಿ ಜ್ವರ (Bird flu) ಬಾಧೆ ರಾಜ್ಯಕ್ಕೂ ಕಾಲಿಟ್ಟಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹಕ್ಕಿ ಜ್ವರ ಇರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ವರದಹಳ್ಳಿ ಗ್ರಾಮದಲ್ಲಿ ಸುಮಾರು 30ಕ್ಕೂ ಅಧಿಕ ಕೋಳಿಗಳು ಏಕಾಏಕಿ ಸಾವನ್ನಪ್ಪಿವೆ. ಈ ಕುರಿತು ಹಕ್ಕಿ ಜ್ವರ ಪರೀಕ್ಷೆಗೆಂದು ಕೋಳಿಗಳ ಮಾದರಿಯನ್ನು ಸಂಗ್ರಹಿಸಿ ಬೆಂಗಳೂರಿನ ಲ್ಯಾಬ್ಗೆ ಅಧಿಕಾರಿಗಳು ಕಳಿಸಿದ್ದರು.
ಲ್ಯಾಬ್ ನಲ್ಲಿ ಹಕ್ಕಿಜ್ವರ ಎಂದು ವರದಿ ಬಂದಿರುವುದರಿಂದ ಗ್ರಾಮದಲ್ಲಿ ಆತಂಕ ಹೆಚ್ಚಾಗಿದೆ.
ಇದೀಗ ನಡೆಯುತ್ತಿರುವ ಅಧಿಕಾರಿಗಳ ಸಭೆ ಬಳಿಕ ಗ್ರಾಮದ ಸುತ್ತಮುತ್ತಲಿನ ಎಲ್ಲಾ ಕೋಳಿಗಳನ್ನು ನಾಶ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನೂ ಗ್ರಾಮದಲ್ಲಿ ಜನರು ಧೈರ್ಯವಾಗಿರುವಂತೆ ಸಲಹೆ ನೀಡಲು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಗ್ರಾಮದಲ್ಲಿರುವ ಇತರೆ ಕೋಳಿಗಳ ಹತ್ಯೆಗೆ ಕ್ರಮ ಕೈಗೊಳ್ಳಲಾಗುವುದು. ವರದಹಳ್ಳಿ ಗ್ರಾಮದ ಜನರ ಬಳಿ ಕೋಳಿಗಳನ್ನು ಕೊಡಲು ಮನವಿ ಮಾಡುತ್ತೇನೆ. ಕೋಳಿಗಳನ್ನು ಪಡೆದು ನಿಯಾಮಾನುಸಾರ ನಿಗದಿತ ಏರಿಯಾದಲ್ಲಿ ಕೋಳಿಗಳ ಹತ್ಯೆ ಮಾಡಿ ಮುಚ್ಚಿ ಹಾಕುತ್ತೇವೆ.
ವೈರಸ್ ಹರಡದಂತೆ ತಡೆಯಲು ಕೋಳಿಗಳ ಹತ್ಯೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.