ದೊಡ್ಡಬಳ್ಳಾಪುರ: ಮಿತಿಮೀರಿದ ಮದ್ಯ ಅಕ್ರಮ ಮಾರಾಟದಿಂದ ಬೇಸತ್ತಿರುವ ಗ್ರಾಮಸ್ಥರು ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿರುವ ಘಟನೆ ಸುತ್ತಹಳ್ಳಿ ತಾಂಡದಲ್ಲಿ ನಡೆದಿದೆ. (villagers protest against illegal liquor sales)
ದೊಡ್ಡಬೆಳವಂಗಲ ಹೊಬಳಿ, ತಿಪ್ಪೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ಸುತ್ತಹಳ್ಳಿ ತಾಂಡ ಗ್ರಾಮದಲ್ಲಿನ ಚಿಲ್ಲರೆ ಅಂಗಡಿಗಳಲ್ಲಿ ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದ್ದು, ಪುರುಷರಾಧಿಯಾಗಿ ಯುವಕರು, ಮಹಿಳೆಯರು ಮದ್ಯದ ದಾಸರಾಗಿದ್ದಾರೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ.
ಈ ಕುರಿತು ಮಾತನಾಡಿರುವ ಗ್ರಾಮಪಂಚಾಯಿತಿ ಸದಸ್ಯ ಸಿದ್ದೆನಾಯಕ, ಯುವ ಮುಖಂಡ ಶಾಂತಕುಮಾರ್, ಸೇರಿದಂತೆ ಊರಿನ ಮಹಿಳೆಯರು ಗ್ರಾಮದಲ್ಲಿ ಮದ್ಯ ಅಕ್ರಮ ಮಾರಾಟ ತೀವ್ರವಾಗಿದ್ದು, ಯಾರಿಗೆ ದೂರು ನೀಡಿದರು ಕ್ರಮಕೈಗೊಳ್ಳುತ್ತಿಲ್ಲ.
ಗ್ರಾಮದಲ್ಲಿನ ಚಿಲ್ಲರೆ ಅಂಗಡಿಗಳಲ್ಲಿ ಬೇಕಾಬಿಟ್ಟಿಯಾಗಿ ಮದ್ಯ ಅಕ್ರಮ ಮಾರಾಟ ನಡೆಯುತ್ತಿದ್ದು, ರಾತ್ರಿ ವೇಳೆ ಯಾವ ಸಮಯದಲ್ಲಿಯಾದರೂ ಮದ್ಯ ದೊರೆಯುತ್ತದೆ.
ಇದರಿಂದಾಗಿ ಗ್ರಾಮದಲ್ಲಿ ಗಲಾಟೆ, ಮದ್ಯ ಖರೀದಿಸಲು ಹಣ ಸಿಗದೆ ಆತ್ಮಹತ್ಯೆ ಪ್ರಕರಣಗಳು ಮಿತಿಮೀರಿದೆ. ಈ ಕುರಿತು ಕ್ರಮಕೈಗೊಳ್ಳುವಂತೆ ಅಬಕಾರಿ ಇಲಾಖೆಗೆ ದೂರು ನೀಡಿದರೆ, ದಾಳಿ ನಡೆಸುವ ಮುನ್ನವೇ ಮಾಹಿತಿ ನೀಡಿ, ಮದ್ಯವನ್ನು ಸ್ಥಳಾಂತರ ಮಾಡಲು ಅವಕಾಶ ನೀಡಿ ನಂತರ ದಾಳಿ ನಡೆಸುತ್ತಾರೆ ಎಂದು ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದು, ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದ ಹೊರತು ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ತಿಳಿಸಿದರು.
ಮದ್ಯ ಅಕ್ರಮ ಮಾರಾಟದ ಕುರಿತು ಕೆರಳಿರುವ ಗ್ರಾಮಸ್ಥರು, ಚುನಾಯಿತ ಜನಪ್ರತಿನಿದಿಗಳು, ಅಬಕಾರಿ ಇಲಾಖೆ ಅಧಿಕಾರಿಗಳ ವಿರುದ್ಧ ದಿಕ್ಕಾರ ಕೂಗುತ್ತಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಮದ್ಯ ಅಕ್ರಮ ಮಾರಾಟ ತೀವ್ರಗತಿಯಲ್ಲಿ ನಡೆಯುತ್ತಿದ್ದು, ಚಿಲ್ಲರೆ ಅಂಗಡಿಗಳು, ಗೂಡಗಂಡಿಗಳಲ್ಲಿ ಅಕ್ರಮ ಮಾರಾಟ ವ್ಯಾಪಕವಾಗಿದೆ.
ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ವ್ಯಾಪಕ ಪ್ರಚಾರಕ್ಕೆ ಬಳಕೆಯಾದ ಮದ್ಯ ಅಕ್ರಮ ಮಾರಾಟ ವಿಷಯ, ಚುನಾವಣೆ ಫಲಿತಾಂಶದ ನಂತರ ಈ ಕುರಿತು ಮಾತಾಡುವವರೆ ಇಲ್ಲವಾಗಿದೆ.