ದೊಡ್ಡಬಳ್ಳಾಪುರ, (Doddaballapura): ಕಾಂಟರ್ ಸಾಗಿಸುತ್ತಿದ್ದ ಹುಲ್ಲಿಗೆ ವಿದ್ಯುತ್ ತಂತಿ ಸ್ಪರ್ಶಿಸಿದ ಪರಿಣಾಮ ರಾಗಿಯ ಒಣ ಹುಲ್ಲಿಗೆ ಬೆಂಕಿ ತಗುಲಿ, ಸುಮಾರು 50 ಸಾವಿರ ಮೌಲ್ಯದ ಹುಲ್ಲು ಬೆಂಕಿಗಾಹುತಿಯಾ ಘಟನೆ ತಾಲೂಕಿನ ದೊಡ್ಡಬೆಳವಂಗಲ ಸಮೀಪದ ಭಕ್ತರಹಳ್ಳಿಯಲ್ಲಿ ಸಂಭವಿಸಿದೆ.
ಭಕ್ತರಹಳ್ಳಿಯಿಂದ ದೇವನಹಳ್ಳಿ ಕಡೆಗೆ 200 ಹೊರೆ ಹುಲ್ಲನ್ನು ಸಾಗಿಸುವ ವೇಳೆ, ಕ್ಯಾಂಟರ್ನಲ್ಲಿದ್ದ ಹುಲ್ಲಿನಲ್ಲಿ ಬೆಂಕಿ ಕಂಡುಬಂದಿದೆ. ಕೂಡಲೇ ಎಚ್ಚೆತ್ತ ಚಾಲಕ, ಕ್ಲೀನರ್ ಭಕ್ತರಹಳ್ಳಿಯ ಸರ್ಕಾರಿ ಶಾಲೆಯ ಬಳಿ ಕ್ಯಾಂಟರ್ ನಿಲ್ಲಿಸಿ, ರಸ್ತೆ ಬದಿಯಲ್ಲಿಯೇ ಇರುವ ತೊಟ್ಟಿಯಲ್ಲಿದ್ದ ನೀರನ್ನು ಬಳಸಿ ಬೆಂಕಿಯನ್ನು ನಂದಿಸಲು ತೀವ್ರ ಪ್ರಯತ್ನ ನಡೆಸಿದರು. ಈ ವೇಳೆ ಗ್ರಾಮಸ್ಥರು ಜೊತೆಯಾದರು.
ಆದರೆ ಲಾರಿಯೊಳಗಿದ್ದ ಹೆಚ್ಚಿನ ಹುಲ್ಲಿಗೆ ಬೆಂಕಿ ತಗುಲಿರುವ ಕಾರಣ ಬೆಂಕಿ ತಹಬದಿಗೆ ಬರಲಿಲ್ಲ. ಈ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳಕ್ಕೆ ಕರೆ ಮಾಡಲಾಗಿದ್ದು, ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಿದರು.
ಶಾಲೆ ಬಳಿಯೇ ಈ ಘಟನೆ ಸಂಭವಿಸಿರುವುದರಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದು, ಮಕ್ಕಳನ್ನು ಹೊರಗೆ ಬಿಡದೆ ಶಾಲೆಯೊಳಗೆ ಕುಳ್ಳರಿಸಲಾಗಿತ್ತು.
ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.