ದೊಡ್ಡಬಳ್ಳಾಪುರ (Doddaballapura): ತಹಶಿಲ್ದಾರ್ ವಿಭಾ ವಿದ್ಯಾ ರಾಥೋಡ್ ಹೆಸರಿನ ನಕಲಿ ಸಹಿ ಬಳಸಿ, ಮುಜರಾಯಿ ಇಲಾಖೆಯ ಸುಮಾರು 59 ಲಕ್ಷ ರೂ. ಲಪಟಾಯಿಸಿರುವ ಆರೋಪದ ಮೇಲೆ ಸಾಸಲು ಹೋಬಳಿ ಕಂದಾಯ ನಿರೀಕ್ಷಕ (RI) ಹೇಮಂತ್ ಕುಮಾರ್ ಅವರನ್ನು ಬಂಧಿಸಲಾಗಿದೆ.
ದೊಡ್ಡಬಳ್ಳಾಪುರ ನಗರ ಠಾಣೆ ಇನ್ಸ್ಪೆಕ್ಟರ್ ಅಮರೇಶ್ ಗೌಡ ನೇತೃತ್ವದ ಪೊಲೀಸರು ಆರೋಪಿ ಹೇಮಂತ್ ಕುಮಾರ್ ಅವರನ್ನು ಬಂಧಿಸಿ, ನ್ಯಾಯಾಲಯದ ಅನುಮತಿ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ.
ಮುಜರಾಯಿ ಇಲಾಖೆ ಎಫ್ಡಿಎ ಕರ್ತವ್ಯದಿಂದ ಸಾಸಲು ಹೋಬಳಿ ಆರ್ ಐ ಆಗಿ ವರ್ಗಾವಣೆ ಆದ ಬಳಿಕ ಹೇಮಂತ್ ಕುಮಾರ್ ಅವರು ದಾಖಲೆಗಳನ್ನು ನೀಡುವ ವೇಳೆ ಚೆಕ್ ಬುಕ್ ಗಳನ್ನು ನೀಡದೆ ಉಳಿಸಿಕೊಂಡಿದ್ದಾರೆ ಎನ್ನಲಾಗಿದೆ.
ಬಳಿಕ ಹಲವು ಕಂತುಗಳಲ್ಲಿ ತಹಶಿಲ್ದಾರ್ ವಿಭಾ ವಿದ್ಯಾ ರಾಥೋಡ್ ಅವರ ನಕಲಿ ಸಹಿ ಬಳಸಿ ಸುಮಾರು 59 ಲಕ್ಷ ರೂಪಗಳನ್ನು ವಿವಿಧ ಖಾತೆಗಳಿಗೆ ವರ್ಗಾವಣೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಇತ್ತೀಚೆಗೆ ದಾಖಲೆ ಪರಿಶೀಲನೆ ವೇಳೆ ಮುಜರಾಯಿ ಇಲಾಖೆ ಖಾತೆಯಲ್ಲಿ ಕೇವಲ ಒಂದು ರೂ ಮಾತ್ರ ಉಳಿದ್ದು, ತನಿಖೆ ನಡೆಸಿದಾಗ ಈ ಕೃತ್ಯ ಬಯಲಾಗಿದೆ.
ದೂರಿನ ಅನ್ವಯ ಹೇಮಂತ್ ಕುಮಾರ್ ಅವರನ್ನು ದೊಡ್ಡಬಳ್ಳಾಪುರ ನಗರ ಠಾಣೆ ಪೊಲೀಸರು ಬಂಧಿಸಿ ತನಿಖೆ ಕೈಗೊಂಡಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ.