ನೆಲಮಂಗಲ: ತಾಯಿಯ ಮಾತಿನಿಂದ ಕೆರಳಿದ ಮಗ ಮಹಿಳಾ ಪಿಎಸ್ಐ ಮೇಲೆ ಹಲ್ಲೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ನಗರ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಸೋಮಾರಿಯಾಗಿದ್ದ ಮಧುಸೂದನ್ ಕೆಲಸಕ್ಕೆ ಹೋಗದೆ ಮನೆಯಲ್ಲೇ ಕಾಲ ಕಳೆಯುತ್ತಿದ್ದನಂತೆ. ಈ ವಿಚಾರವಾಗಿ ತಾಯಿ ಸುಶೀಲಮ್ಮ ಮತ್ತು ಮಧುಸೂದನ್ ನಡುವೆ ಗಲಾಟೆ ನಡೆದಿದೆ. ಬಳಿಕ, ತಾಯಿ ಸುಶೀಲಮ್ಮ ಮಗನ ವಿರುದ್ಧ ನೆಲಮಂಗಲ ನಗರ ಠಾಣೆಗೆ ದೂರು ನೀಡಿದ್ದಾರೆ.
ಈ ಕುರಿತು, ಪೊಲೀಸರು ವಿಚಾರಣೆಗೆಂದು ಇಬ್ಬರನ್ನೂ ಕರೆಸಿದ್ದಾರೆ. ಈ ವೇಳೆ ಪೊಲೀಸ್ ಠಾಣೆಯಲ್ಲೇ ತಾಯಿ ಮತ್ತು ಮಗ ಜಗಳವಾಡಲು ಆರಂಭಿಸಿದ್ದಾರೆ. ಇದರಿಂದ ಕೆರಳಿದ ಮಹಿಳಾ ಪಿಎಸ್ಐ ಜಯಂತಿ, ಮಧುಸೂದನ್ಗೆ ಗದರಿಸಿ ಒಂದೇಟು ಹೊಡೆದಿದ್ದಾರೆ.
ಈ ಸಂದರ್ಭದಲ್ಲಿ ಸುಶೀಲಮ್ಮ, ಕಂಪ್ಲೆಂಟ್ ಕೊಟ್ಟು ಪೊಲೀಸರಿಂದ ಹೊಡೆಸಿದರೇ, ಪೊಲೀಸರಿಗೆ ತಿರುಗಿ ಹೊಡೆಯುವೆ ಅಂತ ಹೇಳುತ್ತಿದ್ದಿಯಲ್ಲ. ಈಗ ಹೊಡಿ ನೋಡೋಣ. ನೀನು ಗಂಡಸಾಗಿದ್ದರೆ ಪೊಲೀಸರಿಗೆ ಹೊಡೆದು ತೋರಿಸು. ಹೊಡಿ ಈಗ ಪೊಲೀಸರಿಗೆ ನೋಡೋಣ ಎಂದು ಮಗ ಮಧುಸೂದನ್ನ ಲೇವಡಿ ಮಾಡಿದ್ದಾರೆ. ಇದರಿಂದ ಕೆರಳಿದ ಮಧುಸೂದನ್ ಮಹಿಳಾ ಪಿಎಸ್ಐ ಜಯಂತಿ ಮೇಲೆ ಹಲ್ಲೆ ಮಾಡಿದ್ದಾನೆ.
ಕ್ಷಣಾರ್ಧದಲ್ಲಿ ನಡೆದ ಘಟನೆಯಿಂದ ಗಾಯಗೊಂಡ ಮಹಿಳಾ ಪಿಎಸ್ಐ ಜಯಂತಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.