Daily story: ಸುಮಾ ಶಾಲೆಗೆ ಹೋಗಬೇಕಾದರೆ ಕಾಡಿನ ಹಾದಿಯ ಮೂಲಕ ಹೋಗಬೇಕಾಗಿತ್ತು. ಒಂದು ದಿನ ಸುಮಾ ಶಾಲೆಗೆ ಕಾಡಿನ ಮಾರ್ಗದಿಂದ ಹೋಗುತ್ತಿದ್ದಾಗ ಆಕೆಗೆ ಆನೆಯೊಂದು ನೋವಿನಿಂದ ಅರಚುವ ಶಬ್ದ ಕೇಳಿ ಅತ್ತ ಹೋಗಿ ನೋಡಿದಳು.
ಪಾಪ! ಗಜರಾಜನ ಕಾಲಿಗೆ ಮುಂದು ಚುಚ್ಚಿ ರಕ್ತ ಹರಿಯುತ್ತಿತ್ತು. ಅದು ನೋವಿನಿಂದ ನಡೆಯಲಾಗದೆ. ಕಣ್ಣೀರು ಸುರಿಸುತ್ತ ಘೀಳಿಡುತ್ತಿತ್ತು. ಸುಮಾ ಧೈರ್ಯ ಮಾಡಿ ಆನೆಯ ಹತ್ತಿರ ಹೋಗಿ ಅದರ ಕಾಲಿಗೆ ಚುಚ್ಚಿದ ಮುಳ್ಳನ್ನು ತೆಗೆದು ಅಲ್ಲೇ ಇದ್ದ ನೋವು ನಿವಾರಕ ಮರದ ಸೊಪ್ಪನ್ನು ಅರೆದು ಅದರ ರಸವನ್ನು ಗಾಯಕ್ಕೆ ಹಚ್ಚಿದಳು.
ಆಗ ಆನೆಗೆ ನೋವಿನಿಂದ ಮುಕ್ತಿ ಸಿಕ್ತು. ಅದು ತನಗೆ ಚಿಕಿತ್ಸೆ ನೀಡಿದ ಸುಮಾಳನ್ನು ಸೊಂಡಿಲಿನಿಂದ ಸವರಿ ಕೃತಜ್ಞತೆ ಸೂಸಿ ಅರಣ್ಯದಲ್ಲಿ ಮರೆಯಾಯಿತು.
ಕೆಲವು ದಿನಗಳು ಕಳೆದವು. ಸುಮಾ ಶಾಲೆಯಿಂದ ಮನೆಗೆ ಮರಳುವ ಸಮಯ. ಕಾಡಿನಲ್ಲಿ ಬರುತ್ತಿರುವಾಗ ಅವಳಿಗೆದುರಾಗಿ ಹುಲಿಯೊಂದು ಬಂತು. ಅದು ಸುಮಾಳನ್ನು ಬೇಟೆಯಾಡುವ ಹೊಂಚಿನಿಂದ ಭಯಂಕರವಾಗಿ ಅರ್ಭಟಿಸುತ್ತಾ ಸುಮಾಳ ಹತ್ತಿರ ಬಂದಾಗ ಸುಮಾ ಭಯದಿಂದ ಜೋರಾಗಿ ಅರಚಿದಳು.
ಈ ಧ್ವನಿ ಅಲ್ಲೇ ಸಮೀಪದಲ್ಲೇ ಇದ್ದ ಸುಮಾಳಿಂದ ಚಿಕಿತ್ಸೆ ಪಡೆದ ಗಜರಾಜನ ಕಿವಿಗೆ ಬಿತ್ತು. ಅದು ಕೋಪದಿಂದ ಘೀಳಿಡುತ್ತಾ ಬಂತು. ತನಗೆ ಸಹಾಯ ಮಾಡಿದವರನ್ನು ಹುಲಿ ಬೇಟೆಯಾಡುವ ತವಕದಲ್ಲಿರುವುದನ್ನು ಕಂಡು ಕೋಪದಿಂದ ತನ್ನ ಸೊಂಡಿಲಿನಿಂದ ಹುಲಿಯನ್ನು ಗಟ್ಟಿಯಾಗಿ ಹಿಡಿದು ದೂರ ಬಿಸಾಡಿತು.
ಹುಲಿ ತನ್ನ ಪ್ರಾಣ ಉಳಿದರೆ ಸಾಕೆಂದು ಅರಣ್ಯದಲ್ಲಿ ಕಣ್ಮರೆಯಾಯಿತು. ತನ್ನ ಜೀವ ರಕ್ಷಿಸಿದ ಗಜರಾಜನಿಗೆ ಸುಮಾ ತಿನ್ನಲು ಬಾಳೆಹಣ್ಣು ಕೊಟ್ಟಳು.
ಕೃಪೆ: ಅಮರಯ್ಯಾ ಪತ್ರಿಮಠ, ಯಾದಗಿರಿ, ವಿಜಯೇಂದ್ರ ಡಿಜೆ (ಸಾಮಾಜಿಕ ಜಾಲತಾಣ)