ದೊಡ್ಡಬಳ್ಳಾಪುರ: ವಿಶ್ವವಿಖ್ಯಾತ ಮೈಸೂರು ದಸರಾ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಸ್ತಬ್ಧ ಚಿತ್ರದಲ್ಲಿ ದೊಡ್ಡಬಳ್ಳಾಪುರ ತಾಲೂಕನ್ನು ಕಡೆಗಣಿಸಿರುವ ಧೋರಣೆ ಖಂಡನೀಯವೆಂದು ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಅಧ್ಯಕ್ಷ ಮತ್ತು ದೊಡ್ಡಬಳ್ಳಾಪುರ ಕನ್ನಡಪರ ಸಂಘಟನೆಗಳ ಅಧ್ಯಕ್ಷ ಎ.ನಂಜಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರು ದಸರಾ ಸ್ತಬ್ದಚಿತ್ರದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕು ಕಡೆಗಣಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ದೊಡ್ಡಬಳ್ಳಾಪುರ ತಾಲ್ಲೂಕು ಕಡೆಗಣಿಸಿರುವಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಮಲತಾಯಿ ಧೋರಣೆಯನ್ನು ಎದ್ದು ಕಾಣಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ದಸರಾ ಸ್ತಬ್ದ ಚಿತ್ರಕ್ಕೆ ಬಳಸಿಕೊಳ್ಳಲು ದೊಡ್ಡಬಳ್ಳಾಪುರ ತಾಲ್ಲೂಕಿನ ಪ್ರಸಿದ್ಧವಾದ ಧಾರ್ಮಿಕ ಕ್ಷೇತ್ರಗಳಾದ ಘಾಟಿ ಸುಬ್ರಮಣ್ಯ, ಮಧುರೆ ಶನಿಮಹಾತ್ಮ ದೇವಸ್ಥಾನ, ಪ್ರಕೃತಿ ತಾಣಗಳಾದ ಮಾಕಳಿ ದುರ್ಗ, ಹುಲುಕುಡಿ ಬೆಟ್ಟ, ದೊಡ್ಡಬಳ್ಳಾಪುರ ನಗರದ ಪ್ರಸಿದ್ಧ ನೇಕಾರಿಕೆ ಮುಂತಾದ ಹಲವು ವಿಶೇಷಗಳಿದ್ದರೂ ಯಾವುದನ್ನು ಬಳಸಿಕೊಂಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಹಲವು ದಶಕಗಳಿಂದ ಉಪ ವಿಭಾಗ ಕಚೇರಿ ಇದೆ. ಜಿಲ್ಲಾಡಳಿತ ಒಂದು ಬಾರಿಯೂ ರಾಷ್ಟ್ರೀಯ ಹಬ್ಬಗಳನ್ನು ದೊಡ್ಡಬಳ್ಳಾಪುರ ಉಪವಿಭಾಗ ಕೇಂದ್ರದಲ್ಲಿ ಆಚರಣೆ ಮಾಡಿಲ್ಲ.
ದೊಡ್ಡಬಳ್ಳಾಪುರ ತಾಲ್ಲೂಕಿನ ಜನ ಶಾಂತಿ ಪ್ರಿಯರು ಎಂಬ ಕಾರಣ ಪದೇ ಪದೇ ಈ ರೀತಿ ಅವಮಾನಿಸುತ್ತಾ. ಭಾವನೆಗಳಿಗೆ ದಕ್ಕೆ ತರುತ್ತಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಧಿಕಾರಿಗಳು ಹಾಗೂ ಜಿಲ್ಲೆಯ ಉಸ್ತುವಾರಿ, ಜನಪ್ರತಿನಿಧಿಗಳ ಧೋರಣೆಯನ್ನು ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕನ್ನಡಪರ ಸಂಘಟನೆ ಒಕ್ಕೂಟ ಖಂಡಿಸುತ್ತದೆ ಎಂದಿದ್ದಾರೆ.