ಬೆಳಗಾವಿ: ಸದನದಲ್ಲಿ ಅಶ್ಲೀಲ ಪದ ಬಳಸಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ನೀಡಿದ ದೂರಿನ ಮೇಲೆಗೆ ಬಿಜೆಪಿ ಎಂಎಲ್ಸಿ ಸಿಟಿ ರವಿ (CT Ravi) ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಅವಾಚ್ಯಪದ ಬಳಕೆ ಆರೋಪದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಹಿರೇಬಾಗೇವಾಡಿ ಪೊಲೀಸ್ ಠಾಣೆಗೆ ದೂರು ಬರೆದುಕೊಟ್ಟಿದ್ದಾರೆ.
ಈ ದೂರಿನ ಮೇರೆಗೆ ಇದೀಗ ಸಿಟಿ ರವಿ ವಿರುದ್ಧ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ ಕಾಯ್ದೆ 75 ಮತ್ತು 79ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ.
ಬೆಳಗಾವಿಯ ಹಿರೇಬಾಗೇವಾಡಿ ಠಾಣೆಯಲ್ಲಿ ಬಿಎನ್ಎಸ್ ಕಾಯ್ದೆ 75 ಮತ್ತು 79ಅಡಿಯಲ್ಲಿ ಕೇಸ್ ದಾಖಲಾಗಿದ್ದು. ಲೈಂಗಿಕ ಕಿರುಕುಳ, ಮಹಿಳೆ ಇಚ್ಛೆ ವಿರುದ್ಧ ಅಶ್ಲೀಲತೆ ತೋರುವುದು. ಮಹಿಳೆಯ ನಮ್ರತೆ ಅವಮಾನಿಸುವ ಉದ್ದೇಶದಿಂದ ಸನ್ನೆ, ಪದ ಅಥವಾ ಕ್ರಿಯೆ, ಲೈಂಗಿಕ ಬಣ್ಣದ ಟೀಕೆ ಎಂದು ಎಫ್ಐಆರ್ನಲ್ಲಿ ಉಲ್ಲೇಖವಾಗಿದೆ ಎಂದು ವರದಿಯಾಗಿದೆ.
ಈ ಹಿನ್ನೆಲೆಯಲ್ಲಿ ಸದನದ ಬಳಿ ಪ್ರತಿಭಟನೆ ನಡೆಸುತ್ತಿದ್ದ ಪರಿಷತ್ ಸದಸ್ಯ ಸಿಟಿ ರವಿ ಅವರನ್ನು ಪೊಲೀಸರು ಬಂದಿಸಿದರು. ಈ ವೇಳೆ ವಿರೋಧ ಪಕ್ಷದ ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೆ ಶಾಸಕರಾದ ಅರವಿಂದ್ ಬೆಲ್ಲದ ಹಾಗೂ ಬಸನಗೌಡ ಪಾಟೀಲ ಯತ್ನಾಳ್ ಅವರು ಪೊಲೀಸ್ ವ್ಯಾನ್ಗೆ ಅಡ್ಡಲಾಗಿ ನಿಂತು ತಡೆಯಲು ಮುಂದಾದರು. ಆದರೆ ಪೊಲೀಸರು ಬದಿಗೆ ಕರೆದೊಯ್ದು, ಸಿಟಿ ರವಿ ಅವರನ್ನು ಠಾಣೆಗೆ ಕರೆದೊಯ್ಯಲಾಗಿದೆ.
ವಿಜಯೇಂದ್ರ ಪ್ರತಿಕ್ರಿಯೆ: ಮಾನ್ಯ C T Ravi ಅವರು ಹಿರಿಯ ಶಾಸಕರಾಗಿ ಸುದೀರ್ಘ ಅನುಭವ ಹೊಂದಿದ ಸುಸಂಸ್ಕೃತ ಭಾಷೆ ಬಳಸುವ ಉತ್ತಮ ವಾಕ್ಪಟು. ಸಭ್ಯತೆಯ ಎಲ್ಲೆಮೀರಿ ಪದ ಸಂಸ್ಕೃತಿ ಇಲ್ಲದವರಂತೆ ಮಾತನಾಡಿದವರಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ.
ಈ ಕುರಿತು ಟ್ವಿಟ್ ಮಾಡಿರುವ ಅವರು, ಇಂದು ವಿಧಾನಪರಿಷತ್ತಿನಲ್ಲಿ ನಡೆದಿರುವ ಘಟನೆಯ ವೇಳೆ ಮಾನ್ಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಕುರಿತ ಪದಬಳಕೆಯ ಸಂಬಂಧ ಈಗಾಗಲೇ ಸೂಕ್ತ ಸ್ಪಷ್ಟನೆ ನೀಡಿ ಆರೋಪ ನಿರಾಕರಿಸಿದ್ದಾರೆ.
ಮಾತೆಯನ್ನು ಪೂಜಿಸುವ ಸಂಸ್ಕಾರದ ನೆಲೆಗಟ್ಟಿನ ಸಂಘಟನೆಯಿಂದ ಬೆಳೆದು ಬಂದಿರುವ ಸಿಟಿ ರವಿ ಅವರನ್ನು ಕುರಿತು ಕಾಂಗ್ರೆಸ್ಸಿಗರು ವಿಧಾನಪರಿಷತ್ತಿನಲ್ಲಿ ನಡೆದ ಪ್ರತಿಭಟನೆಯ ವೇಳೆ ಬಳಸಿರುವ ‘ಕೊಲೆಗಡುಕ’ ಎಂಬ ಪದ ಸಹಜವಾಗಿಯೇ ಅವರ ಸಹನೆಯನ್ನು ಕೆಣಕಿರಬಹುದು.
ಯಾವುದಾದರೂ ಒಂದು ವಿಷಯವನ್ನು ಸೃಷ್ಟಿಸಿ ಗದ್ದಲವೆಬ್ಬಿಸಿ ತಮಗೆ ಸುತ್ತಿಕೊಂಡಿರುವ ಅಭಿವೃದ್ಧಿ ವಿರೋಧಿ ಆಡಳಿತದ ಅಲೆಯ ವಿರುದ್ಧದ ಹಾಗೂ ಭ್ರಷ್ಟಾಚಾರದ ಹಗರಣಗಳ ಸುರುಳಿಯ ವಿಷಯವನ್ನು ಜನಮಾನಸದ ದಿಕ್ಕು ತಪ್ಪಿಸಲು ಅನಗತ್ಯ ಗೊಂದಲ ಸೃಷ್ಟಿಸುವ ಹೊಸ ವರಸೆಯನ್ನು ಕಾಂಗ್ರೆಸ್ಸಿಗರು ಶುರುವಿಟ್ಟುಕೊಂಡಿದ್ದಾರೆ.
ಇಂದಿನ ಘಟನೆಯ ಹಿನ್ನೆಲೆಯಲ್ಲಿ ವಿಧಾನಮಂಡಲದೊಳಗೆ ಸಿಟಿ ರವಿ ಅವರ ಮೇಲೆ ಮಾರ್ಷಲ್ ಗಳ ಸಮ್ಮುಖದಲ್ಲೇ ಗೂಂಡಾಗಳಿಂದ ಹಲ್ಲೆಗೆ ಯತ್ನ ನಡೆದಿರುವ ಘಟನೆ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲಿನ ನೇರ ದಾಳಿಯಾಗಿದೆ.
ಗೂಂಡಾಗಿರಿ ರಾಜಕಾರಣಕ್ಕೆ ಹೆಸರಾಗಿರುವ ಕಾಂಗ್ರೆಸ್ಸಿಗರು ವಿಧಾನಮಂಡಲದೊಳಗೂ ಕೂಡ ಗೂಂಡಾಗಳನ್ನು ಕರೆತಂದು ದಾಂಧಲೆ ಎಬ್ಬಿಸುವ ಮಟ್ಟಿಗೆ ಪರಿಸ್ಥಿತಿ ಸೃಷ್ಟಿಸುತ್ತಿದ್ದಾರೆ ಎಂದರೆ ಇನ್ನು ಜನಸಾಮಾನ್ಯರ ಪಾಡೇನು ಎಂಬ ಆತಂಕ ರಾಜ್ಯದ ಜನತೆಯನ್ನು ಕಾಡದೇ ಇರದು.
ಪೊಲೀಸ್ ಸರ್ಪಗಾವಲಿನ ಸುವರ್ಣಸೌಧದೊಳಗೆ ಗೂಂಡಾಗಿರಿ ನಡೆಸಲು ಮಾನ್ಯ ಸಿಟಿ ರವಿ ಅವರ ಮೇಲೆ ಹಲ್ಲೆ ನಡೆಸಲು ಪ್ರಚೋದನೆ ನೀಡಿರುವ ಹಿಂದಿನ ಶಕ್ತಿ ಯಾವುದು ಎಂಬುದರ ಬಗ್ಗೆ ಉಭಯ ಸದನಗಳ ಸಭಾಧ್ಯಕ್ಷರು ಮತ್ತು ಸಭಾಪತಿಗಳು ಕೂಡಲೇ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಸಿಟಿ ರವಿ ಅವರ ಮೇಲೆ ಹಲ್ಲೆ ನಡೆಸಲು ಮುಂದಾದ ಗೂಂಡಾಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳದಿದ್ದರೆ ಬಿಜೆಪಿ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಲಿದೆ ಎಂದಿದ್ದಾರೆ.