ಬೆಂಗಳೂರು: ಪ್ರೀತಿಸುವಂತೆ ಯುವತಿಯ ಹಿಂದೆ ಬಿದ್ದಿದ್ದ ಯುವಕನ (young man) ಬೇಡಿಕೆ ನಿರಾಕರಿಸಿದ್ದಕ್ಕೆ ಆಕೆಯ ದ್ವಿಚಕ್ರ ವಾಹನ ಹಾಗೂ ಕಾರಿಗೆ ಬೆಂಕಿ ಹಚ್ಚಿರುವ ಘಟನೆ ಸಿಕೆ ಅಚ್ಚುಕಟ್ಟು ಹಾಗೂ ಸುಬ್ರಹಣ್ಯಪುರ ಪೊಲೀಸ್ ಠಾಣೆಗಳ (Police station) ವ್ಯಾಪ್ತಿಯಲ್ಲಿ ನಡೆದಿದೆ.
ಬಿಕಾಂ ಓದುತ್ತಿದ್ದ ಯುವಕ ಪ್ರೀತಿಗೆ ಒಳಗಾಗಿ ಯುವತಿಯೊಬ್ಬಳ ಹಿಂದೆ ಬಿದ್ದು ತನ್ನ ನಿವೇದನೆ ತಿಳಿಸಿದ್ದು, ಇದಕ್ಕೆ ಯುವತಿ ಒಲ್ಲೆ ಎಂದಿದ್ದಕ್ಕೆ ಯುವಕ ಸೇಡಿಗಾಗಿ ಯುವತಿಗೆ ಸೇರಿದ ಎರಡು ಮನೆಗಳಿಗೆ ತೆರಳಿ ವಾಹನಗಳಿಗೆ ಬೆಂಕಿ ಹಚ್ಚಿದ್ದಾನೆ.
ರಾತ್ರಿ 12.30ರ ಸುಮಾರಿನಲ್ಲಿ ಇಬ್ಬರು ಸ್ನೇಹಿತರೊಂದಿಗೆ ದ್ವಿಚಕ್ರ ವಾಹನದಲ್ಲಿ ಬಂದು ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣಾ ವ್ಯಾಪ್ತಿಯ ಪಾಪಯ್ಯ ಲೇಔಟ್ನ ಬನಗಿರಿ ಬಡಾವಣೆಯಲ್ಲಿರುವ ಯುವತಿಯ ಮನೆಯ ಮುಂದೆ ನಿಲ್ಲಿಸಲಾಗಿದ್ದ ಬೈಕ್ ಹಾಗೂ ಸ್ಕೂಟಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ.
ನಂತರ ಅಲ್ಲಿಂದ ಸುಬ್ರಹ್ಮಣ್ಯಪುರ ಠಾಣಾ ವ್ಯಾಪ್ತಿಯ ಅರೆಹಳ್ಳಿಯ ಬಳಿ ಇರುವ ಮತ್ತೊಂದು ಮನೆಗೆ 1.30 ರ ವೇಳೆ ತೆರಳಿ ಪಾರ್ಕಿಂಗ್ನಲ್ಲಿ ನಿಲ್ಲಿಸಿದ್ದ ಕಾರಿಗೆ ಬೆಂಕಿ ಹಚ್ಚಿದ್ದಾನೆ.
ಬೆಂಕಿಯ ಜ್ವಾಲೆ ಪಕ್ಕದ ಕಾರಿಗೂ ಆವರಿಸಿ ಸುಟ್ಟು ಕರಕಲಾಗಿವೆ. ದಟ್ಟ ಹೊಗೆ ಹಾಗೂ ಬೆಂಕಿಯನ್ನು ಕಂಡ ಅಪಾರ್ಟ್ಮೆಂಟ್ ನಿವಾಸಿಗಳು ಕೂಡಲೇ ಪಾರ್ಕಿಂಗ್ ಸ್ಥಳಕ್ಕೆ ತೆರಳಿ ಬೆಂಕಿಯನ್ನು ನಂದಿಸಿ ಸಂಭವಿಸಬಹುದಾದ ದೊಡ್ಡ ಅನಾಹುತ ತಪ್ಪಿಸಿದ್ದಾರೆ.
ಎರಡು ಘಟನೆಗಳ ಬಗ್ಗೆ ಸಿಕೆ ಅಚ್ಚುಕಟ್ಟು ಹಾಗೂ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದೆ.