ಹನೂರು: ಮಹಾಲಯ ಅಮಾವಾಸ್ಯೆ ಹಿನ್ನೆಲೆಯಲ್ಲಿ ಪ್ರಸಿದ್ಧ ಮಲೆ ಮಹದೇಶ್ವರ ಬೆಟ್ಟದಲ್ಲಿ ಪೂಜಾ ಕಾರ್ಯಕ್ರಮಗಳು ಧಾರ್ಮಿಕವಾಗಿ ವಿಧಿ ವಿಧಾನಗಳೊಂದಿಗೆ ಸಂಭ್ರಮ ಸಡಗರದಿಂದ ಜರುಗಿತು.
ಮಲೆ ಮಹದೇಶ್ವರ ಬೆಟ್ಟದ ವತಿಯಿಂದ ಕಳೆದ ಮೂರು ದಿನಗಳಿಂದ ಮಹಾಲಯ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳು ಸಾಲೂರು ಮಲ್ಲಿಕಾರ್ಜುನ ಮಠದ ಶಾಂತ ಸ್ವಾಮೀಜಿ ನೇತೃತ್ವದಲ್ಲಿ ಸರದಿ ಬೇಡಗಂಪಣ ಅರ್ಚಕ ತಂಡದವರಿಂದ ಮಾದಪ್ಪನಿಗೆ ವಿಶೇಷ ಅಭಿಷೇಕ ದೂಪದ ಅಭಿಷೇಕ ಮಹಾ ಮಂಗಳಾರತಿ ಪೂಜಾ ಕಾರ್ಯಕ್ರಮಗಳು ಧಾರ್ಮಿಕವಾಗಿ ವಿದಿ ವಿಧಾನಗಳೊಂದಿಗೆ ಜರುಗಿದವು.
ಹರಕೆ ಹೊತ್ತ ಭಕ್ತರಿಂದ ವಿಶೇಷ ಉತ್ಸವಗಳು ಜರುಗಿದವು. ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾಲಯಅಮಾವಾಸ್ಯೆ ಪ್ರಯುಕ್ತ ರಾಜ್ಯದ ನಾನಾ ಭಾಗಗಳಿಂದ ಬಂದಿದ್ದ ಹರಕೆ ಹೊತ್ತ ಭಕ್ತರಿಂದ ಚಿನ್ನದ ರಥೋತ್ಸವ, ಬೆಳ್ಳಿ ರಥೋತ್ಸವ ಹಾಗೂ ಮಲೆ ಮಹದೇಶ್ವರ ಉತ್ಸವ ಮೂರ್ತಿ ಮೆರವಣಿಗೆ, ಹುಲಿ ವಾಹನ ಉತ್ಸವ, ರುದ್ರಾಕ್ಷಿ ಮಂಟಪೋತ್ಸವ, ಉರುಳು ಸೇವೆ, ಪಂಜಿನ ಸೇವೆ, ಮುಡಿಸೇವೆ ಹಾಗೂ ಹಲವು ಉತ್ಸವಗಳು ಧಾರ್ಮಿಕವಾಗಿ ನಡೆದವು.
ವಿಶೇಷ ದರ್ಶನ: ಕ್ಷೇತ್ರ ಅಭಿವೃದ್ಧಿ ಕಲ್ಪಿಸಲಾಗಿತ್ತು ಪ್ರಾಧಿಕಾರದ ವತಿಯಿಂದ 60 ವರ್ಷ ಮೇಲ್ಪಟ್ಟ ವಿಶೇಷ ಮತ್ತು 500 ಹಾಗೂ 250 ರು. ಟಿಕೆಟ್ ಕೌಂಟರ್ಗಳನ್ನು ಸಹ ವ್ಯವಸ್ಥಿತವಾಗಿ ಕಲ್ಪಿಸಲಾಗಿತ್ತು. ಉಚಿತ ಸರತಿ ಸಾಲಿನಲ್ಲಿ ನಿಂತು ಭಕ್ತರು ಮಾದಪ್ಪನ ದರ್ಶನ ಪಡೆದರು.
ದಾಸೋಹ: ರಾಜ್ಯದ ನಾನಾ ಭಾಗಗಳಿಂದ ಬರುವ ಮಾದಪ್ಪನ ಪಂಚಾಯಿತಿ ವಿಶೇಷ ದಾಸೋಹ ಬೆಳಿಗ್ಗೆ 8 ರಿಂದ 11 ರವರೆಗೆ ತಿಂಡಿ ಹಾಗೂ ನಂತರ ಊಟದ ವ್ಯವಸ್ಥೆ, ವಿಶೇಷ ದಾಸೋಹವನ್ನು ಸಹ ಕಲ್ಪಿಸಲಾಗಿತ್ತು. ಕಳೆದ ಮೂರು ದಿನಗಳಿಂದ ಲಾಡು ಪ್ರಸಾದ, ಒಂದು ಲಕ್ಷ ಮೂವತ್ತು ಸಾವಿರ ಮಾರಾಟವಾಗಿದೆ. ಜತೆಗೆ ಇನ್ನೂ ಒಂದು ಲಕ್ಷದಾಸ್ತಾನು ಮಾಡಲಾಗಿದೆ. ಬರುವ ಭಕ್ತಾದಿಗಳಿಗೆ ವಿಶೇಷವಾಗಿ ಕುಡಿಯುವ ನೀರು ಮತ್ತು ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿತ್ತು.
ಭಾರಿ ಜನಸ್ತೋಮ: ಮಹಾಲಯ ಅಮಾವಾಸ್ಯೆ ಪ್ರಯುಕ್ತ ಕಳೆದ ಮೂರು ದಿನಗಳಿಂದ ಅಮಾವಾಸ್ಯೆ ಪೂಜೆಗೆ ಲಕ್ಷಾಂತರ ಭಕ್ತರು ರಾಜ್ಯದ ಬೆಂಗಳೂರು ಮೈಸೂರು ಮಂಡ್ಯ ಹಾಗೂ ಚಾಮರಾಜನಗರ ತಾಲೂಕು ಕೇಂದ್ರದ ಹೋಬಳಿಗಳಿಂದಲೂ ಹಾಗೂ ತಮಿಳುನಾಡಿನಿಂದಲೂ ಅಪಾರ ಸಂಖ್ಯೆಯ ಭಕ್ತಾದಿಗಳು ಭೇಟಿ ನೀಡಿ ಮಾದಪ್ಪನ ದರ್ಶನ ಪಡೆದರು.
ಬಿಗಿ ಬಂದೋಬಸ್ತ್: ಮಲೆ ಮಾದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ಮಹಾಲಯ ಅಮಾವಾಸ್ಯೆ ಪೂಜಾ ಕಾರ್ಯಕ್ರಮಕ್ಕೆ ಬರುವ ಭಕ್ತಾದಿಗಳಿಗೆ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಕ್ರಮ ವಹಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಮಹದೇಶ್ವರ ಬೆಟ್ಟದಲ್ಲಿ ಬೆಟ್ಟ ವ್ಯಾಪ್ತಿಯ ದೇವಾಲಯದ ಸಮೀಪ ಹಾಗೂ ಸಾಲೂರು ಮಠಕ್ಕೆ ತೆರಳುವ ರಸ್ತೆ ಬಸ್ ನಿಲ್ದಾಣ ಹಾಗೂ ಹಿಡಿದ ಆಯಕಟ್ಟಿನ ಸ್ಥಳಗಳಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.