ಬೆಂಗಳೂರು, (ಸೆ.15): ತಮ್ಮ ಸರ್ಕಾರ ಉರುಳಿಸಿದವರ ಜೊತೆ ಕುಳಿತು ಈಗಿನ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುವ ಹಾಗೂ ಅವರನ್ನು ತಬ್ಬಿಕೊಳ್ಳುವ ದುಸ್ಥಿತಿ ಕುಮಾರಸ್ವಾಮಿಯವರದ್ದು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಸಭಾಂಗಣದಲ್ಲಿ ಶುಕ್ರವಾರ ಪದ್ಮನಾಭನಗರದ ವಿವಿಧ ಪಕ್ಷಗಳ ಮುಖಂಡರ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿ ಮತ್ತು ಜೆಡಿಎಸ್ ನವರು ಮೈತ್ರಿಯಾದರೂ ಮಾಡಿಕೊಳ್ಳಲಿ, ಏನನ್ನಾದರೂ ಜೋಡಿಸಿಕೊಳ್ಳಲಿ, ನಮಗೆ ಅದು ಸಂಬಂಧಪಟ್ಟಿಲ್ಲ ಎಂದರು.
ಈ ಬಗ್ಗೆ ಅನೇಕ ಜೆಡಿಎಸ್ ನಾಯಕರು, ಕಾರ್ಯಕರ್ತರನ್ನು ಕೇಳಿದೆ. ಅದಕ್ಕೆ ಅವರು ನಮ್ಮ ಸರ್ಕಾರ ಬೀಳಿಸಿದವರ ಹತ್ತಿರವೇ ಕುಮಾರಸ್ವಾಮಿ ಮತ್ತೆ ಏಕೆ ನೆಂಟಸ್ತನ ಪಕ್ಷದ ನೀತಿ ಏನು, ನಾವು ಕಾರ್ಯಕರ್ತರಿಗೆ ಏನು ಹೇಳುವುದು ಎಂದು ಕೇಳುತ್ತಿದ್ದಾರೆ ಎಂದು ಹೇಳಿದರು.
ಚುನಾವಣೆ ಮುಗಿದು 110 ದಿನಗಳಾದರೂ ಪ್ರತಿಪಕ್ಷ ನಾಯಕನನ್ನು ಬಿಜೆಪಿಗೆ ಆಯ್ಕೆ ಮಾಡಲು ಸಾಧ್ಯವಾಗಿಲ್ಲ. ಅವರವರ ಅನುಕೂಲಕ್ಕೆ ಬಿಜೆಪಿ- ಜೆಡಿಎಸ್ ರಾಜಕಾರಣ ಮಾಡುತ್ತಿವೆ. ದೊಡ್ಡ ನಾಯಕರು ಮೇಲಿರುತ್ತಾರೆ, ಕಾರ್ಯಕರ್ತರು ಹಾಗೂ ಮುಖಂಡರು ನೆಲದಲ್ಲೇ ಕುಳಿತಿರುತ್ತಾರೆ ಎಂದರು.
ಭಾರತ್ ಜೋಡೋ ಸಭಾಂಗಣದಲ್ಲಿ ಎಲ್ಲಾ ಮನಸ್ಸುಗಳು ಒಂದಾಗುತ್ತಿವೆ. ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬಾರದಂತೆ ಕಾಂಗ್ರೆಸ್ ಪಕ್ಷ ನಿಮ್ಮನ್ನು ನಡೆಸಿಕೊಳ್ಳುತ್ತದೆ. ತಾಳ್ಮೆಯಿಂದ ಇದ್ದರೆ ನಿಮಗೂ ಒಂದಲ್ಲ ಒಂದು ದಿನ ಸೂಕ್ತ ಸ್ಥಾನಮಾನ ದೊರೆಯುತ್ತದೆ. ಸಾಕಷ್ಟು ಸಮಿತಿಗಳು, ನಿಗಮ ಮಂಡಲಿಗಳು ಇವೆ. ಅವಸರ ಬೇಡ ಎಂದು ಹೇಳಿದರು.
2028ರಲ್ಲಿ ಪದ್ಮನಾಭನಗರ ವಿಧಾನಸಭೆ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆಯ್ಕೆಯಾಗುತ್ತಾರೆ ಎನ್ನುವ ಭರವಸೆಗೆ ಶುಕ್ರವಾರ ಶುಭದಿನ ಪೀಠಿಕೆಯಾಗಿದೆ. ವಿವಿಧ ಪಕ್ಷಗಳ ನಾಯಕರು ಕಾಂಗ್ರೆಸ್ ಪಕ್ಷ ಸೇರ್ಪಡೆಗೆ ವಿಶ್ವ ಪ್ರಜಾಪ್ರಭುತ್ವ ದಿನ ಸಾಕ್ಷಿಯಾಗಿದೆ ಎಂದ ಅವರು, ಸಂಘಟನೆ ಮಾಡುವುದು, ಪಕ್ಷ ಕಟ್ಟುವುದು ಅತ್ಯಂತ ಕಷ್ಟದ ಕೆಲಸ ಎಂಬುದು ನನಗೆ ಅರಿವಿಗೆ ಬಂದಿದೆ. ಇಂದು ಪಕ್ಷ ಸೇರಿದವರು ಬೆಂಗಳೂರು ಹಾಗೂ ಪದ್ಮನಾಭನಗರದ ದೊಡ್ಡ ಸಂಘಟನ ಶಕ್ತಿಗಳು ಎಂದು ಹೇಳಿದರು.
ಪದ್ಮನಾಭನಗರದಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲದೇ ಇದ್ದರೂ ಕಾರ್ಯಕರ್ತರು ಪಕ್ಷದ ಭಾವುಟ ಹಿಡಿದಿದ್ದಾರೆ. ಅವರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ ಕಾಂಗ್ರೆಸ್ ಪಕ್ಷ ಸೇರುವವರನ್ನು ತಡೆದರು, ಅಡ್ಡಿಪಡಿಸಿದರು. ಈಗ ಬಿಜೆಪಿಗೆ ಕಾರ್ಯಕರ್ತರು ನೆನಪಾಗುತ್ತಿದ್ದಾರೆ ಎಂದರು.
ಗ್ಯಾರಂಟಿಗಳು ಬಿಜೆಪಿಗೆ ಏಟು ಕೊಟ್ಟಿದೆ. ಗ್ಯಾರಂಟಿ ಯೋಜನೆಗಳಿಂದ ದೇಶ ದಿವಾಳಿಯಾಗುತ್ತದೆ ಎಂದು ಪ್ರಧಾನಿಗಳು ಹೇಳುತ್ತಿದ್ದರು. ಈಗ ಬಿಜೆಪಿ ಆಡಳಿತವಿರುವ ರಾಜ್ಯಗಳು ಕರ್ನಾಟಕ ಮಾದರಿಯನ್ನು ಅನುಸರಿಸುತ್ತಿವೆ. ಇಡೀ ದೇಶದಲ್ಲಿ ಯಾರೂ ನಮ್ಮಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲು ಆಗುವುದಿಲ್ಲ. ನಾವು ಅಧಿಕಾರದಲ್ಲಿ ಇರುವ ತನಕ ಈ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ತಿಳಿಸಿದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….