ದೊಡ್ಡಬಳ್ಳಾಪುರ: ನಗರದ ಪ್ರವಾಸಿ ಮಂದಿರದಲ್ಲಿ ಇಂದು ಕಾಂಗ್ರೆಸ್ ಪಕ್ಷದ ಮುಖಂಡರು ಸುದ್ದಿಗೋಷ್ಠಿ ಕರೆದಿದ್ದು, ತೀವ್ರ ಕುತೂಹಲ ಕೆರಳಿಸಿದೆ.
ಈ ಕುರಿತು ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮೀಪತಿ ಮಾಹಿತಿ ನೀಡಿದ್ದು, ಇಂದು ಮಧ್ಯಾಹ್ನ ಸುದ್ದಿಗೋಷ್ಠಿ ಆಯೋಜಿಸಲಾಗಿದೆ. ಕೆಪಿಸಿಸಿ ಉಪಾಧ್ಯಕ್ಷ ಟಿ.ವೆಂಕಟರಮಣಯ್ಯ, ನಗರ, ಗ್ರಾಮಾಂತರ ಸೇರಿದಂತೆ ವಿವಿಧ ಬ್ಲಾಕ್ನ ಕಾಂಗ್ರೆಸ್ ಅಧ್ಯಕ್ಷರು, ಸದಸ್ಯರು, ನಗರಸಭೆ ಸದಸ್ಯರು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗುತ್ತಿದೆ.
ಇತ್ತೀಚೆಗೆ ವಿಧಾನಸಭೆ ಚುನಾವಣೆ ಮುಗಿದ ಒಂದೂವರೆ ವರ್ಷಗಳ ನಂತರ ಶಾಸಕ ಧೀರಜ್ ಮುನಿರಾಜು ವಿಜಯದಶಮಿ ಹಬ್ಬದ ದಿನ ಸುದ್ದಿಗೋಷ್ಠಿ ಕರೆದಿದ್ದು, ಸತತ ಎರಡೂವರೆ ಗಂಟೆಗಳಿಗೂ ಹೆಚ್ಚು ಕಾಲ ಹಲವು ಮಾಹಿತಿ ಹಂಚಿಕೊಂಡಿದ್ದರು
ಗೃಹಕಚೇರಿಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಕಿಕ್ಕಿರಿದು ಸೇರಿದ್ದ ಮಾಧ್ಯಮಗಳ ಪ್ರತಿನಿಧಿಗಳ ಬಳಿ ಒಂದೂವರೆ ವರ್ಷದ ಅಭಿವೃದ್ಧಿ ಶೂನ್ಯ ಎಂಬ ವಿರೋಧ ಪಕ್ಷಗಳ ಆಕ್ರೋಶಕ್ಕೆ ತಿರುಗೇಟು ನೀಡಿದ್ದಾರೆನ್ನಲಾಗಿದೆ.
ವರದಿಯನ್ವಯ ಚಿಗರೇನಹಳ್ಳಿ ಸಮೀಪದ ಇರುವ ಎಂ.ಎಸ್.ಜಿ.ಪಿ ಕಸ ವಿಲೇವಾರಿ ಘಟಕ ತೆರವು, ರಸ್ತೆ ಅಭಿವೃದ್ಧಿ, ಹೆಚ್ಚಿನ ಅನುದಾನಕ್ಕೆ ಮನವಿ ಮುಂತಾದ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆಂದು ವರದಿಯಾಗಿದೆ.
ಇದರ ಬೆನ್ನಲ್ಲೇ ಅಲ್ಪಸಂಖ್ಯಾತರಿಗೆ ನೀಡಲಾದ ಅನುದಾನ ಬೇರೆ ವರ್ಗಾವಣೆ ಕುರಿತು ನಗರಸಭೆಯ ಕಾಂಗ್ರೆಸ್ ಸದಸ್ಯರ ಪ್ರತಿಭಟನೆಗೆ ಶಾಸಕ ಧೀರಜ್ ಮುನಿರಾಜು ತಿರುಗೇಟು ನೀಡಿದ್ದಾರೆ.
ಅಲ್ಲದೆ ಎರಡನೇ ಅವಧಿಗೆ ದೊಡ್ಡಬಳ್ಳಾಪುರ ನಗರಸಭೆ ಅಧ್ಯಕ್ಷ ಸ್ಥಾನ ಒಪ್ಪಂದದಂತೆ ಜೆಡಿಎಸ್ಗೆ ಬಿಟ್ಟುಕೊಡಲಿಲ್ಲ ಹಾಗೂ ದೊಡ್ಡಬಳ್ಳಾಪುರ ಅಭಿವೃದ್ಧಿ ವಿಚಾರಗಳ ಕುರಿತು ಪ್ರಸ್ತಾಪಿಸಿದ ಮಿತ್ರಪಕ್ಷ ಜೆಡಿಎಸ್ನ ಹರೀಶ್ ಗೌಡ ಅವರ ಹೆಸರೇಳದೆ ಟಾಂಗ್ ನೀಡಿದ್ದಾರೆಂದು ವರದಿಯಾಗಿದೆ.
ಇದೇ ವೇಳೆ ಕಾಂಗ್ರೆಸ್ ನ ಕೆಪಿಸಿಸಿ ಉಪಾಧ್ಯಕ್ಷ ಟಿ.ವೆಂಕಟರಮಣಯ್ಯ ಅವರ ವಿರುದ್ಧ ಆರೋಪಗಳನ್ನು ಮಾಡಿದ್ದರೆನ್ನಲಾಗಿದು, ಈ ಹಿನ್ನೆಲೆಯಲ್ಲಿ ಇಂದು ಶಾಸಕ ಧೀರಜ್ ಮುನಿರಾಜುಗೆ ತಿರುಗೇಟು ನೀಡಲು ಸುದ್ದಿಗೋಷ್ಠಿ ಕರೆದಿರಬಹುದು ಎನ್ನಲಾಗುತ್ತಿದೆ.
ಇದರ ಬೆನ್ನಲ್ಲೇ ಜೆಡಿಎಸ್ ನ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ಅವರು ಕೂಡ ಸುದ್ದಿಗೋಷ್ಠಿ ನಡೆಸಲು ಸಿದ್ದತೆ ನಡೆಸಿದ್ದಾರೆ ಎನ್ನಲಾಗುತಿದ್ದು, ವಿಧಾನಸಭೆ ಚುನಾವಣೆ, ಲೋಕಸಭೆ ಚುನಾವಣೆ ಮುಗಿದ ಅನೇಕ ದಿನಗಳ ನಂತರ ದೊಡ್ಡಬಳ್ಳಾಪುರದಲ್ಲಿ ರಾಜಕೀಯ ಆರೋಪ ಪ್ರತ್ಯಾರೋಪ ತೀವ್ರಗೊಂಡಿದೆ ಎನ್ನಲಾಗುತ್ತಿದೆ.