ದೊಡ್ಡಬಳ್ಳಾಪುರ: ಮನೆಯಲ್ಲಿ ಟಿವಿ ನೋಡುವ ವಿಚಾರದಲ್ಲಿ ಉಂಟಾದ ಕಿರಿಕ್ 5 ತಿಂಗಳ ಗರ್ಭಿಣಿ ಆತ್ಮಹತ್ಯೆಗೆ ಕಾರಣವಾಗಿರುವ ಘಟನೆ Doddaballapura ತಾಲೂಕಿನ ಸಾಸಲು ಹೋಬಳಿಯ ಗುಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತ ದುರ್ದೈವಿಯನ್ನು 25 ವರ್ಷದ ರೂಪ (ನಾಗರತ್ನಮ್ಮ) ಎಂದು ಗುರುತಿಸಲಾಗಿದೆ.
ಗುಮ್ಮನಹಳ್ಳಿ ಗ್ರಾಮದ ಸುರೇಶ್ ಎನ್ನುವವರು ಮೂರು ವರ್ಷಗಳ ಹಿಂದೆ ದಾಬಸ್ಪೇಟೆ ತಾಲೂಕಿನ ಗೋವಿಂದಪುರ ಗ್ರಾಮದ ರೂಪ (ನಾಗರತ್ನಮ್ಮ) ಅವರನ್ನು ಪ್ರೀತಿಸಿ ಮದುವೆಯಾಗಿದ್ದರಂತೆ. ರೂಪ ಕಡೆಯವರ ಆಕ್ಷೇಪದ ನಡುವೆಯೂ ಸ್ವಂತ ಖರ್ಚಿನಲ್ಲಿ ಸುರೇಶ್ ಅವರು ರತ್ನಮ್ಮ ಅವರನ್ನು ಮದುವೆಯಾಗಿದ್ದರು ಎನ್ನಲಾಗಿದೆ.
ಬುಧವಾರ ಟಿವಿ ನೋಡುವ ವಿಚಾರದಲ್ಲಿ ಕಿರಿಕ್ ಉಂಟಾಗಿದ್ದು, ಎಲ್ಲರೂ ಮನೆಯಲ್ಲಿ ಇರುವಾಗಲೇ ರೂಮಿಗೆ ತೆರಳಿರುವ ರೂಪ ಅವರು ಗಂಡ ಸುರೇಶ, ಅತ್ತೆ ಮಾವ ಕಿರುಕುಳ ನೀಡುತ್ತಿದ್ದಾರೆಂದು ಡೆತ್ ನೋಟ್ ಬರೆದಿಟ್ಟಿದ್ದಲ್ಲದೆ, ಪೋಷಕರಿಗೆ ವಾಟ್ಸಪ್ ಮಾಡಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಈ ವೇಳೆ ಸುರೇಶ್ ಹಾಗೂ ಪೋಷಕರು ಬಾಗಿಲು ಹೊಡೆಯಲು ತೀವ್ರವಾಗಿ ಪ್ರಯತ್ನಿಸಿದ್ದಾರಾದರೂ ನೂತನವಾಗಿ ನಿರ್ಮಿಸಿದ ಮನೆಯಾದ ಕಾರಣ ಬಾಗಿಲು ಒಡೆಯಲು ವಿಳಂಭವಾಗಿದೆ. ಅಂತಿಮವಾಗಿ ಬಾಗಿಲು ಹೊಡೆದು ನಂತರ ರೂಪರನ್ನು ಕೆಳಗಿಳಿಸಿ, ತಕ್ಷಣ ಆಸ್ಪತ್ರೆಗೆ ಕರೆದೊಯ್ಯುಲಾಗಿತ್ತಾದರು ಸಾವನಪ್ಪಿದ್ದಾರೆಂದು ವೈದ್ಯರು ತಿಳಿಸಿದ್ದಾರೆ.
ಘಟನೆ ಕುರಿತು ದೊಡ್ಡಬೆಳವಂಗಲ ಪೊಲೀಸ್ ಠಾಣೆಗೆ ಮೃತ ರೂಪ (ನಾಗರತ್ನಮ್ಮ) ಕುಟುಂಬಸ್ಥರು ವರದಕ್ಷಿಣೆ ಕಿರುಕುಳದ ದೂರು ನೀಡಿದ್ದು, ಪತಿ ಸುರೇಶನನ್ನು ಬಂಧಿಸಲಾಗಿದೆ.
ಈ ಕುರಿತು ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಡಿವೈಎಸ್ಪಿ ರವಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.