ದೊಡ್ಡಬಳ್ಳಾಪುರ (Doddaballapura); ತಾಲ್ಲೂಕು ಕಚೇರಿಯಲ್ಲಿನ ಮುಜರಾಯಿ ಇಲಾಖೆಗೆ ಸೇರಿರುವ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ತಹಶೀಲ್ದಾರ್ ಅವರ ಸಹಿ ನಕಲಿ ಮಾಡಿ ವರ್ಗಾವಣೆ ಮಾಡಿರುವ ಆರೋಪದ ಮೇಲೆ ಸಾಸಲು ಹೋಬಳಿ ಕಂದಾಯ ನಿರೀಕ್ಷಕ ಹೇಮಂತ್ ಕುಮಾರ್ ಎಂಬಾತನನ್ನು ನಗರ ಪೊಲೀಸರು ಬಂಧಿಸಿದ್ದಾರೆ.
ಲೆಕ್ಕಪತ್ರಗಳ ಪರಿಶೀಲನೆ ವೇಳೆ ಮುಜರಾಯಿ ಇಲಾಖೆಯ ಖಾತೆಯಲ್ಲಿ ಹಣ ಇಲ್ಲದೆ ಇರುವ ಬಗ್ಗೆ ಅನುಮಾನಗೊಂಡ ತಹಶೀಲ್ದಾರ್ ವಿಭಾವಿದ್ಯಾರಾಥೋಡ್ ಅವರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನ ಮೇರೆಗೆ ತನಿಖೆ ನಡೆಸಿದ್ದ ಇನ್ಸ್ಪೆಕ್ಟರ್ ಅಮರೇಶ್ ಗೌಡ, ಬೆಂಗಳೂರಿನ ಮಹಾಲಕ್ಷ್ಮೀಪುರನ ಕೆನರಾ ಬ್ಯಾಂಕ್ ಕುರುಬರಹಳ್ಳಿ ಶಾಖೆಯಲ್ಲಿನ ಸುಶೀಲಮ್ಮ ಎಂಬುವವರ ಖಾತೆಗೆ ಹಣ ಜಮಾ ಆಗಿರುವ ಬಗ್ಗೆ ಮಾಹಿತಿ ದೊರೆತಿದೆ. ಈ ಹಿನ್ನೆಲೆಯಲ್ಲಿ ಬಂಧನವಾಗಿದೆ.
ಅನುಮಾನದ ಹುತ್ತ
ಮುಜರಾಯಿ ಇಲಾಖೆಗೆ ಸೇರಿರುವ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ತಹಶೀಲ್ದಾರ್ ಅವರ ಸಹಿ ನಕಲಿ ಮಾಡಿ ವರ್ಗಾವಣೆ ಮಾಡಿರುವ ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿದೆ.
ರಾಜ್ಯ ಸರ್ಕಾರದ ಕಚೇರಿಗಳಲ್ಲಿ ಚೆಕ್ ಬಳಕೆ ಬಹುತೇಕ ನಿಲ್ಲಿಸಲಾಗಿದ್ದು, K2 ಚಲನ್ ಜಾರಿಗೆ ಬಂದು ಹಲವು ವರ್ಷವಾಗಿದೆ.
ಇದರ ಅನ್ವಯ ಸರ್ಕಾರಿ ಕಚೇರಿಯ ಯಾವುದೇ ಇಲಾಖೆಯ ಹಣ ವರ್ಗಾವಣೆಯಾಗುವುದು ಇದರ ಮೂಲಕವೇ. ಆದರೆ ಈ ಪ್ರಕರಣದಲ್ಲಿ ಮುಜರಾಯಿ ಇಲಾಖೆಯ ಹಣವನ್ನು ಲಪಟಾಯಿಸಲು ಚೆಕ್ ಬಳಸಿರುವುದು, ತಹಶಿಲ್ದಾರ್ ನಕಲಿ ಸಹಿ ಮಾಡಿರುವುದು ಹೇಗೆ..? ಈ ಇಲಾಖೆ K2ಗೆ ಒಳಪಟ್ಟಿಲ್ಲವೇ ಎಂಬ ಅನುಮಾನ ವ್ಯಾಪಕವಾಗಿದೆ.
ಅಲ್ಲದೆ ಪ್ರತಿ ತಿಂಗಳು, ಮೂರು ತಿಂಗಳಿಗೊಮ್ಮೆ ಶಾಸಕರು, ಸಚಿವರು, ಸಂಸದರು, ಡಿಸಿ ನೇತೃತ್ವದಲ್ಲಿ ಇಲಾಖೆವಾರು ಪ್ರಗತಿ ಪರಿಶೀಲನೆ ನಡೆಯುತ್ತದೆ. ಈ ಸಭೆಯಲ್ಲಿ ವಿವಿಧ ಇಲಾಗೆ ಸರ್ಕಾರದಿಂದ ದೊರೆತಿರುವ ಅನುದಾನ, ಖರ್ಚು, ಅಭಿವೃದ್ಧಿ, ಸಮಸ್ಯೆಗಳ ಕುರಿತು ಚರ್ಚೆ ಮಾಡಲಾಗುತ್ತದೆ.
ಮತ್ತೆ ಈ ಪ್ರಕರಣದಲ್ಲಿ 2023ರಿಂದ ಮುಜರಾಯಿ ಇಲಾಖೆಯ ಹಣಕಾಸಿನ ಕುರಿತು ಯಾವುದೇ ಪರಿಶೀಲನೆ ನಡೆದಿಲ್ಲವೇ..? ಇದರ ಲೋಪ ಯಾರದ್ದು..? ಎಂಬ ಪ್ರಶ್ನೆ ಸಾರ್ವಜನಿಕರದ್ದಾಗಿದೆ.
ಮುಚ್ಚಿಡಲು ಯತ್ನ..?
ಇನ್ನೂ ಈ ಪ್ರಕರಣ ಸಾರ್ವಜನಿಕರಿಗೆ ತಿಳಿಯಬಾರದೆಂದು, ಮಾಹಿತಿ ಮಾಧ್ಯಮಗಳಿಗೆ ಸೋರಿಕೆಯಾಗದಂತೆ ತಡೆಯಲು ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ಬಹುಳಷ್ಟು ಒತ್ತಡ ಹೇರಿದ್ದಾರೆ ಎಂಬ ಮಾತುಗಳು ವ್ಯಾಪಕವಾಗಿದೆ.
ವಿವಿಧ ಆಯಾಮಾಗಳಲ್ಲಿ ತನಿಖೆ
ಸರ್ಕಾರಿ ಇಲಾಖೆಯ ಲಕ್ಷಾಂತರ ಹಣ ದುರ್ಬಳಕೆ ಕುರಿತು ವಸ್ತು ನಿಷ್ಠ ತನಿಖೆ ಅಗತ್ಯವಿದೆ.
ಈ ಕುರಿತು ಕಟ್ಟುನಿಟ್ಟಿನ ಅಧಿಕಾರಿಯಾದ ಇನ್ಸ್ಪೆಕ್ಟರ್ ಅಮರೇಶ್ ಗೌಡ ಅವರು ಎಲ್ಲಾ ಆಯಾಮಾಗಳಲ್ಲಿ ತನಿಖೆ ನಡೆಸಿ, ಈ ಪ್ರಕರಣದಲ್ಲಿ ಭಾಗಿಯಾಗಿರಬಹುದಾದ ಅಧಿಕಾರಿಗಳನ್ನು ಪತ್ತೆಹಚ್ಚಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.