ಚಿಕ್ಕಬಳ್ಳಾಪುರ: ಮತದಾರರಿಗೆ ಆಸೆ, ಆಮಿಷ ಒಡ್ಡಿ ಚುನಾವಣೆಯಲ್ಲಿ ಗೆದ್ದ ಬಳಿಕ ಜನರ ಕಷ್ಟಗಳಿಗೆ ದನಿಯಾಗದೆ ಕೆಲ ಶಾಸಕರು ಕಾಣೆಯಾಗಿದ್ದಾರೆ ಎಂಬ ಆರೋಪದ ನಡುವೆ, ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಸತತ ಟ್ರೋಲ್ಗೆ ಒಳಗಾದರೂ ಕೇರ್ ಮಾಡದೆ ‘ನಮ್ಮೂರಿಗೆ ನಮ್ಮ ಶಾಸಕರು’ ಕಾರ್ಯಕ್ರಮದ 2ನೇ ಕಂತಿನಲ್ಲಿ ತಾಲೂಕಿನ ನಂದಿ ಗ್ರಾಮ ಪಂಚಾಯತಿಯ ಐದು ಗ್ರಾಮಗಳಿಗೆ ಸೋಮವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಅಹವಾಲು ಆಲಿಸಿದರು.
ತಾಪಂ, ಆರೋಗ್ಯ, ಕಂದಾಯ, ಆಹಾರ, ಬೆಸ್ಕಾಂ, ಪೋಲಿಸ್ ಮತ್ತು ಗ್ರಾಪಂ ಅಧಿಕಾರಿ ಗಳೊಟ್ಟಿಗೆ ಸಿಂಗಾಟಿಕದಿರೇನಹಳ್ಳಿ, ಮಡುಕು ಹೊಸ ಹಳ್ಳಿ (ಗಾಂಧಿಪುರ), ಸುಲ್ತಾನ್ ಪೇಟೆ, ಬೈರನಾಯಕನ ಹಳ್ಳಿ ಮತ್ತು ನಂದಿ ಗ್ರಾಮಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿದರು.
ಈ ವೇಳೆ ಗ್ರಾಮಸ್ಥರು ರಸ್ತೆ, ಚರಂಡಿ, ಕಲ್ಯಾಣಿ ಸ್ವಚ್ಛತೆ, ಸ್ಮಶಾನಕ್ಕೆ ಜಾಗ, ಸ್ಮಶಾನಕ್ಕೆ ರಸ್ತೆ ಒತ್ತುವರಿ, ವಿದ್ಯುತ್, ಜಮೀನು ಖಾತೆ, ಪಿಂಚಣಿ ಸಮಸ್ಯೆ ಗಳನ್ನು ಖುದ್ದಾಗಿ ಶಾಸಕರ ಗಮನಕ್ಕೆ ತಂದರು.
ಈ ವೇಳೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್, ಕಾಂಗ್ರೆಸ್ ಮುಖಂಡರಾದ ಸುಧಾ ವೆಂಕಟೇಶ್, ಕೆ.ಎಲ್. ಶ್ರೀನಿವಾಸ್, ಡ್ಯಾನ್ಸ್ ಶ್ರೀನಿವಾಸ್, ಕಣಿತಹಳ್ಳಿ ವೆಂಕಟೇಶ್, ನಾಗಭೂಷಣ್, ಖೋಡೇಸ್ ವೆಂಕಟೇಶ್,ನಂದಿ ಮೂರ್ತಿ, ಮುರಳಿ, ರಮೇಶ್, ಮಸೂದ್ ಪೆದ್ದಣ್ಣ, ಭಾಗ್ಯಮ್ಮ, ಅಲ್ಲು ಅನಿಲ್, ವಿನಯ್ ಬಂಗಾರಿ, ಕೋಲಾಟ್ಟು ರಾಮಚಂದ್ರ, ವಿವಿಧ ಇಲಾಖಾ ಅಧಿಕಾರಿಗಳು, ಮತ್ತಿತರರು ಇದ್ದರು.
ಟೀಕೆಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ
‘ನಾನು ನನ್ನ ಜನರನ್ನು ಭೇಟಿ ಮಾಡಿ ಸಮಸ್ಯೆ ಆಲಿಸುವ ಕೆಲಸ ಮಾಡುತ್ತಿದ್ದು ಟೀಕೆಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ. ನಂದಿ ಗ್ರಾಮಕ್ಕೆ ಬರಲೇಬೇಕು ಎಂದು ನಿರ್ಧರಿಸಿ ಬಂದಿದ್ದೇನೆ.
ನಮ್ಮ ಊರಿಗೆ ನಮ್ಮ ಶಾಸಕರು ಕಾರ್ಯಕ್ರಮದ ಮೂಲಕ ಪ್ರತಿ ಹಳ್ಳಿಗೂ ಅಧಿಕಾರಿಗಳ ಜೊತೆ ಭೇಟಿ ಕೊಟ್ಟು ಗ್ರಾಮಸ್ಥರು ಕಷ್ಟ ಸುಖ ಕೇಳಿ ಅಲ್ಲೆ ಬಗೆಹರಿಸುವ ಕೆಲಸಕ್ಕೆ ಪ್ರಾಮಾಣಿಕವಾಗಿ ಕೈಹಾಕಿದ್ದೇನೆ. ಇದನ್ನೆಲ್ಲಾ ಕಾಳಜಿಯಿಂದ ಮಾಡುತ್ತಿದ್ದೇನೆ ವಿನಃ ಕಾಟಾಚಾರಕ್ಕೋ ಪ್ರಚಾರಕ್ಕೋ ಮಾಡುತ್ತಿಲ್ಲ.
ಈಗ ಯಾವುದೇ ಚುನಾವಣೆಗಳೂ ಇಲ್ಲ, ಯಾರನ್ನೋ ಓಲೈಸಲು ಮಾಡುತ್ತಿಲ್ಲ. ನನ್ನ ಆರಿಸಿದ ಜನರ ಋಣ ತೀರಿಸಲು ಮಾಡುತ್ತಿದ್ದೇನೆ ಎಂದು ಶಾಸಕ ಪ್ರದೀಪ್ ಈಶ್ವರ್ (Pradeep Eshwar) ತಿಳಿಸಿದರು.