ಬೆಂಗಳೂರು (Crime news): ಯುವತಿಗಾಗಿ ಆಕೆಯ ಮೊದಲ ಬಾಯ್ಫ್ರೆಂಡ್ ಮೇಲೆ ಮಾರಣಾಂತಿಕವಾಗಿ ಹಲ್ಲೆಗೈದಿದ್ದ ಆರೋಪಿಯನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
![hulukudi maharathotsava](https://www.harithalekhani.com/wp-content/uploads/2025/02/IMG-20250205-WA0002.jpg)
ನೇಪಾಳ ಮೂಲದ ಬಿಕಾಸ್ ಕುಮಾರ್ ಬಂಧಿತ ಆರೋಪಿ.
ಯುವತಿಯ ಮಾಜಿ ಪ್ರಿಯಕರ ನೇಪಾಳ ಮೂಲದ ಯುವಕ ಲೋಕೇಶ್ ಎಂಬಾತನ ಮೇಲೆ ನಡುರಸ್ತೆಯಲ್ಲಿ ಬಿಕಾಸ್ ಕುಮಾರ್ ಹಲ್ಲೆಗೈದಿದ್ದ.
![Hulukudi mahajathre](https://www.harithalekhani.com/wp-content/uploads/2025/02/IMG-20250205-WA0001.jpg)
ಹಲ್ಲೆಗೊಳಗಾದ ನೇಪಾಳ ಮೂಲದ ಲೋಕೇಶ್ ಹಾಗೂ ಯವತಿ ಪರಸ್ಪರ ಪ್ರೀತಿಸುತ್ತಿದ್ದು, ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡು ಲಿವ್ ಇನ್ ರಿಲೇಶನ್ಶಿಪ್ನಲ್ಲಿದ್ದರು.
ಯುವತಿ ಮಾತ್ರವಲ್ಲದೆ ಆಕೆಯ ಕುಟುಂಬವನ್ನೂ ಸಹ ತನ್ನ ಆದಾಯದಿಂದಲೇ ಪೋಷಿಸುತ್ತಿದ್ದ ಲೋಕೇಶ್, ನಂತರ ಆಕೆಯನ್ನು ಮದುವೆಯಾಗಲು ಬಯಸಿದ್ದ ಎಂದು ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಈ ನಡುವೆ ಇಬ್ಬರ ನಡುವೆ ಬಿಕಾಸ್ ಕುಮಾರ್ ಎಂಬ ನೇಪಾಳ ಮೂಲದ ಮತ್ತೊಬ್ಬ ಯುವಕ ಎಂಟ್ರಿಯಾಗಿದ್ದ. ಲೋಕೇಶ್ನನ್ನು ತೊರೆದ ಯುವತಿ ಬಿಕಾಸ್ ಕುಮಾರ್ ಜೊತೆ ಓಡಾಡಲಾರಂಭಿಸಿದ್ದಳು.
ಅಲ್ಲದೆ ಲೋಕೇಶ್ನ ಪರ್ಸ್, ಮೊಬೈಲ್ ಫೋನ್ ಅನ್ನು ತಾನೇ ಕೊಂಡೊಯ್ದಿದ್ದಳು. ಪ್ರೇಯಸಿಯ ನಿರ್ಧಾರದಿಂದ ನೊಂದಿದ್ದ ಲೋಕೇಶ್ ತನ್ನ ಬಳಿಯಿಂದ ತೆಗೆದುಕೊಂಡು ಹೋಗಿದ್ದ ಮೊಬೈಲ್ ಫೋನ್ ಅನ್ನು ವಾಪಸ್ ಕೇಳಿದ್ದಾಗಿ ತಿಳಿದುಬಂದಿದೆ.
ಜನವರಿ 14ರಂದು ಮೊಬೈಲ್ ಹಿಂದಿರುಗಿಸುವುದಾಗಿ ಹೇಳಿದ್ದ ಯುವತಿ, ಲೋಕೇಶ್ನನ್ನು ಜಕ್ಕೂರು ಬಳಿ ಕರೆಸಿಕೊಂಡಿದ್ದಳು. ಈ ವೇಳೆ ಆರೋಪಿ ಬಿಕಾಸ್ ಕುಮಾರ್ ಸ್ಕ್ರೂ ಡ್ರೈವರ್ ನಿಂದ ಲೋಕೇಶ್ನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ.
ಗಾಯಗೊಂಡ ಲೋಕೇಶ್ ಚಿಕಿತ್ಸೆ ಪಡೆದುಕೊಂಡ ಬಳಿಕ ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.
ಪ್ರಕರಣ ದಾಖಲಿಸಿಕೊಂಡ ಅಮೃತಹಳ್ಳಿ ಠಾಣೆ ಪೊಲೀಸರು ಬಿಕಾಸ್ ಕುಮಾರ್ನನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.