ದೊಡ್ಡಬಳ್ಳಾಪುರ: ತಾಲೂಕಿನ ರಾಜಕೀಯ ಮುತ್ಸದ್ದಿ, JDS ಹಿರಿಯ ಮುಖಂಡರಾದ ಹೆಚ್.ಅಪ್ಪಯ್ಯಣ್ಣ ಅವರು ನಿದ್ರೆಯಲ್ಲಿಯೇ ಇಹಲೋಕವನ್ನು ತ್ಯಜಿಸಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು.
ಶುಕ್ರವಾರ ರಾತ್ರಿ ಊಟದ ನಂತರ ಮೇಲಿನ ಕೋಣೆಯಲ್ಲಿ ಮಲಗಿದ ಅವರು, ನಿದ್ರೆಯಲ್ಲಿಯೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇಂದು ಬೆಳಗ್ಗೆ ರೂಮಿಗೆ ತೆರಳಿ ನೋಡಿದಾಗ ಅಪ್ಪಯ್ಯಣ್ಣ ನಿಧನರಾಗಿರುವುದು ಬೆಳಕಿಗೆ ಬಂದಿದೆ.
ಮೃತರ ಅಂತ್ಯಕ್ರಿಯೆ ಇಂದು (ಶನಿವಾರ) ಮಧ್ಯಾಹ್ನ 3ಗಂಟೆಗೆ ಹಾಡೋನಹಳ್ಳಿಯ ಸ್ವಂತ ಜಮೀನಿನ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ನಗರಸಭೆ ಉಪಾಧ್ಯಕ್ಷ ಮಲ್ಲೇಶ್ ಸಂತಾಪ
ಹಿಂದುಳಿದ ವರ್ಗಗಳಿಗೆ ಅವಕಾಶ ನೀಡಿ, ಯುವ ಸಮುದಾಯಕ್ಕೆ ಮಾರ್ಗದರ್ಶಿಯಾಗಿದ್ದ ಅಪ್ಪಯ್ಯಣ್ಣ ಅವರು ಇನ್ನಿಲ್ಲ ಎಂಬುದನ್ನು ಅರಿಗಿಸಿಕೊಳ್ಳಲಾಗುತ್ತಿಲ್ಲ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಪ್ರಾರ್ಥಿಸುವುದಾಗಿ ನಗರಸಭೆ ಉಪಾಧ್ಯಕ್ಷ ಮಲ್ಲೇಶ್ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತಿಪ್ಪೂರು ಬೈರೇಗೌಡ ಸಂತಾಪ
ಸ್ನೇಹ ಜೀವಿ, ಸಜ್ಜನ, ಅಜಾತಶತ್ರುವಾಗಿ ಅಪ್ಪಯ್ಯಣ್ಣ ಅಗಲಿಕೆ ದೊಡ್ಡಬಳ್ಳಾಪುರ ಹಾಗೂ ದೇವನಹಳ್ಳಿ ತಾಲೂಕಿಗೆ ತುಂಬಲಾರದ ನಷ್ಟವಾಗಿದೆ. ಹಿರಿಯ ರಾಜಕೀಯ ಮುತ್ಸದ್ದಿಯಾಗಿ ಅನೇಕರಿಗೆ ಮಾರ್ಗದರ್ಶನ ನೀಡಿದ್ದ ಅವರ ಅಗಲಿಕೆ ಮನಸ್ಸಿಗೆ ನೋವನ್ನು ತಂದಿದೆ ಎಂದು ಕಾಂಗ್ರೆಸ್ ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಬೈರೇಗೌಡ ತಿಳಿಸಿದ್ದಾರೆ.
ತೆಂಗು ನಾರು ಮಂಡಳಿ ರಾಜ್ಯಾಧ್ಯಕ್ಷ ಗಂಟಿಗಾನಹಳ್ಳಿ ಬಾಬು ಸಂತಾಪ
ರಾಜಕೀಯ ಗುರುಗಳು, ಆತ್ಮೀಯ ಒಡನಾಡಿಯಾಗಿದ್ದ ಅಪ್ಪಯ್ಯಣ್ಣ ಅವರ ಅಗಲಿಕೆಯ ನೋವನ್ನು ತಡೆಯಲಾಗುತ್ತಿಲ್ಲ. ಅಪ್ಪಯ್ಯಣ್ಣರ ಅಗಲಿಕೆಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಿರಿಯ ರಾಜಕೀಯ ಮುತ್ಸದ್ದಿಯನ್ನು ಕಳೆದುಕೊಂಡಂತಾಗಿದೆ ಎಂದು ತೆಂಗು ನಾರು ಮಂಡಳಿ ರಾಜ್ಯಾಧ್ಯಕ್ಷ ಗಂಟಿಗಾನಹಳ್ಳಿ ಬಾಬು ತಿಳಿಸಿದ್ದಾರೆ.
ನಗರಸಭೆ ಸದಸ್ಯ ವಡ್ಡರಹಳ್ಳಿ ರವಿಕುಮಾರ್ ಸಂತಾಪ
ಜೆಡಿಎಸ್ ಪಕ್ಷದ ಹಿರಿಯ ಮುತ್ಸದ್ದಿ ರಾಜಕಾರಣಿ ಅಪ್ಪಯ್ಯಣ್ಣ ಅವರ ಅಗಲಿಕೆ ದಿಗ್ಭ್ರಮೆಯನ್ನು ತಂದಿದೆ ಎಂದು ನಗರಸಭೆ ವಡ್ಡರಹಳ್ಳಿ ರವಿಕುಮಾರ್ ತಿಳಿಸಿದ್ದಾರೆ.
ರಾತ್ರಿ ಮಲಗಿದವರು ಇಂದು ನಮ್ಮೊಂದಿಗಿಲ್ಲ ಎಂಬುದು ನಂಬಲಾಗುತ್ತಿಲ್ಲ. ಅವರ ಅಗಲಿಕೆಗೆ ಪಕ್ಷಕ್ಕೆ ತುಂಬಲಾರದ ನಷ್ಟವನ್ನು ಉಂಟುಮಾಡಿದೆ. ಅವರ ಸಮಾಜಮುಖಿ ಕಾರ್ಯ ಮುಂದಿಗೂ ಅವರನ್ನು ಜನಮಾನಸದಲ್ಲಿ ಉಳಿಸಲಿದೆ ಎಂದು ರವಿಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.