ಬೀದರ್ (Crime news): ಎಟಿಎಂಗೆ ತುಂಬಲು ಎಸ್ಬಿಐ (SBI) ಬ್ಯಾಂಕಿನಿಂದ ಹಣ ತೆಗೆದುಕೊಂಡು ಹೊರ ಬರುತಿದ್ದಾಗ ಎಟಿಎಂ (ATM) ಭದ್ರತಾ ಏಜೆನ್ಸಿ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆದಿದ್ದು, ಇಬ್ಬರು ಮೃತಪಟ್ಟಿರುವ ಘಟನೆ ಬೀದರ್ನ ಹೃದಯ ಭಾಗ ಶಿವಾಜಿ ಚೌಕ್ನಲ್ಲಿ ಗುರುವಾರ ನಡೆದಿದೆ.
ನಗರದ ಜಿಲ್ಲಾಧಿಕಾರಿ ಕಚೇರಿ ಹಾಗೂ ನ್ಯಾಯಾಲಯದ ಮಧ್ಯದಲ್ಲಿರುವ ಎಸ್ಬಿಐ ಬ್ಯಾಂಕ್ ಮುಂಭಾಗ ಈ ಘಟನೆ ನಡೆದಿದೆ.
ಚಿದ್ರಿ ಗ್ರಾಮದ ನಿವಾಸಿಯಾದ ಗಿರೀಶ್ (32) ಹಾಗೂ ಶಿವಕುಮಾರ್ ಎನ್ನುವವರು ಗುಂಡೇಟಿನಿಂದ ಮೃತಪಟ್ಟವರಾಗಿದ್ದಾರೆ.
ಇಂದು SBI ಬ್ಯಾಂಕಿನಿಂದ ಹಣ ತೆಗೆದುಕೊಂಡು ಎಟಿಎಂಗೆ ಹಾಕಲು ಸೆಕ್ಯೂರಿಟಿ ಏಜೆನ್ಸಿ ಸಿಬ್ಬಂದಿ ತೆರಳುತ್ತಿದ್ದರು. ಬೈಕ್ ಮೇಲೆ ಹೆಲ್ಮೆಟ್ ಹಾಕಿಕೊಂಡು ಬಂದ ದುಷ್ಕರ್ಮಿಗಳಿಬ್ಬರು ಸಿಬ್ಬಂದಿಗಳ ಮೇಲೆ ಖಾರದ ಪುಡಿ ಎರಚಿ ಹಣ ದೋಚಲು ಪ್ರಯತ್ನಿಸಿದ್ದಾರೆ.
ಹಣ ನೀಡಲು ಸಿಬ್ಬಂದಿ ನಿರಾಕರಿಸಿದಾಗ ಗುಂಡಿನ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಗುಂಡಿನ ದಾಳಿಯಲ್ಲಿ ಗಿರೀಶ್ ಎಂಬಾತ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಶಿವಕುಮಾರ್ ಎಂಬುವವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶಿವಕುಮಾರ್ ಸಾವನಪ್ಪಿದ್ದಾರೆ.
ಈ ವೇಳೆ ಒಂದು ಪೆಟ್ಟಿಗೆಯಲ್ಲಿದ್ದ ಹಣ ದುಷ್ಕರ್ಮಿಗಳು ದೋಚಿಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಧಾವಿಸಿದ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಘಂಟಿ ಸೇರಿದಂತೆ ಹಿರಿಯ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.