ಅಲ್ಲೊಂದು ಸಿಲೂರು ಅಂತಾ ಇತ್ತಂತೆ. ಆ ಊರಾಗ ಇದ್ದ ಅಗಸರ ಹನುಮಂತಣ್ಣ ಬಟ್ಟೆ ತೊಳೆಯೋದ್ರಾಗ ಫುಲ್ ಫೇಮಸ್ ಆಗಿದ್ನಂತೆ. ಅದು ಎಷ್ಟರಮಟ್ಟಿಗೆ ಅಂದ್ರ ಸುತ್ತಮುತ್ತ ಹತ್ತಳ್ಳಿ ಜನ ಎಲ್ರೂ ಅಗಸರ ಹನುಮಂತಣ್ಣನ ಕೈಯಾಗ ಹಳೆ ಬಟ್ಟೆನೂ ಹೊಸಾವು ಆಕವೆ ಅಂತಿದ್ರಂತೆ.
ಹನುಮಂತಣ್ಣನೂ ಹಂಗ ಇದ್ದ ಮತ್ತ. ಆತನ ಕೆಲಸಕ್ಕ ಜೊತೆಯಾಗಿ ಇಬ್ಬರು ಮಕ್ಕಳಿದ್ರಂತೆ. ಮಕ್ಕಳ ದೊಡ್ಡತನ ಅಂದರ ಹನುಮಂತಣ್ಣ ಎಷ್ಟು ಮಣಭಾರದ ಬಟ್ಟೆ ಹೊರಿಸಿದರೂ ಝುಂ ಅಂತಿರಲಿಲ್ಲಂತೆ. ಅಂಜುತಿರಲಿಲ್ಲ ಅಳುಕುತಿರಲಿಲ್ಲಂತೆ. ಹನುಮಂತಣ್ಣನ ಹೆಂಡ್ತಿನೂ ಕುಂತುಣ್ಣಾಕಿ ಅಲ್ಲ. ಊರಾಗಿನ ಮನಿಮನಿಗೆ ಹೋಗಿ ಇದ್ದಿಲಿ ತರ್ತಿದ್ಲಂತೆ.
ಹೀಂಗ ಒಂದ್ಸಲ ಏನಾತಪ ಅಂದರ ಬರಗಾಲ ಅಂದರ ಬರಗಾಲ ಬಿದ್ದುಬಿಡ್ತಂತೆ. ಊರಾಗಿನ ಕೆರಿ ಬತ್ತಿಬಿಡ್ತಂತೆ. ಊರಿನ ಜನಕ್ಕ ಕುಡಿಯಾಕ ನೀರಿಲ್ದಂಗಾತಂತೆ. ಇನ್ನು ಹನುಮಂತಣ್ಣ ಬಟ್ಟೆ ತೊಳೆಯೋದು ಹೆಂಗ? ಹೊಟ್ಟಿ ಮ್ಯಾಲೆ ತಣ್ಣೀರ ಬಟ್ಟೇನ ಗತಿಯಾತಂತೆ. ಎಷ್ಟು ದಿನ ಹಂಗ ಇರ್ತಾರ? ಅವಾಗಲೂ ಹನುಮಂತಣ್ಣನ ಇಬ್ಬರು ಮಕ್ಕಳು ಆತನ ನೆರವಿಗೆ ಬಂದ್ರಂತೆ. ಹೆಂಗಪ ಅಂದರ ಬಿಸಿಲೂರಿನಿಂದ ಮೈಲು ದೂರದಾಗ ಮಳೆಯೂರು ಅಂತ ಒಂದೂರಿತ್ತಂತೆ. ಅಲ್ಲಿದ್ದ ಒಂದು ಕೆರಿಯಾಗ ನೀರು ಯಾವಾಗಲೂ ಇರ್ತಿದ್ವಂತೆ. ನೀರು ನೋಡಿಕೆಂಡು ಬಂದ ಹನುಮಂತಣ್ಣನ ಮಕ್ಕಳು ಅಪ್ಪನನ್ನ ಜೊತೆಗೆ ಕರ್ಕಂಡು ಬಟ್ಟೆ ಹೊತ್ಕಂಡು ಹೋಗಿ ತೊಳ್ಕಂಡು ಬಂದ್ರಂತೆ. ಮತ್ತ ಜೀವನ ಮೊದಲಿನಂಗಾತಂತೆ.
ಹಿಂಗ ನಡೆದಿದ್ರ ಎಲ್ಲ ಸರಿ ಇರ್ತಿತ್ತಂತೆ. ಆದರ, ಮಳೆಯೂರಿಗೆ ಹೋದ ಹನುಮಂತಣ್ಣನ ಮಕ್ಕಳು ಸ್ವಲ್ಪ ದಿನಕ್ಕ ಬದಲಾಗಿಬಿಟ್ರಂತೆ. ಏನಾತು ಅಂದರ ಇದಕ್ಕಿಂತ ಮೊದಲು ಹನುಮಂತಣ್ಣ ನಾಲ್ಕು ದಿನಕ್ಕೋ ವಾರಕ್ಕೋ ಒಮ್ಮೆ ಒಟ್ರಾಶಿ ಬಟ್ಟೆ ಮಾಡ್ಕಂಡು ಗಂಟು ಕಟ್ಕಂಡು ತೊಳಿತಿದ್ನಂತೆ. ಈಗ ನೋಡಿದ್ರ ದಿನದಿನಕ್ಕ ಕೂಡು ಹಾಕೆಂಡು ಕುಂತ್ರ ಬಟ್ಟೆ ಭಾಳ ಆಕಾವು ಅಂತ ಪ್ರತಿ ದಿನಾನೂ ಬಟ್ಟೆ ತೊಳಿಯಲು ಹೋಗಲು ಶುರು ಮಾಡಿದ್ನಂತೆ.
ಇದರಿಂದ ದಿನ್ದಿನಾ ಮಳೆಯೂರಿಗೆ ಹೊಂಟ ಹನುಮಂತಣ್ಣನ ಮಕ್ಕಳು ಮಳೆಯೂರಿನ ಅಗಸರ ನಾಗಣ್ಣನ ಮಕ್ಕಳ ಗೆಳೆತನ ಬೆಳೆಸಿದ್ರಂತೆ. ಇದರ ಪರಿಣಾಮ ಏನಾತು ಅಂದರ ಹನುಮಂತಣ್ಣನ ಮಕ್ಕಳಿಬ್ಬರೂ ನಿಧಾನಕ್ಕ ಸೋಮಾರಿಗಳಾದ್ರಂತೆ. ಕಾರಣ ಏನಪ ಅಂತ ಹುಡುಕಿದ್ರ ನಾಗಣ್ಣ ತನ್ನ ಮಕ್ಕಳಿಗೆ ಕೆಲಸಾನ ಹಚ್ಚುತ್ತಿರಲಿಲ್ಲಂತೆ. ಹೆಂಗೂ ಊರಾಗ ನೀರಿದ್ವಲ್ಲ ಕೆರೆ ಪಕ್ಕದಲ್ಲೇ ಒಂದು ಮನೆ ಕಟ್ಕೆಂಡು ವಾಷಿಂಗ್ ಮಶಿನ್ ಇಟ್ಟಕಂಡಿದ್ರಂತೆ. ನೀರಾಗಿಳಿಯಂಗಿಲ್ಲ ಕೈಮುಟ್ಟಿ ಕೆಲಸ ಮಾಡಂಗಿಲ್ಲ. ಆರಾಮದಾಯಕ ಬದುಕಿನಿಂದ ಅವರ ಮೈ ಜಡ್ಡುಗಟ್ಟಿದ್ವಂತೆ.
ಒಂದಿನ ಮಳೆಯೂರಿನಿಂದ ವಾಪಾಸ್ ಬರುವ ದಾರಾರಯಗ ಹನುಮಮತಣ್ಣನ ಮಕ್ಕಳು ನಾವು ನಮ್ಮೂರಾಗ ಒಂದು ಮನೆ ಕಟ್ಟಿ ವಾಷಿಂಗ್ ಮಶೀನ್ ತರಬೇಕು ಅಂತಾ ಹೇಳಿದ್ರಂತೆ. ಅದಕ್ಕ ಹನುಮಂತಣ್ಣ ನಮ್ಮೂರಾಗ ಅವೆಲ್ಲ ನಡೆಯಲ್ಲ. ಹಾಸಿಗಿ ಇದ್ದಷ್ಟ ಕಾಲು ಚಾಚಬೇಕು ಅಂದ್ನಂತೆ. ದಾರಿಯುದ್ದಕ್ಕೂ ಒಂದೂ ಮಾತಾಡದ ಮನಿಗೆ ಬಂದ ಮಕ್ಕಳಿಬ್ಬರೂ ಒಂದು ತುತ್ತು ಉಣ್ಣದೇ ಮಕ್ಕಂಡು ಬಿಟ್ರಂತೆ.
ಯಾಕ ಹಿಂಗ ಬ್ಯಾಸರ ಮಾಡ್ಕೆಂಡಾರ? ಅಂತ ಕೇಳಿದ ಹನುಮಂತಣ್ಣನ ಹೆಂಡತಿ ಮಾಡಿ ಕೊಡ್ರಿ ದುಡಿಯೋ ಮಕ್ಕಳನ್ನ ಹಿಂದಕ್ಕೇಳಿಬ್ಯಾಡ್ರಿ ಅಂದ್ಲಂತೆ. ಆತು ಬಿಡು ಮಾಡ್ಲಿ. ನಾವು ಇನ್ನು ಎಷ್ಟ್ ದಿವಸ ಅಂತಾ ದುಡಿಯೋಕಾಗುತ್ತ? ಅಂದ ಹನುಮಂತಣ್ಣ ಅವರ್ನ ಇವರ್ನ ಕೈಕಾಲ ಹಿಡ್ದು ಬ್ಯಾಂಕಿನ್ಯಾಗ ಸಾಲ ತೆಗೆದು ಮಕ್ಕಳಾಸೆಪಟ್ಟಂಗ ಮಾಡಿಕೊಟ್ನಂತೆ.
ಹನುಮಂತಣ್ಣನ ಮಕ್ಕಳಿಗೇನೊ ಖುಷಿ ಆತಂತೆ. ಎಲ್ಲಾ ಆಟೋಮ್ಯಾಟಿಕ್ ಇದ್ದ ವಾಷಿಂಗ್ ಮಶೀನು ಬಟ್ಟೆ ತೊಳ್ದು ಒಣಗಿಸಿ ಕೊಡ್ತಿದ್ದವಂತೆ. ಇಬ್ಬರೂ ಅಣ್ಣ ತಮ್ಮ ಸೇರಿ ಇಸ್ತ್ರಿ ಮಾಡಿಕೊಟ್ರ ಮುಗಿತಂತೆ. ಕೊರಳಪಟ್ಟಿ ತೋಳು ಮ್ಯಾಗಿನ ಕೊಳೆ ಹಂಗ ಇರ್ತಿತ್ತಂತೆ. ಇದರಿಂದ ವಾರ ಕಳೆದಾಂಗ ತಿಂಗಳು ಆದಾಂಗ ಜನರು ಬಟ್ಟೆ ಕೋಡೋರು ಕಡಿಮೆ ಮಾಡಿದ್ರಂತೆ.
ಬಟ್ಟೆಗಳು ಮೊದಲಿನಂಗ ಸ್ವಚ್ಚ ಆಗಂಗಿಲ್ಲ ಅಂತ ಹನುಮಂತಣ್ಣಗ ಹೇಳಾಕ ಶುರು ಮಾಡಿದ್ರಂತೆ. ವಾಷಿಂಗ್ ಮಶೀನ್ಯಾಗ ತೊಳಿಯೋದಾದ್ರ ಅವರಿಗ್ಯಾಕ ಕೊಡಬೇಕು ಅಂತಿದ್ರಂತೆ. ಆರು ತಿಂಗಳಾದ್ರು ಬ್ಯಾಕಿನ ಒಂದು ಕಂತಿನ ರೊಕ್ಕ ಆಗರಲಿಲ್ಲಂತೆ. ಮಕ್ಕಳು ನೋಡಿದರ ಇದ ಪಾಡೈತಿ ಜನ ಸ್ವಲ್ಪ ದಿನ ಹಂಗ ಬಿಡು ಅಂತಿದ್ರಂತೆ. ಹನುಮಂತಣ್ಣ ಸಣ್ ಮಕ ಮಾಡ್ಕಂಡು ಹೆಂಡತಿ ಮುಂದ ನಿಂತರ ಹೆಂಡತಿನೂ ಸೆರಗಿನ ಮರೆಯಾಗ ಕಣ್ಣೊರೆಸಿಕೊಂಡ್ಲಂತೆ. ಜನ ಸುಮ್ನಿರಬೇಕಲ್ಲ ಅಗಸನ ಮಕ್ಕಳು ಕತ್ತಿ ಆದ್ರು ಅಂತಿದ್ರಂತೆ.
ಆದರ ಅಸಹಾಯಕರಾದ ಗಂಡ ಹೆಂಡತಿ ಇಬ್ರು ಮಕ್ಕಳಿಗೆ ಹೆಂಗ ಅರ್ಥ ಮಾಡಿಸೊದಪ ಅನ್ನೋದಕ್ಕ ಬರೇ ಚಿಂತಿ ಮಾಡೋದ ಆತಂತೆ. ಕೈ ಕಟ್ಕೆಂಡು ಕುಂತರ ಕೆಲಸಾಗಂಗಿಲ್ಲ ಅಂದು ನೋಡಮಟ ನೋಡಿದ ಹನುಮಂತಣ್ಣ ಹೆಂಡತಿ ಕರ್ಕಂಡು ಎರಡು ಕತ್ತಿ ತಂದು ಬಟ್ಟೆ ಹಾಕೆಂಡು ತೊಳಿಯಾಕ ಹೋದ್ನಂತೆ.
ಕೃಪೆ: ಸಾಮಾಜಿಕ ಜಾಲತಾಣ (ಸೋಮು ಕುದರಿಹಾಳ)
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….