ದೊಡ್ಡಬಳ್ಳಾಪುರ: ನಕಲಿ Grama one ಹಾವಳಿ ಹಿನ್ನೆಲೆಯಲ್ಲಿ ಗ್ರಾಮ ಒನ್ ಅಧಿಕಾರಿಗಳು ಬೆಳ್ಳಂಬೆಳಗ್ಗೆಯೇ ದೊಡ್ಡಬಳ್ಳಾಪುರಕ್ಕೆ ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
Grama one ಜಿಲ್ಲಾ ವ್ಯವಸ್ಥಾಪಕ ಪ್ರೇಮ್ ಕುಮಾರ್ ಹಾಗೂ ಕೋ ಆರ್ಡಿನೇಟರ್ ಸ್ವಾಮಿ ನೇತೃತ್ವದ ತಂಡ ನಕಲಿ ಗ್ರಾಮ ಒನ್ ಕೇಂದ್ರಗಳ ಪರಿಶೀಲನೆ ಕಾರ್ಯ ನಡೆಸಿದರು.
ತಹಶೀಲ್ದಾರ್ ಅನುಮತಿ ಪಡೆದು, ನಗರದ ಪ್ರಮುಖ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ಕಾರ್ಯ ಆರಂಭಿಸಿದರು, ಐಡಿ ದುರುಪಯೋಗ, Grama one ಅಲ್ಲದಿದ್ದರು ಗ್ರಾಮ ಒನ್ ಹೆಸರಲ್ಲಿ ಕೇಂದ್ರ ಸ್ಥಾಪನೆ, ಬೇರೆ ತಾಲೂಕಿನ ಐಡಿ ದುರ್ಬಳಕೆ ಮುಂತಾದ ಆರೋಪಗಳ ಕುರಿತು ತನಿಖೆ ನಡೆಸಿದರು.
ಈ ಕುರಿತು ಪ್ರತಿಕ್ರಿಯೆ ನೀಡಿರುವ Grama one ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯವಸ್ಥಾಪಕ ಪ್ರೇಮ್ ಕುಮಾರ್, ಗ್ರಾಮ ಒನ್ ಹೆಸರಲ್ಲಿ ನಕಲಿ ಕೇಂದ್ರಗಳಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲಾಯಿತು.
ಸಾರ್ವಜನಿಕರಿಂದ ಹೆಚ್ಚುವರಿ ಹಣ ವಸೂಲಿ ಮುಂತಾದ ಯಾವುದೇ ದೂರುಗಳಿದ್ದರೆ ಸಾರ್ವಜನಿಕರು ನೇರವಾಗಿ ದೂರು ನೀಡಬಹುದಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಕಲಿ Grama one ಕೇಂದ್ರಕ್ಕೆ ಅವಕಾಶವಿಲ್ಲ. ಆ ರೀತಿ ಕಂಡುಬಂದಲ್ಲಿ ನೇರವಾಗಿ ದೂರು ನೀಡಬಹುದಾಗಿದ್ದು, ಕೂಡಲೇ ಕಾನೂನು ಕ್ರಮಕೈಗೊಳ್ಳಲಾಗುವುದು.
ಅಲ್ಲದೆ ಗ್ರಾಮ ಒನ್ ಕೇಂದ್ರಗಳಿಗೆ ತೊಂದರೆಯಾಗದಂತೆ ಮತ್ತೊಂದು ಕೇಂದ್ರ ತೆರೆಯಲು ನಿರ್ದಿಷ್ಟ ದೂರವನ್ನು ಪಾಲಿಸುವುದು ಕಡ್ಡಾಯವಾಗಿದೆ.
ಇಂದು ನಡೆಸಲಾದ ಪರಿಶೀಲನೆಯಲ್ಲಿ ಯಾವುದೇ ಐಡಿ ಬದಲಾವಣೆ ಕುರಿತು ಕಂಡು ಬಂದಿಲ್ಲ.. ಆದಾಗ್ಯೂ ಹಲವು ಕೇಂದ್ರಗಳಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಪ್ರೇಮ್ ಕುಮಾರ್ ತಿಳಿಸಿದ್ದಾರೆ.
ಹರಿತಲೇಖನಿ ವರದಿ
ಕರ್ನಾಟಕ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಗ್ರಾಮ್ ಒನ್ (Grama one) ಅಗಿದ್ದು, ಸರ್ಕಾರದ ಎಲ್ಲಾ ಸೇವೆಗಳು ಒಂದೇ ಸೂರಿನಡಿ ಸಾರ್ವಜನಿಕರಿಗೆ ತಲುಪಿಸುವ ದೇಸೆಯಲ್ಲಿ ಗ್ರಾಮೀಣ ಭಾಗದಲ್ಲಿ ಗ್ರಾಮ್ ಒನ್ ಸೇವಾ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ.
ಈ ಕೇಂದ್ರಗಳ ಮೂಲಕ ಗ್ರಾಮ ಮಟ್ಟದಲ್ಲಿ ನಾಗರಿಕರು / ಹಿರಿಯ ನಾಗರಿಕರು / ಮಹಿಳೆಯರು, ವಿಶೇಷಚೇತನರು ತಮ್ಮ ಗ್ರಾಮದಲ್ಲಿಯೇ ಸರ್ಕಾರದ ನಾಗರಿಕ ಸೇವೆಗಳನ್ನು ಪಡೆಯಬಹುದು.
ಆದರೆ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ನಕಲಿ ಗ್ರಾಮ ಒನ್ ಹಾವಳಿ ಆರಂಭವಾಗಿದ್ದು, ಲಕ್ಷಾಂತರ ರೂ ಬಂಡವಾಳ ಹೂಡಿ ಗ್ರಾಮ ಒನ್ ಕೇಂದ್ರ ತೆರೆದಿರುವ ಯುವಕ, ಯುವತಿಯರನ್ನು ಸಂಕಷ್ಟಕ್ಕೆ ದೂಡಿದೆ ಎಂಬದು ಆರೋಪವಾಗಿತ್ತು.
ದೊಡ್ಡಬಳ್ಳಾಪುರ ತಾಲೂಕಿನ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಕೆಲ ಸೈಬರ್ ಸೆಂಟರ್ ಗಳು, ಹಳದಿ ಬಣ್ಣ ಬಳೆದುಕೊಂಡು ಗ್ರಾಮ ಒನ್ ಹೆಸರಲ್ಲಿ ಹೆಚ್ಚುವರಿ ಹಣ ವಸೂಲಿ ಮಾಡಿ ಗ್ರಾಹಕರನ್ನು ವಂಚಿಸುತ್ತಿವೆ ಎಂಬ ಆಕ್ರೋಶ ವ್ಯಕ್ತವಾಗಿತ್ತು.
ಈ ಕೇಂದ್ರಗಳಲ್ಲಿ ಐಕೆವೈಸಿ ಹೊರತು ಪಡಿಸಿ ಇತರೆ ಎಲ್ಲಾ ಗ್ರಾಮ ಒನ್ ಸೌಲಭ್ಯ ನೀಡಲಾಗುತ್ತಿದೆ. ಅಲ್ಲದೆ ಇತರೆ ತಾಲೂಕಿನ ಗ್ರಾಮ ಒನ್ ಐಡಿ ಬಳಸುವ ಮೂಲಕ, ಉಚಿತ ಸೌಲಭ್ಯಕ್ಕೂ ಸಾರ್ವಜನಿಕರಿಂದ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ.
ಇದರಿಂದಾಗಿ ಲಕ್ಷಾಂತರ ರೂ ಹಣ ಹೂಡಿಕೆ ಮಾಡಿರುವ ನಿರುದ್ಯೋಗಿ ಯುವಕರು ಗ್ರಾಮ ಒನ್ ಕೇಂದ್ರಗಳನ್ನು ಮುಚ್ಚಬೇಕಾದ ಅನಿವಾರ್ಯತೆ ಎದುರಾಗಿದೆ.
ಕೂಡಲೇ ಅಧಿಕಾರಿಗಳು ಹೆಚ್ಚೆತ್ತು, ಸಾರ್ವಜನಿಕರಿಂದ ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವ ನಕಲಿ ಗ್ರಾಮ ಒನ್ ಕೇಂದ್ರಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು.