ಹಾಸನ: ತಂದೆಯನ್ನೇ ಕೊಲೆಮಾಡಿ (Murder) ಹೃದಯಾಘಾತ ಎಂದು ಬಿಂಬಿಸಿದ್ದ ಆರೋಪಿಯನ್ನು ಪೊಲೀಸರು ಸಕಲೇಶ ಪುರದ ಲಿಂಗಾಪುರ ಗ್ರಾಮದಲ್ಲಿ ಬಂಧಿಸಿದ್ದಾರೆ. ಶಶಿಧರ್ (58) ಮಗನಿಂದ ಕೊಲೆಗೀಡಾದ ವ್ಯಕ್ತಿ. ದಿನೇಶ್ ಬಂಧಿತ ಆರೋಪಿ.
ಕಂಠಪೂರ್ತಿ ಕುಡಿದು ಬಂದು ದಿನೇಶ್ ತಂದೆ ಜೊತೆ ಜಗಳವಾಡಿ ಒದ್ದಿದ್ದ. ಈ ವೇಳೆ ಶಶಿಧರ್ ಕುಸಿದು ಬಿದ್ದಿದ್ದರು. ನಂತರ ದಿನೇಶ್, ತಂದೆಗೆ ಹೃದಯಾಘಾತವಾಗಿದೆ ಎಂದು ಅರೇಹಳ್ಳಿ ಆಸ್ಪತ್ರೆಗೆ ದಾಖಲಿಸಿದ್ದ. ಆದರೆ ಶಶಿಧರ್ ಮೃತಪಟ್ಟಿದ್ದನ್ನು ಆಸ್ಪತ್ರೆಯಲ್ಲಿ ವೈದ್ಯರು ದೃಢಪಡಿಸಿದ್ದರು.
ಬಳಿಕ ಮೃತದೇಹವನ್ನು ಅಂತ್ಯಸಂಸ್ಕಾರಕ್ಕೆ ತಂದಿದ್ದಾಗ ತಂದೆ ಜೊತೆ ಜಗಳವಾಡಿದ್ದನ್ನು ನೋಡಿದ್ದ ಗ್ರಾಮಸ್ಥರು ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು.
ಬಳಿಕ ದಿನೇಶ್ ವಿರುದ್ದ ಆತನ ತಾಯಿ ಅರೇಹಳ್ಳಿ ಪೊಲೀಸರಿಗೆ ದೂರು ನೀಡಿದರು. ಪೊಲೀಸರು ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.