ದೊಡ್ಡಬಳ್ಳಾಪುರ: ವಾಯುಭಾರ ಕುಸಿತ, ಚಂಡಮಾರುತ ಹೀಗೆ ಒಂದಿಲ್ಲೊಂದು ಕಾರಣದಿಂದ ಕಳೆದ ಸೋಮವಾರದಿಂದ ರಾಜ್ಯಾದ್ಯಂತ ಸುರಿಯುತ್ತಿರುವ ಮಳೆ ಹಲವು ಅವಾಂತರಕ್ಕೆ ಕಾರಣವಾಗಿರುವ ಬೆನ್ನಲ್ಲೇ, ನೀರನ್ನೇ ಕಾರಣದ ಕೆರೆ ಕುಂಟೆಗಳಿಗೆ ನೀರು ಬಂದು ಅಚ್ಚರಿಯನ್ನು ಮೂಡಿಸಿದೆ.
ಅಂತೆಯೇ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಸುರಿಯುತ್ತಿರುವ ಮಳೆಗೆ ಕೆರೆ, ಕುಂಟೆಗಳಿಗೆ ನೀರು ಬಂದಿದ್ದರೆ, ಸತತ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರಾಗಿ, ಜೋಳದ ಬೆಳೆಗಳು ನೆಲ ಕಚ್ಚುತ್ತಿವೆ.
ಮತ್ತೊಂದೆಡೆ ದೊಡ್ಡಬಳ್ಳಾಪುರ – ಚಿಕ್ಕಬಳ್ಳಾಪುರ ಅವಳಿ ನಗರಗಳಿಗೆ ನೀರುಣಿಸುವ ಜಕ್ಕಲಮೊಡಗು ಜಲಾಶಯ ತುಂಬಿ ಕೋಡಿ ಹರಿದಿದ್ದು, ನಗರ ವಾಸಿಗಳಿಗೆ ನೀರಿನ ಬವಣೆಯನ್ನು ತಪ್ಪಿಸಿದೆ.
ದಾಖಲೆ ಮಳೆ: ಕಳೆದ ರಾತ್ರಿ (ಸೋಮವಾರ) ತಾಲೂಕಿನ ತೂಬಗೆರೆ ಹೋಬಳಿಯಲ್ಲಿ 72.05 ಮಿ.ಮೀ ದಾಖಲೆ ಮಳೆ ಸುರಿದಿದ್ದು, ತೋಟಗಾರಿಕೆ ಬೆಳೆಗಳನ್ನು ಬೆಳೆದಿದ್ದ ರೈತರನ್ನು ಸಂಕಷ್ಟಕ್ಕೆ ಒಳಗಾಗುವಂತೆ ಮಾಡಿದ್ದು, ಹೂವಿನ ತೋಟಗಳಿಂದ ನೀರನ್ನು ಹೊರಹಾಕಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು.
ಇನ್ನೂ ಗುಡುಗು, ಸಿಡಿಲಿನ ಜೊತೆ ದೊಡ್ಡಬಳ್ಳಾಪುರ ತಾಲೂಕಿನ ಧಾರಾಕಾರವಾಗಿ ಮಳೆ ಕಸಬಾ ಹೋಬಳಿಯಲ್ಲಿ 53.07 ಮಿ.ಮೀ, ದೊಡ್ಡಬೆಳವಂಗಲ ಹೋಬಳಿಯಲ್ಲಿ 33.05 ಮಿ.ಮೀ, ಮಧುರೆ ಹೋಬಳಿಯಲ್ಲಿ 32.05 ಮಿ.ಮೀ ಹಾಗೂ ಸಾಸಲು ಹೋಬಳಿಯಲ್ಲಿ 34.08 ಮಿ.ಮೀ ಒಟ್ಟು 46.14 ಮಿ.ಮೀ ದಾಖಲಾಗಿದೆ.