ಚಿಕ್ಕಬಳ್ಳಾಪುರ: ದೊಡ್ಡಬಳ್ಳಾಪುರ ಮತ್ತು ಚಿಕ್ಕಬಳ್ಳಾಪುರ ನಗರಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಏಕೈಕ ಜಲಮೂಲವಾದ ಜಕ್ಕಲಮಡಗು ಜಲಾಶಯ 4 ವರ್ಷಗಳ ಬಳಿಕ ಭರ್ತಿಯಾಗಿದ್ದು ಜನ, ಜಾನುವಾರುಗಳಿಗೆ ಒಳಿತಾಗಲಿ ಎಂದು ಶಾಸಕ ಪ್ರದೀಪ್ ಈಶ್ವರ್ ಬುಧವಾರ ಬಾಗಿನ ಅರ್ಪಿಸಿದರು.
ಈ ವೇಳೆ ಮಾತನಾಡಿದ ಅವರು, 1955ರಲ್ಲಿ ಸರ್ ಎಂ ವಿಶ್ವೇಶ್ವರಯ್ಯ ಇಲ್ಲಿ ಈ ಜಲಾಶಯ ನಿರ್ಮಿಸಲು ಶಂಕುಸ್ಥಾಪನೆ ಮಾಡುತ್ತಾರೆ. ನಂತರದ ದಿನಗಳಲ್ಲಿ ಈ ಜಲಾಶಯ ನಿರ್ಮಾಣವಾಗಿ ಅವಳಿ ನಗರಗಳಿಗೆ ಕುಡಿಯುವ ನೀರು ಉಣಿಸುವ ಕೆಲಸ ಮಾಡುತ್ತಿದೆ.
ಜನತೆಯ ಒಳ್ಳೆಯತನ ಕಾರಣವಾಗಿ ಜಲಾಶಯ ತುಂಬಿ ಕೋಡಿಯಾಗಿ ಹರಿಯುತ್ತಿದೆ.
ಇಲ್ಲಿಂದ ಚಿಕ್ಕಬಳ್ಳಾಪುರ ನಗರಕ್ಕೆ ಶೇ .67ರಷ್ಟು, ಬಳಸಿದರೆ ದೊಡ್ಡಬಳ್ಳಾಪುರಕ್ಕೆ ಶೇ.33ರಷ್ಟು ಬಳಸಲಾಗುತ್ತಿದೆ. ಹೀಗೆ ನಗರಕ್ಕೆ ಪ್ರತಿದಿನ 10 ಎಂಎಲ್ಡಿನಂತೆ ನೀರು ಹರಿಸಿದರೂ 210 ದಿನಗಳಿಗೆ ಆಗಲಿದೆ. ಆದರೆ ಪ್ರಸ್ತುತ ಬೋರ್ ವೆಲ್ಗಳ ನೀರನ್ನು ಬಳಸುತ್ತಿರುವುದರಿಂದ ಪ್ರತಿದಿನ 5.5 ಎಂಎಲ್ಲಿ ಬಳಸಿದರೆ ಒಂದುವರೆ ವರ್ಷಕ್ಕೆ ಆಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದು ತುಂಬಾ ಸಂತೋಷದ ವಿಚಾರ ಎಂದರು.
ವರುಣದೇವ ಕರುಣೆ ತೋರಿ ನೀರುಸುರಿಸಿದ ಪರಿಣಾಮ ಜಲಾಶಯ ತುಂಬಿದೆ. ಇದೇ ಸಂತೋಷದಲ್ಲಿ ಶಾಸಕನಾಗಿ ಬಂದು ಬಾಗಿನ ಅರ್ಪಿಸಿ ಗಂಗಾಮಾತೆಗೆ ನಮಿಸಿದ್ದೇನೆ ಎಂದರು.
ಪೋಶೆಟ್ಟಹಳ್ಳಿ ಭಾಗದ ಹಿರಿಯ ಕಾಂಗ್ರೆಸ್ ಮುಖಂಡ ಭರಣಿ ವೆಂಕಟೇಶ್, ನಾರಾಯ ಣಸ್ವಾಮಿ, ಸುಧಾಕರ್ ಸೇರಿ ಎಲ್ಲಾ ಮುಖಂಡ ರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು. ತಹಸೀಲ್ದಾರ್ ಅನಿಲ್, ಇಒ ಮಂಜುನಾಥ್ ಮತ್ತಿತರರು ಇದ್ದರು.