ಬೆಂಗಳೂರು: ಖಾಸಗಿ ಸುದ್ದಿವಾಹಿನಿಗಳ ವಿರುದ್ಧ ಪದೇ ಪದೇ ಹರಿಹಾಯುವ ಬಿಜೆಪಿ (BJP) ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basangouda Patil Yatnal) ಇಂದು ಮತ್ತೆ ಕೆಲ ಖಾಸಗಿ ಸುದ್ದಿವಾಹಿನಿಗಳನ್ನು ಲೇವಡಿ ಮಾಡಿದ್ದಾರೆ.
ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರನ್ನು ಬದಲಾವಣೆ ಮಾಡುವಂತೆ ಪಟ್ಟು ಹಿಡಿದಿರುವ ಯತ್ನಾಳ್ ಟೀಂ, ಇಂದು ನವದೆಹಲಿಯ ಕೇಂದ್ರ ಸಚಿವ ಸೋಮಣ್ಣ (Somanna) ಅವರ ಕಚೇರಿ ಪೂಜಾ ಕಾರ್ಯಕ್ರಮದ ನೆಪದಲ್ಲಿ ತೆರಳಿದ್ದು, ಯತ್ನಾಳ್ ಟೀಂ ಜತೆ ತಟಸ್ಥ ನಾಯಕರು ಕಾಣಿಸಿಕೊಂಡಿರುವುದು ಅಚ್ಚರಿಗೆ ಕಾರಣವಾಗಿದೆ.
ಈ ಬೆನ್ನಲ್ಲೇ ಅವರಿಗೆ ಬಹಿರಂಗ ಹೇಳಿಕೆ ಕುರಿತು ಬಿಜೆಪಿ ಹೈಕಮಾಂಡ್ ನೋಟೀಸ್ ನೋಡಿದೆ, 72 ಗಂಟೆಯ ಒಳಗೆ ಉತ್ತರ ನೀಡಬೇಕಿದೆ, ಯತ್ನಾಳ್ ಗೆ ಶಾಕ್ ಕೊಟ್ಟ ಹೈಕಮಾಂಡ್ ಎಂಬಂತೆ ಕೆಲ ಸುದ್ದಿವಾಹಿನಿಗಳು ಯತ್ನಾಳ್ ಹಾಗೂ ಬಂಡಾಯ ತಂಡದ ಕುರಿತು ವರದಿ ಮಾಡಿವೆ.
ಈ ಕುರಿತು ಟ್ವಿಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಬಸನಗೌಡ ಪಾಟೀಲ ಯತ್ನಾಳ್, ಬಿಜೆಪಿ ಕೇಂದ್ರ ಶಿಸ್ತು ಸಮಿತಿಯಿಂದ ನನಗೆ ನೋಟಿಸ್ ಜಾರಿಯಾಗಿದೆ ಎಂದು ಮಾಧ್ಯಮಗಳು ವಿಜೃಂಭಿಸುತ್ತಿದೆ. ಆದರೆ, ನನಗೆ ಇನ್ನೂ ಯಾವುದೇ ಅಧಿಕೃತ ಸೂಚನೆ ಬಂದಿಲ್ಲ.
ನನಗೆ ಅಧಿಕೃತವಾಗಿ ಯಾವುದೇ ನೋಟೀಸು ಬಂದಿರುವುದಿಲ್ಲ. ನೋಟೀಸು ಬಂದಮೇಲೆ ಕೆಲವ್ಯಕ್ತಿಗಳ ಏಕಸ್ವಾಮ್ಯತೆ, ಏಕಪಕ್ಷೀಯ ನಿರ್ಧಾರಗಳು, ಉತ್ತರ ಕರ್ನಾಟಕದ ಕಡೆಗಣನೆ, ಕುಟುಂಬ ರಾಜಕಾರಣ, ಕಾಂಗ್ರೆಸ್ ಪಕ್ಷದ ವೈಫಲ್ಯಗಳನ್ನು ರಾಜ್ಯದ ಜನತೆಗೆ ವಿವರಿಸಲು ವಿಫಲವಾಗಿರುವ ಪಕ್ಷದ ಧೋರಣೆ, ಹೊಂದಾಣಿಕೆ ರಾಜಕೀಯ ಸೇರಿದಂತೆ ಸ್ವಜನಪಕ್ಷಪಾತದ ಬಗ್ಗೆ ವಿವರವಾಗಿ ಲಿಖಿತ ರೂಪದಲ್ಲಿ ಉತ್ತರ ನೀಡುತ್ತೇನೆ.