ಚಿಂಚೋಳಿ: ಸಣ್ಷ ವಿಷಯಕ್ಕೆ ಹೆತ್ತ ತಾಯಿಯೊಬ್ಬಳು ತನ್ನ ಮೂವರು ಮಕ್ಕಳೊಂದಿಗೆ ತಾನೂ ಕೂಡ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತಾಲೂಕಿನ ಜಂಗ್ಲಿಪೀರ್ ತಾಂಡಾದಲ್ಲಿ ಸೋಮವಾರ ನಡೆದಿದೆ.
ಚೈತನ್ಯ (4) ಧನುಷ್ (3), ಲಕ್ಷ್ಮೀ (ಒಂದೂವರೆ ತಿಂಗಳ ಮಗು) ಅವರಿಗೆ ವಿಷ ಕುಡಿಸಿದ ತಾಯಿ ಗೀತಾಬಾಯಿ ಸಂತೋಷ ರಾಠೋಡ್ (30) ತಾನೂ ಸಹ ವಿಷ ಸೇವನೆ ಮಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕ್ಷುಲ್ಲಕ ವಿಷಯಕ್ಕೆ ಮಕ್ಕಳಿಗೆ ಹೊಡೆಯುವುದು ಮಾಡುತ್ತಿರುವ ವಿಚಾರವನ್ನು ಗಂಡ ಪ್ರಶ್ನಿಸಿದ್ದಕ್ಕೆ ಗಂಡನ ಜೊತೆ ಜಗಳ ಶುರು ಮಾಡಿದ ಪತ್ನಿಯ ಜಗಳವು ಭಾನುವಾರ ರಾತ್ರಿ ವಿಕೋಪಕ್ಕೆ ತಿರುಗಿದೆ. ಇದರಿಂದ ಕುಪಿತಗೊಂಡ ಪತ್ನಿ ಗೀತಾ ಬಾಯಿ ತನ್ನ ಮೂರೂ ಮಕ್ಕಳಿಗೆ ಕ್ರಿಮಿನಾಶಕವನ್ನು ಸೈಟ್ ಪಾನೀಯಕ್ಕೆ ಸೇರಿಸಿ, ಮಕ್ಕಳಿಗೆ ಕುಡಿಸಿ ಬಳಿಕ ತಾನು ಕುಡಿದಿದ್ದಾಳೆ.
ವಿಷ ಕುಡಿದ ಬಳಿಕ ಹೊಟ್ಟೆ ನೋವಿನಿಂದ ಚೀರಾಡುತ್ತಿದ್ದ ಮಕ್ಕಳನ್ನು ತಾಂಡಾದ ಅಕ್ಕ ಪಕ್ಕದ ನಿವಾಸಿಗಳು ಗಮನಿಸಿ ಗಂಡನಿಗೆ ವಿಷಯ ಮುಟ್ಟಿಸಿ ನಾಲ್ವರನ್ನು ಚಿಂಚೋಳಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ತೀವ್ರ ಅಸ್ವಸ್ಥರಾಗಿರುವ ತಾಯಿ ಮತ್ತು 3 ಮಕ್ಕಳನ್ನು ಬೀದರ್ ನ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.