ಹೊಸಕೋಟೆ: ದೇಶದ ಪ್ರಥಮ ಪ್ರಧಾನಮಂತ್ರಿ ಜವಾಹರ್ ಲಾಲ್ ನೆಹರು ತಮ್ಮ ಹುಟ್ಟುಹಬ್ಬವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಣೆ ಮಾಡಿಕೊಂಡಿದ್ದು ಮಕ್ಕಳ ಮೇಲಿನ ಅವರ ಪ್ರೀತಿ ಹಾಗೂ ದೇಶದ ಮುಂದಿನ ಸಾಕ್ಷರತೆ ಬಗ್ಗೆ ಇದ್ದ ಕಾಳಜಿ ತೋರುತ್ತದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ನಗರದ ಜಿಕೆಬಿಎಂಎಸ್ ಶಾಲೆಯಲ್ಲಿ ಮಕ್ಕಳ ದಿನಾಚರಣೆ, ದಾನಿಗಳಿಂದ ಡೆಸ್ಕ್, ಬೋರ್ಡ್ ಹಾಗೂ 1000 ನೋಟ್ ಪುಸ್ತಕ ವಿತರಿಸಿ ಮಾತನಾಡಿದರು.
ಸ್ವಾತಂತ್ರ ಸಂದರ್ಭದಲ್ಲಿ ದೇಶದ ಸಾಕ್ಷರತೆ ಕೇವಲ 20 ರಷ್ಟಿತ್ತು. ಆದರೆ ಇಂದು ಶೇಕಡ 80ಕ್ಕೂ ಹೆಚ್ಚು ಸಾಕ್ಷರತಾ ರಾಷ್ಟ್ರವಾಗಿ ಮುನ್ನುಗುತಿದ್ದು ಇದಕ್ಕೆ ಕಾರಣ ನೆಹರು ಎಂದ ಅವರು, ದೇಶದಲ್ಲಿ ಐಐಟಿ, ಐಐಎಂ ಹಾಗೂ ಅನೇಕ ವಿಶ್ವವಿದ್ಯಾನಿಲಯಗಳ ಸ್ಥಾಪನೆಗೆ ನೆಹರುರವರೇ ಕಾರಣ ಎಂದ ಅವರು, ದೇಶ ಮುಂದುವರೆಯಬೇಕಾದರೆ ಶಿಕ್ಷಣ ನಿದ ಅತಿ ಮುಖ್ಯವಾಗಿದೆ. ಇದರ ಜೊತೆ ತಂತ್ರಜ್ಞಾನದಲ್ಲೂ ದೇಶ ಮುಂದುವರೆಯುತ್ತಿದ್ದು, ಇಂದಿನ ಮಕ್ಕಳು ಸಹ ಉತ್ತಮ ವಿದ್ಯಾಭ್ಯಾಸ ಹೊಂದಿ ದೇಶದ ಅಭಿವೃದ್ಧಿಯ ಭಾಗವಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಶಾಲಾ ಅಭಿವೃದ್ಧಿ ಮಂಡಳಿಯ ಗೌರವಾಧ್ಯಕ್ಷ ಡಿ.ಎಸ್.ರಾಜ್ ಕುಮಾರ್, ನಗರಸಭೆ ಸದಸ್ಯ ಗೌತಮ್, ರೋಟರಿ ಅಧ್ಯಕ್ಷ ಮುನಿರಾಜ್, ಉದ್ಯಮಿ ಬಿ.ವಿ ಬೈರೇಗೌಡ, ಯೋಜನಾ ಪ್ರಾಧಿಕಾರದ ನಿರ್ದೇಶಕ ಡಾ.ಎಚ್.ಎಂಸುಬ್ಬರಾಜ್, ಮುಖಂಡರಾದ ಬಚ್ಚಣ್ಣ, ಆರ್ಟಿಸಿ ಗೋವಿಂದರಾಜ್, ವಿಜಯ್ ಕುಮಾರ್, ಶಾಂತಮ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ್, ಮುಖ್ಯ ಶಿಕ್ಷಕಿ ರಾಜೇಶ್ವರಿ, ಹಾಗೂ ಶಾಲಾ ಸಿಬ್ಬಂದಿ ಹಾಜರಿದ್ದರು.