Site icon ಹರಿತಲೇಖನಿ

Nikhil kumaraswamy| JDS ರಾಜ್ಯಾಧ್ಯಕ್ಷ ಹುದ್ದೆ: ನಿಖಿಲ್ ಕುಮಾರಸ್ವಾಮಿ ಮಹತ್ವದ ಹೇಳಿಕೆ..!

ರಾಯಚೂರು: ರಾಜ್ಯಾಧ್ಯಕ್ಷ ಸ್ಥಾನ ಹಾಗೂ ಇತರ ಯಾವುದೇ ಹುದ್ದೆಗಾಗಿ ಹಪಾಹಪಿಸುತ್ತಿಲ್ಲ. ಪಕ್ಷದ ರಾಜ್ಯಾಧ್ಯಕ್ಷನಾಗಬೇಕೆನ್ನುವ ಬಯಕೆ ನನಗಿಲ್ಲ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil kumaraswamy) ತಿಳಿಸಿದರು

ರಾಯಚೂರು ಜಿಲ್ಲೆಯ ಜೆಡಿಎಸ್ ಪ್ರಾಥಮಿಕ ಸದಸ್ಯತ್ವ ನೊಂದಣಿ ಮತ್ತು ಮಾಜಿ ಸಚಿವರಾದ ಶ್ರೀ ವೆಂಕಟರಾವ್ ನಾಡಗೌಡ ಅವರ ಹುಟ್ಟುಹಬ್ಬದ ಸಮಾರಂಭ ಕಾರ್ಯಕ್ರಮಕ್ಕೂ ಮುನ್ನ ನಿಖಿಲ್ ಕುಮಾರಸ್ವಾಮಿ ಅವರು ಮಾಧ್ಯಮಗಳ ಜತೆ ಮಾತನಾಡಿದರು.

ಜೆಡಿಎಸ್ ರಾಜ್ಯಾಧ್ಯಕ್ಷ ಬದಲಾವಣೆ ಪಕ್ಷದ ವೇದಿಕೆಯಲ್ಲಿ ಯಾವುದೇ ಚರ್ಚೆಯಾಗಿಲ್ಲ. ಕುಮಾರಣ್ಣ ಅವರು ಕೇಂದ್ರ ಸಚಿವರಾಗಿ ಪಕ್ಷದ ಅಧ್ಯಕ್ಷರಾಗಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆ ಮಾಡುವಂತಿದ್ದರೆ ಪಕ್ಷದಲ್ಲಿ ಹಿರಿಯರು, ಅನುಭವಿಗಳು ಇದ್ದಾರೆ. ಅವರಿಗೆ ಆದ್ಯತೆ ನೀಡಲಾಗುತ್ತದೆ. ಈಗ ಈ ವಿಷಯ ಅಪ್ರಸ್ತುತ ಎಂದರು.

ಬಿಜೆಪಿ ಜತೆಗೂಡಿಯೇ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ

ಜೆಡಿಎಸ್ ಪಕ್ಷ ಎನ್‌ಡಿಎ ಅಂಗವಾಗಿರುವದರಿಂದ ಮುಂಬರುವ ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಗಳು ಹೊಂದಾಣಿಕೆಯೊಂದಿಗೆ ಸ್ಪರ್ಧಿಸಲಾಗುವುದು. ವಿವಿಧ ಕ್ಷೇತ್ರಗಳಲ್ಲಿರುವ ಗೊಂದಲಗಳನ್ನು ರಾಜ್ಯ ನಾಯಕರು ಚರ್ಚೆ ಮಾಡಿ ಪರಿಹಾರ ಕಂಡುಕೊಳ್ಳಲಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದ ಜನತೆ ಕಾಂಗ್ರೆಸ್ ತಿರಸ್ಕಾರ ಮಾಡುವ ಕಾಲ ದೂರವಿಲ್ಲ ಎಂದರು ತಿಳಿಸಿದರು.

ಕಾಂಗ್ರೆಸ್ ಆಡಳಿತ ವಿರುದ್ದ ಜನತೆ ಬೇಸತ್ತಿದ್ದಾರೆ

ರಾಜ್ಯದಲ್ಲಿ ಕಾಂಗ್ರೆಸ್ ಭ್ರಷ್ಟ ಆಡಳಿತ ನಡೆಸುತ್ತಿದ್ದು, ಮುಡಾ ಹಗರಣ, ಭೋವಿ ನಿಗಮ, ವಾಲ್ಮೀಕಿ ಅಭಿವೃದ್ದಿ ನಿಗಮ ಭ್ರಷ್ಟಾಚಾರ, ಹಾಲಿನ ದರ, ಬಸ್ ದರ ಏರಿಕೆ ಖಂಡಿಸಿ ಬಿಜೆಪಿಯೊಂದಿಗೆ ಜೊತೆಗೂಡಿ ರಾಜ್ಯದ ಜನತೆಯ ಪರ ಧ್ವನಿ ಎತ್ತುವ ಕೆಲಸ ಜೆಡಿಎಸ್ ಮಾಡುತ್ತಿದೆ. ಕಾಂಗ್ರೆಸ್ ಆಡಳಿತ ವಿರುದ್ದ ಜನತೆ ಬೇಸತ್ತಿದ್ದಾರೆ ಎಂದು ಆರೋಪಿಸಿದರು.

ಯುವ ಘಟಕದ ರಾಜ್ಯಾಧ್ಯಕ್ಷನಾಗಿ ರಾಜ್ಯಾದಾದ್ಯಂತ ಪಕ್ಷ ಸಂಘಟನೆಗೆ ಶ್ರಮಿಸುತ್ತಿದ್ದೇನೆ. ಈಗಾಗಲೇ ಏಳು ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದೇನೆ. ರಾಯಚೂರಿಗೂ ಬರಬೇಕಿತ್ತು. ಆದರೆ ಉಪಚುನಾವಣೆ ಹಿನ್ನಲೆಯಲ್ಲಿ ಸಾಧ್ಯವಾಗಿರಲಿಲ್ಲ. ಮೈಸೂರು ಪ್ರಾಂತ್ಯದ ಜೆಡಿಎಸ್‌ಗೆ ರಾಜಕೀಯ ಶಕ್ತಿ ತುಂಬಿದೆ. ಈ ಭಾಗದಲ್ಲಿ ಜೆಡಿಎಸ್ ಪಕ್ಷಕ್ಕೆ ಉತ್ತಮ ಒಲವಿದೆ. ಮುಂದಿನ ದಿನಗಳಲ್ಲಿ ಹಿರಿಯರ ಅನುಭವನಗಳನ್ನು ಪಡೆದು ಪಕ್ಷ ಸಂಘಟನೆಗೆ ದುಡಿಯುವೆ ಎಂದರು.

ಚುನಾವಣೆಯ ಮೂರು ತಿಂಗಳ ಮುಂಚೆ ಹಣ ಬಿಡುಗಡೆ ಮಾಡ್ತಾರೆ

ಚನ್ನಪಟ್ಟಣ ಉಪಚುನಾವಣೆಯಲ್ಲಿ ನನ್ನ ಸೋಲಿಗೆ ನಾನಾ ಕಾರಣಗಳಿವೆ. ಮೂರು ದಿನ ಮುಂಚೆಯೇ ಗೃಹಲಕ್ಷ್ಮೀ ಯೋಜನೆಯ ಮೂರು ತಿಂಗಳ ಹಣ ಚುನಾವಣೆ ಎರಡು ದಿನಗಳು ಇರುವ ಮುನ್ನ ಮಹಿಳೆಯರ ಖಾತೆಗೆ ಹಾಕಿದರು. ರಾಜ್ಯ ಸರಕಾರ ಅಧಿಕಾರ ದುರುಪಯೋಗ ಮಾಡಿಕೊಂಡು ಮತ ಪಡೆದುಕೊಂಡಿರುವುದು ನಾಚಿಕೆಗೇಡು. ಜೆಡಿಎಸ್ ಬಲಿಷ್ಠವಾಗಿದ್ದಾಗ ಮನೆಯವರು ನಿಂತುಕೊಂಡು ಚುನಾವಣೆ ಎದುರಿಸುತ್ತಾರೆ. ಸೋಲಿನ ಭೀತಿಯಿದ್ದರೆ ಕಾರ್ಯಕರ್ತರನ್ನು ಬಲಿ ಕೊಡುತ್ತಾರೆ ಎನ್ನುವ ವಿರೋಧಿಗಳ ಆರೋಪ ಸುಳ್ಳಾಗಿಸಲು ನಾನು ಸ್ಪರ್ಧೆ ಮಾಡಬೇಕಾಯಿತು ಎಂದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ವೆಂಕಟರಾವ ನಾಡಗೌಡ, ದೇವದುರ್ಗಾ ಶಾಸಕಿ ಜಿ.ಕರೆಮ್ಮ ನಾಯಕ, ಮಾನ್ವಿ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ, ರಾಯಚೂರು ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ, ಕೊಪ್ಪಳ ಜಿಲ್ಲಾಧ್ಯಕ್ಷ ಸಿ.ವಿ.ಚಂದ್ರಶೇಖರ, ಮುಖಂಡರಾದ ಮಹಾಂತೇಶ ಪಾಟೀಲ್ ಅತ್ತನೂರು, ಶಿವಶಂಕರ ವಕೀಲ, ಬಸವರಾಜ ನಾಡಗೌಡ, ಚಂದ್ರಭೂಪಾಲ ನಾಡಗೌಡ ಸೇರಿದಂತೆ ಅನೇಕರು ಇದ್ದರು

Exit mobile version