ದೊಡ್ಡಬಳ್ಳಾಪುರ (Doddaballapura): ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ 2023-24 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆ ವಿಮೆಗೆ ಸಲ್ಲಿಸಲಾದ ಅರ್ಜಿಗಳಲ್ಲಿ ತಾಳೆಯಾದ ಪ್ರಸ್ತಾವನೆಗಳಿಗೆ ಆಕ್ಷೇಪಣೆ ಸಲ್ಲಿಸಲು ರೈತರಿಗೆ ಅವಕಾಶ ಕಲ್ಪಿಸಲಾಗಿದೆ.
ಈ ಕುರಿತು ಸಹಾಯಕ ಕೃಷಿ ನಿರ್ದೇಶಕ ರಾಘವೇಂದ್ರ ಪಿ ಅವರು ಪ್ರಕಟಣೆ ನೀಡಿದ್ದಾರೆ.
ಕೇಂದ್ರ ಸರ್ಕಾರದ ಮಾರ್ಗದರ್ಶನದಂತೆ ಬೆಳೆ ಸಮೀಕ್ಷೆಯ ದತ್ತಾಂಶಗಳನ್ನು ಬೆಳೆ ನೋಂದಣಿಯಾದ ಪ್ರಸ್ತಾವನೆಗಳೊಂದಿಗೆ ಹೋಲಿಕೆ ಮಾಡಿ ಹಾಗೂ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದಿಂದ ಅನುಮೋದನೆಯಾದ ವಿನಾಯಿತಿಗಳನ್ನು ಅಳವಡಿಸಿ ತಾಳೆಯಾದ ಪ್ರಸ್ತಾವನೆಗಳನ್ನು ಸಂರಕ್ಷಣೆ ತಂತ್ರಾಂಶದಲ್ಲಿ ವಿಮಾ ಪರಿಹಾರ ಲೆಕ್ಕ ಹಾಕಲಾಗಿದೆ.
ತಾಳೆಯಾಗದಿರುವ ಪ್ರಸ್ತಾವನೆಗಳನ್ನು ಸರ್ಕಾರದ ಆದೇಶದಂತೆ ಸಂಬಂಧಪಟ್ಟ ತಾಲ್ಲೂಕಿನ ಕೃಷಿ/ತೋಟಗಾರಿಕೆ/ಬ್ಯಾಂಕ್ ಅಧಿಕಾರಿಗಳು ಅಂತಹ ಪ್ರಸ್ತಾವನೆಗಳನ್ನು ಪರಿಶೀಲಿಸಿ, ರಿಲಿಯನ್ಸ್ ಜನರಲ್ ಇನ್ಶುರೆನ್ಸ್ ಸಂಸ್ಥೆಗೆ ವರ್ಗಾಯಿಸಿದ್ದಾರೆ
ಅಂತಿಮವಾಗಿ ದೊಡ್ಡಬಳ್ಳಾಪುರ ತಾಲೂಕಿನಲ್ಲಿ 728 ಅರ್ಜಿ ತಿರಸ್ಕೃತಗೊಂಡಿವೆ. ಇದರಲ್ಲಿ ಕಸಬಾ-135, ದೊಡ್ಡಬೆಳವಂಗಲ-102, ತೂಬಗೆರೆ-143, ಸಾಸಲು-204, ಮಧುರೆ -144 ಪ್ರಸ್ತಾವನೆಗಳು ತಿರಸ್ಕೃತಗೊಂಡಿರುತ್ತವೆ.
ತಿರಸ್ಕೃತಗೊಂಡ ಪ್ರಸ್ತಾವನೆಗಳ ಪಟ್ಟಿಯನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ, ಗ್ರಾಮ ಪಂಚಾಯಿತಿ ಮತ್ತು ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಛೇರಿಯ ಸೂಚನಾ ಫಲಕಗಳಲ್ಲಿ ಪ್ರಕಟಿಸಲಾಗಿದ್ದು, ಸಂಬಂಧಿಸಿದ ರೈತರು 15 ದಿನಗಳ ಒಳಗೆ ಅವರ ವಿಮಾ ಅರ್ಜಿ ತಿರಸ್ಕೃತವಾದುದಕ್ಕೆ ಆಕ್ಷೇಪಣೆ ಇದ್ದಲ್ಲಿ ಮರು ಪರಿಶೀಲಿಸಲು ಮನವಿ ಸಲ್ಲಿಸಬಹುದು.
ಅಂತಹ ಮನವಿಗಳನ್ನು ತಾಲೂಕು ಮಟ್ಟದ ದೂರು ನಿವಾರಣಾ ಸಮಿತಿಯಲ್ಲಿ ಮಂಡಿಸಿ ಕೂಲಂಕಷವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.
ತಾಲ್ಲೂಕು ಮಟ್ಟದ ಸಮಿತಿಯ ನಿರ್ಣಯವನ್ನು ರೈತರು ಒಪ್ಪದಿದ್ದಲ್ಲಿ ಜಿಲ್ಲಾ ಮಟ್ಟದ ಸಮಿತಿಗೆ ಮೇಲ್ಮನವಿ ಸಲ್ಲಿಸಬಹುದೆಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ರಾಘವೇಂದ್ರ ತಿಳಿಸಿದ್ದಾರೆ.