ನವದೆಹಲಿ: ತ್ರಿವೇಣಿ ಸಂಗಮ ಸ್ಥಳ ಪ್ರಯಾಗ್ ರಾಜ್ ನಲ್ಲಿ ನಡೆಯಲಿರುವ ಕುಂಭಮೇಳದಲ್ಲಿ (Kumbhamela) ಭಾಗಿಯಾಗುವಂತೆ ಉತ್ತರ ಪ್ರದೇಶದ ಹಣಕಾಸು ಸಚಿವ ಸುರೇಶ್ ಖನ್ನಾ ಅವರು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಆಹ್ವಾನ ನೀಡಿದರು.
ನವದೆಹಲಿಯ ಸಚಿವಾಲಯದ ಕಚೇರಿಯಲ್ಲಿ ಬುಧವಾರ ಬೆಳಗ್ಗೆ ಕೇಂದ್ರ ಸಚಿವರನ್ನು ಭೇಟಿಯಾದ ಖನ್ನಾ ಅವರು, ಗಂಗಾ ಜಲದ ಜತೆಯಲ್ಲಿ ಆಹ್ವಾನ ಪತ್ರಿಕೆಯನ್ನು ನೀಡಿದರು.
ಭಾರತದ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮ ಆಗಿರುವ ಕುಂಭಮೇಳದಲ್ಲಿ ತಪ್ಪದೇ ಪಾಲ್ಗೊಳ್ಳುವುದಾಗಿ ಕುಮಾರಸ್ವಾಮಿ ಅವರು ಸಚಿವ ಖನ್ನಾ ಅವರಿಗೆ ತಿಳಿಸಿದರು.
ಕುಂಭಮೇಳದಲ್ಲಿ ಪಾಲ್ಗೊಳ್ಳುವುದು ನಿಜಕ್ಕೂ ಸಂತೋಷದ ಸಂಗತಿ. ಅದರಲ್ಲಿಯೂ ಮೂರು ಪುಣ್ಯನದಿಗಳು ಸಂಗಮವಾಗುವ ಪುಣ್ಯಸ್ಥಳದಲ್ಲಿ ತಾಯಿ ಗಂಗೆಯ ಅನುಗ್ರಹಕ್ಕೆ ಪಾತ್ರವಾಗಲು ತಾವು ಕಾತುರದಿಂದ ಕಾಯುತ್ತಿರುವುದಾಗಿ ಕೇಂದ್ರ ಸಚಿವರು ಹೇಳಿದರು.
ಕುಂಭಮೇಳ ದೊಡ್ಡ ಪ್ರಮಾಣದಲ್ಲಿ ಯಶಸ್ವಿ ಆಗಲಿ. ಭಾರತೀಯ ಸನಾತನ ಪರಂಪರೆಯ ಅನನ್ಯ ಪ್ರತೀಕವಾಗಿರುವ ಕುಂಭಮೇಳ ಯಶಸ್ವಿ ಆಗಲಿ ಎಂದು ಕುಮಾರಸ್ವಾಮಿ ಅವರು ಶುಭ ಹಾರೈಸಿದರು.