ದೊಡ್ಡಬಳ್ಳಾಪುರ: ನಮ್ಮ ಧರ್ಮ, ಸಂಸ್ಕೃತಿ, ಪರಂಪರೆಗಳ ಬಗ್ಗೆ ದೃಢವಾದ ತಿಳುವಳಿಕೆ ಇದ್ದಾಗ ಮಾತ್ರ ನಮ್ಮನ್ನು ಯಾರೂ ದಾರಿ ತಪ್ಪಿಸಲು ಸಾಧ್ಯವಿಲ್ಲ. ಧರ್ಮವೇ ಸತ್ಯವಾಗಿದ್ದೆಂಬ ಸತ್ಯಾಂಶ ಒಂದಲ್ಲ ಒಂದು ದಿನ ಹೊರ ಬರಲೇಬೇಕು ಎಂದು ಶೃಂಗೇರಿ ಶಾರದಾ ಪೀಠದ ಜಗದ್ಗುರು ವಿಧುಶೇಖರ ಭಾರತೀ ಸ್ವಾಮೀಜಿ ಪ್ರತಿಪಾದಿಸಿದರು.
ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಹಿಸಿ ಅವರು ಆಶೀರ್ವಚನ ನೀಡಿದರು.
ಇಂದು ಸಮಾಜದಲ್ಲಿ ನಡೆಯುತ್ತಿರುವ ಹಲವು ಅಕ್ರಮಗಳು,ವೈರುಧ್ಯಗಳ ನಡುವೆಯೂ ಧರ್ಮ ತನ್ನದೇ ಆದ ಅಸ್ತಿತ್ವ ಹೊಂದಿದೆ ಎನ್ನುವುದಕ್ಕೆ ಆಸ್ತಿಕ ಸಮಾಜದ ಈ ಸಮಾಗಮ ನಿದರ್ಶನವಾಗಿದೆ. ಆದಿಗುರು ಶಂಕರಾಚಾರ್ಯರು ಪ್ರತಿಪಾದಿಸಿದ ಧರ್ಮ ಸಿದ್ದಾಂತಗಳು ಆಳವಾಗಿ ಬೇರೂರಿವೆ. ಭಗವಂತ ಒಬ್ಬನೇ ಆಗಿದ್ದು, ಆತ ಬೇರೆ ಬೇರೆ ರೂಪಗಳನ್ನು ಅವತರಿಸಿ, ಭಕ್ತನನ್ನು ಕಾಪಾಡುತ್ತಿದ್ದಾನೆ ಎನ್ನುವುದನ್ನು ಶಂಕರಾಚಾರ್ಯರು ನಿರೂಪಿಸಿದ್ದಾರೆ.
ಪ್ರಾಣಿಗಳಿಗಿಂತ ಭಿನ್ನವಾಗಿ ಬದುಕುವ ಮನುಷ್ಯ ಅವುಗಳಿಂದ ಹೊರತಾಗಿ ಬದುಕದಿದ್ದರೆ, ನಮಗೂ ಪ್ರಾಣಿಗಳಿಗೂ ವ್ಯತ್ಯಾಸ ಇರುವುದಿಲ್ಲ. ಈ ದಿಸೆಯಲ್ಲಿ ಧರ್ಮಾಚರಣೆ ಪ್ರಮುಖ ಪಾತ್ರ ವಹಿಸುತ್ತದೆ.
ಮಾನವನ ಆಯುಷ್ಯ 100 ವರ್ಷಗಳು ಎಂದಿಟ್ಟುಕೊಂಡರೆ ಆತ ಮೋಕ್ಷ ಪಡೆಯಲು ಹಲವಾರು ಜನ್ಮಗಳನ್ನು ತಾಳಿ ಬರಬೇಕಿದೆ. ಪ್ರತಿ ಜನ್ಮದಲ್ಲಿಯೂ ಧರ್ಮಾಚರಣೆ ಹಾಗೂ ಪರೋಪಕಾರಗಳನ್ನು ಮಾಡಿದಾಗ ಮಾತ್ರ, ಜನ್ಮ ಸಾರ್ಥಕತೆ ಪಡೆಯುತ್ತದೆ. ಇಲ್ಲವಾದಲ್ಲಿ ಮಾನವ ಜನ್ಮಕ್ಕೆ ಯಾವುದೇ ಅರ್ಥವಿರುವುದಿಲ್ಲ.
ಬದುಕಿನಲ್ಲಿ ಸಂಪಾದನೆಯೊಂದೇ ಮುಖ್ಯವಲ್ಲ. ಅದರೊಂದಿಗೆ ನಮ್ಮ ಬದುಕಿನ ಸ್ವರೂಪ ಮುಖ್ಯವಾಗುತ್ತದೆ. ದುಃಖ, ಕಷ್ಟಗಳು ಬರಬಾರದು ಎಂದರೆ ನಾವು ಕಷ್ಟಪಡಬೇಕು. ಅದಕ್ಕಾಗಿ ಪ್ರಯತ್ನ ಪಡಬೇಕು. ಸಾಧನೆ ಮಾಡಬೇಕು. ಹಲವು ಜನ್ಮಗಳ ಆಚರಣೆಯೇ ಕೊನೆಗೆ ಮೋಕ್ಷ ರೂಪ ಪಡೆಯುತ್ತದೆ.
ಭಗವಂತ ನಾನಾ ಅವತಾರಗಳನ್ನು ಎತ್ತಿರುವುದು ಸಹ ಅಧರ್ಮವನ್ನು ಅಳಿಸಿ, ಧರ್ಮವನ್ನು ಉಳಿಸಬೇಕು ಎನ್ನುವ ಉದ್ದೇಶಕ್ಕಾಗಿಯೇ. ಶಂಕರಾಚಾರ್ಯರು ಆತ್ಮ ಮತ್ತು ಪರಮಾತ್ಮ ಎಂಬುದು ಎರಡು ಬೇರೆ ಬೇರೆ ಅಂಶಗಳಲ್ಲ. ಇರುವುದು ಒಂದೇ. ಆತ್ಮನೇ ಪರಮಾತ್ಮನು. ಪರಮಾತ್ಮನೇ ಆತ್ಮನು ಎಂದು ಅದ್ವೈತ ಸಿಧ್ಧಾಂತದ ಮೂಲ ಸಾರವನ್ನು ಸಾರಿದರು. ನಮ್ಮ ಗುರು ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದು ಧರ್ಮಾಚರಣೆ ಮಾಡುವ ಮೂಲಕ ನಮ್ಮ ಜನ್ಮವನ್ನು ಸಾರ್ಥಕ ಪಡಿಸಿಕೊಳ್ಳಬೇಕು. ನಮ್ಮ ಧರ್ಮ ಪರಂಪರೆಗಳ ಬಗ್ಗೆ ಇಂದಿನ ಮಕ್ಕಳಿಗೆ ತಿಳಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದ ದರ್ಮದರ್ಶಿ ಹೆಚ್.ಎಸ್.ಅಶ್ವಥ್ ನಾರಾಯಣ ಕುಮಾರ್ ಮತ್ತಿತರರಿದ್ದರು.