ಹಾಸನ: ನಾನು ಸೋತು ಒಂದು ವಾರ ಆಗಿದೆ. ನನಗಿನ್ನು ವಯಸ್ಸು 36 ವರ್ಷ. ನನ್ನ ಮುಂದೆ ಇರುವುದು ಒಂದೇ ಸವಾಲು. ಜನತಾದಳ ಪಕ್ಷವನ್ನು ದಡ ಮುಟ್ಟಿಸಬೇಕು ಎಂದು ನಿಖಿಲ್ ಕುಮಾರಸ್ವಾಮಿ (Nikhil kumaraswamy) ಅವರು ತಿಳಿಸಿದರು.
ಹಾಸನ ಜಿಲ್ಲೆಯ ಅರಕಲಗೂಡಿನಲ್ಲಿ ಶನಿವಾರ ರಾತ್ರಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ನಾನು ಶಾಸಕನಾಗಬೇಕು ಎನ್ನುವುದು ನನ್ನ ಮುಂದೆ ಇರುವ ಪ್ರಶ್ನೆ ಅಲ್ಲ, ಪ್ರಾದೇಶಿಕ ಪಕ್ಷ ಉಳಿಯಬೇಕಿದೆ, ಕನ್ನಡಿಗರ ಅಸ್ಮಿತೆಗಾಗಿ ಈ ಪಕ್ಷ ಉಳಿಯಬೇಕಿದೆ. ಆ ಹಿನ್ನೆಲೆಯಲ್ಲಿ ಹೋರಾಟ ಮಾಡುತ್ತೇನೆ. ಕೊನೆ ಉಸಿರು ಇರುವವರೆಗೂ ಹೋರಾಡುತ್ತೇನೆ. ಮಾತನಾಡಲು ವೇದಿಕೆಗಳು ಮುಂದಿನ ದಿನಗಳಲ್ಲಿ ಸಜ್ಜಾಗುತ್ತೆ. ಹೋರಾಟ ಎನ್ನುವುದನ್ನು ರಕ್ತಗತವಾಗಿ ಮೈಗೂಡಿಸಿಕೊಂಡಿದ್ದೇನೆ. ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಒಬ್ಬ ಯುವಕನಾಗಿ ನಿಖಿಲ್ ಕುಮಾರಸ್ವಾಮಿ ನಿಮ್ಮ ಜೊತೆಯಲ್ಲಿ ಪ್ರಾಮಾಣಿಕವಾಗಿ ಇರುತ್ತೇನೆ ಎಂದರು.
ನಾನು ಸಂಸದನಾಗಲು, ಶಾಸಕ ನಾಗಬೇಕು ಎಂದು ಕೂಡ ಹಪಹಪಿಸಿಲ್ಲ. ಹಾಗಿದ್ದರೆ ನಾನು ಚಿತ್ರಂಗಕ್ಕೆ ಹೋಗ ರಾಜಕಾರಣಕ್ಕೆ ಬರತ್ತಿದ್ದೆ ಎಂದರು ಹಾಸನ ಜಿಲ್ಲೆಯ ಜನತೆ ಒಬ್ಬ ಸಾಧಾರಣ ರೈತ ಕುಟುಂಬದ ಮಗನಾಗಿ ಜನಿಸಿರುವ ದೇವೇಗೌಡರನ್ನ ಕೆಂಪುಕೋಟೆ ಮೇಲೆ ಬಾವುಟ ಹಾರಿಸುವ ಶಕ್ತಿಯನ್ನು ತುಂಬಿ ಇತಿಹಾಸ ಸೃಷ್ಟಿ ಮಾಡಿದ್ದಾರೆ.
ನಿಮ್ಮ ಹೃದಯದಲ್ಲಿ ನಮ್ಮ ಕುಟುಂಬದ ಮೇಲೆ ಇಟ್ಟಿರುವ ಪ್ರೀತಿ, ಗೌರವ ಎಷ್ಟು ಜನ್ಮ ಎತ್ತಿ ಬಂದರು ತೀರಿಸಲು ಸಾಧ್ಯವಿಲ್ಲ. ನಿಮ್ಮ ಋಣಕ್ಕಾಗಿ ಪ್ರಾಮಾಣಿಕವಾಗಿ ನಮ್ಮಇಡೀ ಪಕ್ಷ, ನಮ್ಮ ಕುಟುಂಬ ನಿಮ್ಮ ಜೊತೆಯಲ್ಲಿ ಸದಾಕಾಲ ಇರುತ್ತೇವೆ ಎಂದರು.
ರಾಮನಗರ ಜಿಲ್ಲೆಯು ಕೂಡ ನಮ್ಮ ಕುಟುಂಬಕ್ಕೆ ಎಂಟು ಬಾರಿ ಶಾಸಕ ಸ್ಥಾನ, ಮೂರು ಬಾರಿ ಕುಮಾರಣ್ಣ ಅವರನ್ನು ಸಂಸದರನ್ನಾಗಿ ಆಯ್ಕೆ ಮಾಡಿದ್ದಾರೆ ಎಂದರು. ಚುನಾವಣೆಯಲ್ಲಿ ಏಳು ಬೀಳು ಸರ್ವೆ ಸಾಮಾನ್ಯ. ನಾನು ರಾಜಕಾರಣದ ಹಿನ್ನೆಲೆಯಲ್ಲಿ ಬಂದಿರುವ ವ್ಯಕ್ತಿಯಾಗಿದ್ದರು ಚಿತ್ರರಂಗದಲ್ಲಿ ನನ್ನದೇ ಸವಾಲುಗಳನ್ನು ಸ್ವೀಕಾರ ಮಾಡಿದ್ದೇನೆ ಎಂದು ತಿಳಿಸಿದರು.
ಜಾಗ್ವಾರ್ ಮೂಲಕ ನಮ್ಮ ತಂದೆ ನನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದು ಅನೇಕ ಚಿತ್ರಗಳನ್ನು ಮಾಡಿದೆ. ತದನಂತರ ಸಾರ್ವಜನಿಕ ಬದುಕಿನಲ್ಲಿ ಜವಾಬ್ದಾರಿಗಳನ್ನು ಅರಿತಿದ್ದೇನೆ. ಆ ಒಂದು ಕಾರಣದಿಂದ ಸಂಪೂರ್ಣವಾಗಿ ಸಾರ್ವಜನಿಕ ಬದುಕಿಗೆ ಧುಮುಕಿದ್ದೇನೆ ಎಂದು ಹೇಳಿದರು.
ನಮ್ಮ ನಾಡಿನ ನೆಲ, ಜಲ, ಭಾಷೆಯ ವಿಚಾರವಾಗಿ ದೇವೇಗೌಡರು 92 ವಯಸ್ಸಾದರೂ ರಾಜ್ಯಸಭೆಯಲ್ಲಿ ಏಕಾಂಗಿಯಾಗಿ ನೆಲ, ಜಲ, ಭಾಷೆ ಉಳಿಸುವ ಕೆಲಸ ಮಾಡುತ್ತಿದ್ದಾರೆ. ನನ್ನ ಜೀವನದ ಸ್ಪೂರ್ತಿ ದೇವೇಗೌಡರು. ನನ್ನ ಜವಾಬ್ದಾರಿಯನ್ನ ಅರಿತಿದ್ದೇನೆ.
ಅನಿರೀಕ್ಷಿತವಾದ ಬೆಳವಣಿಗೆಯಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸಬೇಕಾಗಿ ಬಂತು. ಈ ಚುನಾವಣೆಯ ಸೋಲಿನ ಬಗ್ಗೆ ಹೆಚ್ಚಾಗಿ ಪರಾಮರ್ಶೆ ಮಾಡಲ್ಲ. ಕರ್ನಾಟಕ ರಾಜ್ಯದಲ್ಲಿ ಕಟ್ಟಿರುವ ರೈತ ಪರವಾದ ಪಕ್ಷ, ಪ್ರಾದೇಶಿಕ ಪಕ್ಷ ಜೆಡಿಎಸ್. ಲಕ್ಷಾಂತರ ಕಾರ್ಯಕರ್ತರ ದುಡಿಮೆ, ಎಲ್ಲಾ ತಂದೆ, ತಾಯಿಯರ ಆಶೀರ್ವಾದ, ರೈತರ ಆಶೀರ್ವಾದ ಮಾಡಿ ಇಲ್ಲಿಯವರೆಗೆ ಬೆಳೆಸಿ, ಉಳಿಸಿದ್ದೀರಿ ಎಂದರು.
ಹಲವಾರು ಸಂದರ್ಭದಲ್ಲಿ ಅಖಾಡ ಸಿದ್ದವಾಗಿತ್ತು, ಬಹಳ ಸುಲಭವಾಗಿ ಶಾಸಕನಾಗಬಹುದಿತ್ತು. ಆದರೆ ಇಲ್ಲಿಯವರೆಗೂ ನಾನು, ಪಕ್ಷ ಸಂಕಷ್ಟದಲ್ಲಿತ್ತು, ಆ ಸಂದರ್ಭದಲ್ಲಿ ಒಬ್ಬ ಪಕ್ಷದ ಶಿಸ್ತಿನ ಸಿಪಾಯಿಯಾಗಿ, ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷದ ಕಾರ್ಯಕರ್ತರ ಭಾವನೆಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದೇನೆ ಎಂದರು.
ನಿಮ್ಮಲ್ಲೆರ ಆಶೀರ್ವಾದಿಂದ ಇಡೀ ರಾಜ್ಯ ಪ್ರವಾಸ ಮಾಡುತ್ತೇನೆ. ಮೂಲೇಲಿ ಕೂರುವ ಜಾಯಮಾನ ನನ್ನದಲ್ಲ ಎಂದು ಹೇಳಿದರು.