ನವದೆಹಲಿ: ನಿನ್ನೆ ರಾತ್ರಿ 8.30ರ ಸುಮಾರಿಗೆ ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ ಕವರಪೇಟ್ಟೈನಲ್ಲಿ ನಡೆದ ರೈಲು ಅಪಘಾತ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದು, ಪದೇ ಪದೇ ಸಂಭವಿಸುತ್ತಿರುವ ರೈಲುಗಳ ಅಪಘಾತ ಕುರಿತು ಕೇಂದ್ರ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಶುಕ್ರವಾರ ಸಂಜೆ ಮೈಸೂರಿನಿಂದ ಹೊರಟಿದ್ದ ಎಕ್ಸ್ಪ್ರೆಸ್ ರೈಲು ಬೆಂಗಳೂರಿನ KSR ರೈಲ್ವೆ ನಿಲ್ದಾಣ ದಾಟಿ ಹೋಗ್ತಿತ್ತು. ರಾತ್ರಿ 8 ಗಂಟೆ ಸುಮಾರಿಗೆ ಪೆರಂಬೂರು ದಾಟಿದ್ದ ರೈಲು, ದರ್ಬಾಂಗದತ್ತ ಪ್ರಯಾಣ ಬೆಳೆಸಿತ್ತು. ಆದ್ರೆ, 75 ಕಿಲೋಮೀಟರ್ ವೇಗದಲ್ಲಿ ಸಂಚರಿಸುತ್ತಿದ್ದ ಎಕ್ಸ್ಪ್ರೆಸ್ ರೈಲು, ಕಾವರಪೇಟ್ಟೈ ತಲುಪುತ್ತಿದ್ದಂತೆ ಲೂಪ್ ಲೇನ್ನಲ್ಲಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿತ್ತು.
ಪೆರಂಬೂರು ದಾಟಿ ಕಾವರಪೇಟ್ಟೈಗೆ ಎಕ್ಸ್ಪ್ರೆಸ್ ರೈಲು ತೆರಳುತ್ತಿತ್ತು. ಕಾವರ ಪೇಟ್ಟೈ ರೈಲು ನಿಲ್ದಾಣದಲ್ಲಿ ಮುಖ್ಯ ಲೇನ್ಗೆ ಹೋಗುವಂತೆ ಸೂಚನೆ ಸಿಗ್ನಲ್ ನೀಡಿದ್ರು. ಆದರೆ, ಮೇನ್ ಲೇನ್ಗೆ ಸಿಗ್ನಲ್ ಇದ್ದರೂ ಗೂಡ್ಸ್ ರೈಲು ನಿಂತಿದ್ದ ಲೂಪ್ ಲೇನ್ ಟ್ರ್ಯಾಕ್ಗೆ ನುಗ್ಗಿತ್ತು. ಗೂಡ್ಸ್ ರೈಲಿಗೆ ಗುದ್ದಿದ ರಭಸಕ್ಕೆ, 75 km ವೇಗದಲ್ಲಿ ಗೂಡ್ಸ್ ರೈಲಿಗೆ ಡಿಕ್ಕಿ ಆಗಿದೆ. ಡಿಕ್ಕಿಯಾದ ರಭಸಕ್ಕೆ ರೈಲಿನ ಬೋಗಿಯಲ್ಲಿ ಬೆಂಕಿ ಹೊತ್ತಿಕೊಂಡಿದೆ.
ಎಕ್ಸ್ಪ್ರೆಸ್ ರೈಲಿನಲ್ಲಿದ್ದ ಎಲ್ಲರಿಗೂ ಭೂಕಂಪನದ ಅನುಭವವಾಗಿದೆ. 12ರಿಂದ 13 ಬೋಗಿಗಳು ಹಳಿ ತಪ್ಪಿ ಅಕ್ಕಪಕ್ಕಕ್ಕೆ ಬಂದು ಬಿದ್ದಿದೆ.
ಈ ಕುರಿತು ಟ್ವಿಟ್ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ರಾಹುಲ್ ಗಾಂಧಿ, ಮೈಸೂರು-ದರ್ಭಾಂಗ ರೈಲು ಅಪಘಾತವು ಭೀಕರವಾದ ಬಾಲಸೋರ್ ಅಪಘಾತವನ್ನು ಪ್ರತಿಬಿಂಬಿಸುತ್ತದೆ – ಪ್ಯಾಸೆಂಜರ್ ರೈಲು ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ.
ಹಲವಾರು ಅಪಘಾತಗಳಲ್ಲಿ ಅನೇಕ ಜೀವಗಳನ್ನು ಕಳೆದುಕೊಂಡರೂ, ಕೇಂದ್ರ ಸರ್ಕಾರ ಯಾವುದೇ ಪಾಠಗಳನ್ನು ಕಲಿತಿಲ್ಲ. ದುರ್ಘಟನೆಯಾಗದಂತೆ ಮುಂಜಾಗ್ರತೆ ವಹಿಸುತ್ತಿಲ್ಲ.. ಈ ಸರಕಾರ ಎಚ್ಚೆತ್ತುಕೊಳ್ಳುವ ಮುನ್ನ ಇನ್ನೂ ಎಷ್ಟು ಕುಟುಂಬಗಳು ಬಲಿಯಾಗಬೇಕು? ಎಂದು ಪ್ರಶ್ನಿಸಿದ್ದಾರೆ.