Daily story: ಹೃದಯಸ್ಪರ್ಶಿಯಾದ ಪುಟ್ಟ ಘಟನೆಯೊಂದು ಇಲ್ಲಿದೆ. ಆರೇಳು ವರ್ಷ ವಯಸ್ಸಿನ ಒಬ್ಬನೇ ಮಗನಿದ್ದ ಆ ದಂಪತಿಗಳು ಎಲ್ಲರಂತೆಯೇ ಸಾಮಾನ್ಯ ಜನ.
ಆಗೊಮ್ಮೆ ಈಗೊಮ್ಮೆ ಎಲ್ಲಾ ಗಂಡ-ಹೆಂಡತಿಯರಲ್ಲಿ ಆಗುವಂತೆ ಸಣ್ಣಪುಟ್ಟ ವಿಷಯಗಳಿಗೆ ಮನಸ್ತಾಪಗಳು ಬರುತ್ತಿದ್ದವು. ಸಣ್ಣಪುಟ್ಟ ಜಗಳಗಳೂ ಆಗುತ್ತಿದ್ದವು. ಆದರೆ ಅವರು ಮಗನ ಮುಂದೆ ಮಾತ್ರ ಜಗಳವಾಡುತ್ತಿರಲಿಲ್ಲ.
ಜಗಳದ ಪರಿಣಾಮ ಮಗನ ಮುಗ್ಧ ಮನಸ್ಸಿನ ಮೇಲೆ ಆಗಬಾರದೆಂಬ ಎಚ್ಚರಿಕೆಯಿತ್ತು. ಅವರಿಬ್ಬರಿಗೂ ತಮ್ಮೊಬ್ಬನೇ ಮಗನನ್ನು ಕಂಡರೆ ಪಂಚಪ್ರಾಣ! ಒಂದು ರಾತ್ರಿ ಅಪ್ಪ-ಅಮ್ಮ ಮತ್ತವರ ಮಗ ಊಟಕ್ಕೆ ಕುಳಿತಿದ್ದರು.
ಎಲ್ಲವೂ ಸರಿಯಾಗಿಯೇ ಇತ್ತು. ಅಂದು ಆಕೆ ಆತನಿಗೆ ಬಹಳ ಇಷ್ಟವಾದ ಪಾಯಸವನ್ನು ಮಾಡಿದ್ದರು. ಆತ ಪಾಯಸವನ್ನು ರುಚಿ ನೋಡಿದಾಕ್ಷಣ “ಇದೆಂತಹ ಪಾಯಸ? ಸಿಹಿಯೇ ಇಲ್ಲ! ಇಷ್ಟು ವರ್ಷಗಳಾದರೂ ನಿನಗೆ ಪಾಯಸ ಮಾಡುವುದಕ್ಕೇ ಬರುವುದಿಲ್ಲ.
ನಮ್ಮಮ್ಮ ಎಷ್ಟು ಚೆನ್ನಾಗಿ ಪಾಯಸ ಮಾಡುತ್ತಿದ್ದರು ಗೊತ್ತಾ?” ಎಂದರು. ಆಕೆ ತಕ್ಷಣ “ಹೌದ್ರೀ! ನಿಮ್ಮಷ್ಟೇ ಕೆಲಸ ನಾನೂ ಮಾಡುತ್ತೇನೆ. ನಿಮ್ಮಷ್ಟೇ ಸಂಬಳವನ್ನೂ ತರುತ್ತೇನೆ. ನಿಮ್ಮ ತಾಯಿ ಒಂದಕ್ಷರವನ್ನೂ ಓದಿರಲಿಲ್ಲ.
ಒಂದು ರೂಪಾಯಿ ಸಂಪಾದನೆಯನ್ನೂ ಮಾಡುತ್ತಿರಲಿಲ್ಲ. ಆದರೂ ಅವರು ಮಾಡುತ್ತಿದ್ದ ಅಡುಗೆಯನ್ನು ಹೊಗಳುತ್ತೀರಿ. ನನ್ನ ಅಡುಗೆಯನ್ನು ತೆಗಳುತ್ತೀರಿ.
ನಾನೂ ಅವರಂತೆಯೇ ನಿರುದ್ಯೋಗಿಯಾಗಿ ಮನೆಯಲ್ಲಿ ಕುಳಿತಿರುತ್ತಿದ್ದರೆ ಅವರಿಗಿಂತ ಚೆನ್ನಾಗಿ ಅಡುಗೆ ಕಲಿಯುತ್ತಿದ್ದೆ” ಎಂದರು. ಆತ ತಕ್ಷಣ “ನಿನಗೆ ಅಡುಗೆ ಮಾಡುವುದಕ್ಕೆ ಬರುವುದಿಲ್ಲವೆಂದು ಒಪ್ಪಿಕೋ.
ಆದರೆ ನಮ್ಮಮ್ಮನನ್ನು ಅನಕ್ಷರಸ್ಥೆ, ನಿರುದ್ಯೋಗಿ, ಎಂದೆಲ್ಲ ಹೀಗಳೆಯಬೇಡ. ನಿಮ್ಮಪ್ಪ-ಅಮ್ಮಂದಿರಲ್ಲಿ ನೂರೆಂಟು ತಪ್ಪುಗಳನ್ನು ನಾನೂ ಹುಡುಕಬಲ್ಲೆ” ಎಂದುಬಿಟ್ಟರು.
ಹೀಗೆ ಅವರಿಬ್ಬರಲ್ಲಿ ಮಾತಿಗೆ ಮಾತು ಬೆಳೆಯುತ್ತಾ ಹೋಯಿತು. ಮಾತಿನ ರಭಸದಲ್ಲಿ ಮಗ, ತಮ್ಮಿಬ್ಬರ ಜಗಳವನ್ನು ನೋಡುತ್ತಿದ್ದಾನೆಂಬುದನ್ನು ಕೊಂಚ ಹೊತ್ತು ಮರೆತುಬಿಟ್ಟಿದ್ದರು.
ಆದರೆ ತಮ್ಮಿಬ್ಬರ ಜಗಳವನ್ನು ಮಗ ಬಾಯಿಬಿಟ್ಟುಕೊಂಡು, ನೋವಿನಿಂದ ನೋಡುತ್ತಿರುವುದನ್ನು ಇಬ್ಬರೂ ಗಮನಿಸಿದಾಗ, ತಮ್ಮ ತಪ್ಪು ಅವರಿಗೆ ಅರಿವಾಯಿತು.
ಆತ ತಕ್ಷಣ ಎದ್ದು ಹೆಂಡತಿಯ ಬಳಿ ಹೋಗಿ ಆಕೆಯ ಕೈಹಿಡಿದು “ಅಯ್ಯೋ! ನಾನೆಂತಹ ತಪ್ಪು ಮಾಡಿಬಿಟ್ಟೆ. ಕೋಪದ ಭರದಲ್ಲಿ ನಿನ್ನನ್ನು ಏನೇನೋ ಅಂದುಬಿಟ್ಟೆ. ನನ್ನ ವರ್ತನೆಯ ಬಗ್ಗೆ ನನಗೇ ನಾಚಿಕೆಯಾಗುತ್ತಿದೆ. ನನ್ನನ್ನು ಕ್ಷಮಿಸಿಬಿಡು” ಎಂದು ಹೇಳಿ ಆಕೆಯನ್ನು ಲಘುವಾಗಿ ಅಪ್ಪಿಕೊಂಡರು.
ತನ್ನ ಗಂಡನಲ್ಲಾದ ದಿಢೀರ್ ಬದಲಾವಣೆಯನ್ನು ಕಂಡು ಆಕೆಯೂ ಬೆರಗಾದರು. ತಮ್ಮಿಬ್ಬರ ಜಗಳವನ್ನು ಮಗ ಗಮನಿಸುತ್ತಿದ್ದಾನೆಂಬ ಅರಿವು ಅವರಿಗೂ ಆಯಿತು. ಆಕೆಯೂ ತಕ್ಷಣ “ಇಲ್ಲಾರೀ. ನನ್ನದೇ ತಪ್ಪು. ನಾನು ಪಾಯಸ ಮಾಡುವಾಗ ಯಾವುದೋ ಯೋಚನೆಯಲ್ಲಿದ್ದೆ. ನನ್ನನ್ನು ಕ್ಷಮಿಸಿಬಿಡಿ” ಎಂದು ಹೇಳಿದರು.
ಎದ್ದು ಹೋಗಿ ಒಂದು ಚಮಚ ಸಕ್ಕರೆಯನ್ನು ತಂದು ಪಾಯಸಕ್ಕೆ ಸೇರಿಸಿದರು. ಗಂಡನಿಗೆ ಕೊಟ್ಟರು. ಆತ ಅದನ್ನು ಸೇವಿಸಿ “ವಾಹ್! ಅದ್ಭುತವಾಗಿದೆ. ಒಂದು ಸಣ್ಣ ಚಮಚ ಸಕ್ಕರೆ ಇಲ್ಲದಿದ್ದುದಕ್ಕಾಗಿ ನಾವು ಇಷ್ಟು ದೊಡ್ಡ ಜಗಳವಾಡಿದೆವಲ್ಲಾ!
ನನ್ನನ್ನು ಕ್ಷಮಿಸಿದ್ದೀಯಾ ತಾನೆ?” ಎಂದಾಗ, ಆಕೆಯೂ “ನೀವೂ ನನ್ನನ್ನು ಕ್ಷಮಿಸಿದ್ದೀರಿ ತಾನೇ?” ಎನ್ನುತ್ತಾ ಗಟ್ಟಿಯಾಗಿ ನಕ್ಕರು. ಆಗ ಮಗನೂ ಅವರ ನಗುವಿನಲ್ಲಿ ಭಾಗಿಯಾದ. ಅಂದು ರಾತ್ರಿ ಮಲಗುವ ಮುಂಚೆ ಅವರ ಪುಟ್ಟ ಮಗ ದೇವರ ಮನೆಗೆ ಹೋದ.
ಕಣ್ಮುಚ್ಚಿಕೊಂಡು, ಕೈಮುಗಿದುಕೊಂಡು “ಓ ದೇವರೇ! ದೊಡ್ಡವನಾದ ಮೇಲೆ ಅಪ್ಪ-ಅಮ್ಮಂದಿರಂತೆ ನನ್ನನ್ನೂ ದೊಡ್ಡ ಮನುಷ್ಯನನ್ನಾಗಿ ಮಾಡಿದರೆ ಸಾಲದು. ಅವರಂತೆಯೇ ದೊಡ್ಡ ಮನಸ್ಸಿನವನನ್ನಾಗಿ ಮಾಡು” ಎಂದು ಕೇಳಿಕೊಂಡ!
ಹಿಂದೆಯೇ ನಿಂತಿದ್ದ ಅಪ್ಪ-ಅಮ್ಮಂದಿರು ಮಗನ ಪ್ರಾರ್ಥನೆಯನ್ನು ಗಮನಿಸಿದರು. ಅವರೂ ಒಳಕ್ಕೆ ಬಂದು ಕಣ್ಣೀರಿಡುತ್ತಾ “ನಮ್ಮ ಮಗ ಅಂದುಕೊಳ್ಳುವಷ್ಟು ದೊಡ್ಡ ಮನುಷ್ಯರೂ, ದೊಡ್ಡ ಮನಸ್ಸಿನವರೂ ನಾವಾಗಬೇಕು” ಎಂದು ಕೇಳಿಕೊಂಡರಂತೆ!
ನಮ್ಮ ಬದುಕಿನಲ್ಲೂ ಜಗಳ ಮಾಡುವ ಸಂದರ್ಭ ಬಂದಾಗ, ನಮ್ಮ ಜಗಳವನ್ನು ಒಂದು ಸಣ್ಣ ಚಮಚ ಬಗೆಹರಿಸಬಲ್ಲದೇ ಎಂಬುದನ್ನು ಯೋಚಿಸಬಹುದು! ದೊಡ್ಡ ಮನಸ್ಸಿನವರಾಗಲು ಪ್ರಯತ್ನಿಸಬಹುದು!
ಕೃಪೆ: ಸಾಮಾಜಿಕ ಜಾಲತಾಣ.